Saturday, May 3, 2014

ಹಳೇ ಕನಸು



'ಲೇ ಮಾದೇವಿ.. ಒಂದ್ ಸ್ವಲ್ಪ್ ಛಾ ಮಾಡಲಾ.. ' ಮಂಡಕ್ಕಿ ಡಬ್ಬಿಯನ್ನು ಅಟ್ಟದಿಂದ ಕೆಳಗಿಳಿಸುತ್ತ ಹೇಳಿದ ಶಿವಪ್ಪ.

ಸುಣ್ಣದ ಬಣ್ಣವ ಮರೆತ ನಾಲ್ಕು ಗೋಡೆಗಳು, ಅಲ್ಲಲ್ಲಿ ಮಣ್ಣಿನ ತೇಪೆಗಳು ಹಾಗು ಒಂದು ಬಾಗಿಲು, ಇಷ್ಟು ಬಿಟ್ಟು ಒಂದು ಕಿಟಕಿಯೂ  ಇಲ್ಲದ ಅತೀ ಸಾಧಾರಣ ಕೋಣೆ. ಕಟ್ಟಿಗೆಯ ಹಲಿಗೆಯನ್ನು ಅಟ್ಟವ ಮಾಡಿ ಅದರ ಮೇಲೆ ಬೆರಳೆಣಿಕೆಯಷ್ಟು ಆಕಾರಗೆಟ್ಟ ಅಲ್ಯೂಮಿನಿಯಂ ಡಬ್ಬಿಗಳಲ್ಲಿ ಇಡೀ ಸಂಸಾರವನ್ನು ಅವಿತಿಟ್ಟವಳು ಮಾದೇವಿ. ಅವಳು ಆರದಂತೆ ನೋಡಿಕೊಳ್ಳುತ್ತಿದ್ದ ವಲೆಯ ಬೆಂಕಿಯು ಆ ಪುಟ್ಟ ಕೋಣೆಯ ಜೀವದಂತೆ ಕಾಣುತ್ತಿತ್ತು. ಅದ್ಯಾವುದೋ ಕನಸಿನ ಬೆನ್ನು ಹತ್ತಿ ಹದಿನೈದು ವರ್ಷದ ಹಿಂದೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದ ಶಿವಪ್ಪ. ಸಧ್ಯಕ್ಕೆ ಒಂದು ಸಿಮೆಂಟ್ ಫ್ಯಾಕ್ಟರಿಯಲ್ಲಿ ದಿನಗೂಲಿಗೆ ಕೆಲಸ ಮಾಡುತ್ತಾ ತನ್ನ ಹೆಂಡತಿ, ಮಗುವಿನ ಜೊತೆ ಸಾಕಾರ ಬದುಕಾಗಿದ್ದ.

ಬಲಗೈ ಇಂದ ವಲಿ ಇದ್ದಿಲನ್ನು ಊದುಗೋಳಿಯಲ್ಲಿ ಆಡಿಸುತ್ತಾ, 'ಮಂಡಕ್ಕಿ ತಿಂತಿರ್ರಿ.. ವಲಿ ಮ್ಯಾಲೆ ಇಟ್ಟೀನಿ ಛಾ ಕ ' ಎಂದು ಹೇಳಿ ಮಂಡಕ್ಕಿಯನ್ನು ಹಾಕಿಕೊಳ್ಳಲು ಹಳೆ ಪೇಪರ್ ತುಂಡುಗಳನ್ನು ಶಿವಪ್ಪನತ್ತ ಸರಿಸಿದಳು ಮಾದೇವಿ. 

'ಯಪ್ಪಾ.. ನಾನು ತಿಂತೇನಿ ನಿನ್ ಕೂಡ ' ಶಿವಪ್ಪನ ಮಗ ಈರಣ್ಣ ಬಂದು ಅಪ್ಪನ ತೊಡೆಯ ಮೇಲೆ ಕುಳಿತ.

ಈರಪ್ಪನಿಗೆ ಏಳು ವರ್ಷ.ಮೂರೇ ಮೂರು ಬೇರೆ ಬೇರೆ ಬಣ್ಣಗಳ ಗುಂಡಿಯಿದ್ದ ದಿನಾ ತೊಡುವ ಅಂಗಿ, ಗುಂಡಿಯ ಅಭಾವದಿಂದ ತನ್ನ ಅಸ್ತಿತ್ತ್ವವನ್ನು ತೋರಿಸುತ್ತಿರುವ ಪುಟ್ಟ ಗುಣಗಡಿಗೆ, ಹಳದಿ ಉಡದಾರದಿಂದ ಬಿಗಿದ ನೀಲಿ ಚಡ್ಡಿಯನ್ನುತೊಟ್ಟ ಈರಣ್ಣ ನೋಡಲು ಥೇಟ್ ಅಪ್ಪನ ಹೋಲಿಕೆ. ಅವನ ಕಿವಿ ಮಾತ್ರ ಅವರಮ್ಮನ ಹಾಗೆ ಊರಗಲ ಆನೆ ಕಿವಿ ಎಂದು ಆಗಾಗ ಹೇಳಿ ನಗುತಿದ್ದ ಶಿವಪ್ಪ.

ಮಂಡಕ್ಕಿ ತಿನ್ನುತ್ತ ಅದರ ಕೆಳಗೆ ಹಾಸಿದ್ದ ಪೇಪರ್ ನತ್ತ ಬೊಟ್ಟು ಮಾಡಿ ಈರಣ್ಣ  'ಯಪ್ಪಾ.. ಇವಾ ಯಾರು? ಕೈಯಾಗ ಏನ ಹಿಡದಾನ??' ಎಂದು ಕೇಳಿದ.  

'ಅವ್ರು ಚಂದ್ರಶೇಖರ ಕಂಬಾರರು ಈರಣ್ಣ, ಜ್ಞಾನಪೀಠ ಪ್ರಶಸ್ತಿ ತಗೊಳಾಕತ್ತಾರ ' ಅದೇ ಫೋಟೋ ಕೆಳಗೆ ಬರೆದಿದ್ದನ್ನು ಓದಿ ಹೇಳಿದ ಶಿವಪ್ಪ.

'ಯಪ್ಪಾ ಪೇಪರ್ ಒಳಗ ಫೋಟೋ ಬರಬೇಕಂದ್ರ ಏನ್ ಮಾಡ್ಬೇಕು?'

'ಪೇಪರ್ ಒಳಗ ಹೆಸರು ಬರಬೇಕಂದ್ರ ಏನರ ಛೊಲೋ ಕೆಲಸ ಮಾಡಿರಬೇಕು ಇಲ್ಲಂದ್ರ ನಾಕ್ ಜನಕ್ಕ ಒಳ್ಳೇದು ಮಾಡಿರಬೇಕು'

'ಯಪ್ಪಾ ನೀನು ಛೊಲೋ ನ ಅದಿ.. ನಿನ್ನ ಫೋಟೋ ನು ಬಂದಿತ್ತೇನ್ ಪೇಪರ್ ಒಳಗ ಎಂದರೆ?'

ಮಗನ ಪ್ರತಿ ಪ್ರಶ್ನೆಗೆ ಸಾರ್ಥಕ ಶಾಲೆ ಆಗುತ್ತಿದ್ದ ಶಿವಪ್ಪ ಯಾಕೋ ಈ ಪ್ರಶ್ನೆಗೆ ಸುಮ್ಮನಾದ. ಏನೋ ಯೋಚಿಸಿ ಮತ್ತೆ ಹೇಳಿದ  'ಇಲ್ಲ ಈರಣ್ಣ ನಾ ಅಂಥಾ ಕೆಲಸ ಏನು ಮಾಡಿಲ್ಲ ಇಲ್ಲಿ ತನಕ. ನೀ ಓದಿ ದೊಡ್ದಾವ ಆದ್ರ ನಿಂದೂ ಬರತ್ತ ಹೆಸರು ಪೇಪರ್ ಒಳಗ '

'ನಿ ಬಶೀ ಒಳಗ ಹಾಕೊಂಡ್ ಕುಡಿ ಛಾ, ಅಪ್ಪನ ಗತೆ ಮಾಡಬ್ಯಾಡ ' ಇಬ್ಬರಿಗೂ ಛಾ ಕೊಡುತ್ತ ಈರಣ್ಣನಿಗೆ ಹೇಳಿದಳು ಮಾದೇವಿ.

ಸಂಜೆಯಾಯಿತು. ಹಸಿರು ಬಣ್ಣದ ಹಳೇ ಕಬ್ಬಿಣದ ಟ್ರಂಕ್ ಅನ್ನು ಹರಡಿಕೊಂಡು ಕುಂತಿದ್ದ ಶಿವಪ್ಪ. ಮಾದೇವಿಯ ವಲೆಯ ಹೊಗೆಯು ತೆರೆದ ಬಾಗಿಲಿನಿಂದ ಒಳ ಬರುತ್ತಿದ್ದ ಸಂಜೆಯ ಸೂರ್ಯನ ಕಿರಣಗಳನ್ನು ಪರೀಕ್ಷಿಸಿ ಮನೆಯೊಳಗೆ ಬಿಡುತ್ತಿತ್ತು. ಅದನ್ನು ಒಂದೇ ಗೈರು ಹಾಜರಿನ ದೃಷ್ಟಿಯಿಂದ ನೋಡುತ್ತ ಹಳೆ ನೆನಪುಗಳಲ್ಲಿ ಕಳೆದುಹೋಗುತ್ತಿದ್ದ ಶಿವಪ್ಪ.

'ಪೇಪರ್!!

'ಟ್ರಿನ್.. ಟ್ರಿನ್..... '

ಸೈಕಲ್ ಘಂಟೆಯನ್ನು ಬಾರಿಸುತ್ತ ಕೈಯಲ್ಲಿದ್ದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯನ್ನು ಹಳದಿ ಕಾಂಪೌಂಡ್ ಒಳಗೆ ಎಸೆಯುತ್ತ ಮುಂದೆ ಸಾಗಿದ ಶಿವೂ.

ಶಿವಪ್ಪನಿಗೆ ಆಗ ೧೪ ವರ್ಷ ವಯ್ಯಸ್ಸು. ಊರಲ್ಲಿನ ಶಾಲೆಯನ್ನು ಬಿಟ್ಟು ಬಂದು ಬೆಂಗಳೂರು ಸೇರಿದ್ದ. ಅಮ್ಮ ತೀರಿಕೊಂಡ ಮೇಲೆ ಅಪ್ಪ ಇನ್ನೊಂದು ಮದುವೆ ಆಗಿದ್ದ. ಆ ಮಲತಾಯಿಯ ದ್ವಂದ್ವ ಪ್ರೀತಿಯ ಮುಂದೆ ಸಂಕುಚಿತಗೊಂಡ ಮನಸು ಆಕಾಶವನ್ನು ಬಯಸಿತ್ತು. ಆ ವಯ್ಯಸ್ಸಲ್ಲೇ ಬರವಣಿಗೆಯನು ಮೈಗೂಡಿಸಿಕೊಂಡು  ಆಗಲೇ ಹಳ್ಳಿಯಲ್ಲಿ ಹೆಸರಾಗಿದ್ದ ಶಿವೂ. ಹೊಸ ಅವ್ವನ ಕಾಟ ತಾಳದೆ ನೇಕಾರ ಶಂಭಯ್ಯನ ಜೊತೆ ಸೇರಿ ಅಪ್ಪನಿಗೆ ಹೇಳಿಯೇ ಊರು ಬಿಟ್ಟಿದ್ದ. ಅವಳ ಆಚರಣೆಯನ್ನು ಕಂಡ ಅಪ್ಪನು ತಡೆಯದೇ ಮಗನನ್ನು ಬೀಳ್ಕೊಟ್ಟಿದ್ದ.

'ಏನ್ ಮರೀ.. ಪ್ರಜಾವಾಣಿ ಇದೆಯಾ?? ' ದಾರಿಯಲ್ಲಿ ಒಬ್ಬ ಕನ್ನಡಕ ಹಾಕಿದ ಅಂಕಲ್ ಕೇಳಿದರು.

'ಹುಂ ಸರ್! ಇದೇ.ಒಂದೂವರೆ ರುಪಾಯಿ' ಪೇಪರ್ ಕೊಟ್ಟು ದುಡ್ಡನ್ನು ತನ್ನ ಅಂಗಿಯ ಕಿಸೆಗೆ ಹಾಕಿ ಮತ್ತೆ ಸೈಕಲ್ ತುಳಿದ.

ಟ್ರಿನ್.. ಟ್ರಿನ್...

ಬಸವೇಶ್ವರ ನಗರದ ಒಂದು ಗಲ್ಲಿಯ ಪೇಪರ್ ಡೆಲಿವರಿ ಜವಾಬ್ದಾರಿ ಶಿವುನದಾಗಿತ್ತು. ಬೆಳಿಗ್ಗೆ ಐದು ಘಂಟೆಗೆ ಎಲ್ಲ ಪೇಪರ್ ಹೊಂದಿಸಿ, ತುಸು ಹೊತ್ತು ಅದರಲ್ಲಿನ ಸಮಾಚಾರಗಳಲ್ಲಿ ತಿಳಿದಷ್ಟು ಓದಿ ಆಮೇಲೆ ಪೇಪರ್ ಹಾಕಲು ಹೋಗುವುದು ರೂಢಿ. ವಿಜಯ ಕರ್ನಾಟಕದ 'ಆಣಿ ಮುತ್ತು ', ಟೈಮ್ಸ್ ಆಫ್ ಇಂಡಿಯಾ ದ 'ದಿ ಸ್ಪೀಕಿಂಗ್ ಟ್ರೀ ' ಉದಯವಾಣಿಯ ವಸಂತ ಶೆಟ್ಟಿ ಅಂಕಣಗಳು ಹೀಗೆ ಕೆಲವುಗಳನ್ನು ಓದುತ್ತಿದ್ದ.  

ಹಳ್ಳಿಯಲ್ಲಿನ ಚಿನ್ನೂರು ಮಾಸ್ತರರು 'ಛಂದ ಬರೀತಿಯಲ್ಲೋ ಶಿವೂ, ಪೇಪರ್ ನೊಳಗ ಹಾಕ್ಸೋಣ ತಡಿ ಒಮ್ಮೆ' ಅಂತ ಹೇಳಿದ್ದನ್ನು ದಿನವೂ ನೆನಪು ಮಾಡಿಕೊಳ್ಳುತ್ತಿದ್ದ. ೨೦೦ ರೂ ಮಾಶಾಸನ ಕೊಡುವ ಹಾಲು ಮಾರುವ ಕೆಲಸವನ್ನು ಬಿಟ್ಟು ೧೫೦ ರುಪಾಯಿ ಕೊಡುವ ಪೇಪರ್ ಹಾಕುವ ಕೆಲಸವನ್ನು ಮಾಡಲು ಕಾರಣವೂ ಇದೇ ಬರವಣಿಗೆಯ ಆಸಕ್ತಿ. ನಾನೂ ಒಂದಿನ ಲೇಖಕ ಆಗ್ತೀನಿ, ಪೇಪರ್ ಗಳಲ್ಲಿ ನನ್ನ ಅಂಕಣವೂ ಬರುತ್ತೆ ಎಂದುಕೊಳ್ಳುತ್ತಿದ್ದ. ಪೇಪರ್ ಹಾಕುವಾಗ ಸುತ್ತ ಮುತ್ತಲಿನ ಜನರನ್ನು ಗಮನಿಸುತ್ತಿದ್ದ, ಆ ವಯ್ಯಸ್ಸಿನಲ್ಲೇ ತನ್ನ ಬರವಣಿಗೆಗೆ ಬೇಕಾದ ಪಾತ್ರಗಳನ್ನೂ ತನಗರಿವಿಲ್ಲದಂತೆಯೇ ಹುಡುಕುತ್ತಿದ್ದನೇನೋ.

ದಿನಾ ಅದೇ ಜಾಗದಲ್ಲಿ ಪೇಪರ್ ಹಾಕುತ್ತಿದ್ದ ಕಾರಣ ಬಹಳ ಜನರ ಪರಿಚಯವೂ ಇತ್ತು. ಕೆಲವರ ಮುಖ ಪರಿಚಯ, ಕೆಲವರ ನಗು ಪರಿಚಯ, ಕೆಲವರ ಧ್ವನಿ ಪರಿಚಯ, ಇನ್ನೂ ಕೆಲವರ ಒಡನಾಟವೂ ಇತ್ತು. ರೂಫಿನ ಮನೆಯ ಅಂಕಲ್, ಹಳದಿ ಕಾಂಪೌಂಡ್ ಚೈತ್ರಕ್ಕ, ವಾಕಿಂಗ್ ಮೇಷ್ಟ್ರು, ಉದ್ದ ಸ್ವೇಟರಿನ ಮಿಲ್ಟ್ರಿ ಅಜ್ಜ, ಹೀಗೆ ಕೆಲ ಪರಿಚಯಗಳಿಗೆ ಹೆಸರುಗಳನ್ನಿಟ್ಟುಕೊಂಡಿದ್ದ. ದೊಡ್ಡ ಮನೆ ಆಂಟಿ ಮಾತ್ರ ತುಂಬಾ ಪ್ರೀತಿ, ಅವರು ದಿನಾಲು ಇವನನ್ನು ಮಾತನಾಡಿಸಿ ತಿನ್ನಲು ಏನಾದರು ತಿಂಡಿ ತಿನಿಸು ಕೊಡುತ್ತಿದ್ದರು. ನಿನ್ನೆ ಜಾಮೂನು ಮಾಡಿದ್ದೆ, ನಿಮ್ಮ ಅಂಕಲ್ ನಿನ್ನೆ ತಂದಿದ್ರು ಅಂತ ಬಿಸ್ಕೆಟ್, ಹೀಗೆ ಏನಾದರು ಕೊಡುತ್ತಲೇ ಇದ್ದರು. ಇಲ್ಲದ ಅವ್ವನ ಪ್ರೀತಿಯ ಕಿರುನೋಟವು ಕಂಡಂತೆ ಅಷ್ಟರಲ್ಲೇ ಖುಷಿಪಟ್ಟುಕೊಂಡು ದಿನಾಲು ದೊಡ್ಮನೆ ಆಂಟಿಯನ್ನು ಮಾತನಾಡಿಸಿಯೇ ಹೋಗುತ್ತಿದ್ದ ಶಿವೂ.

ಜನರನ್ನು ದೂರಂದಿಂದಲೇ ಗಮನಿಸುತ್ತಿದ್ದ ಶಿವಪ್ಪ ತನ್ನ ಕಲ್ಪನೆಗೆ ತಕ್ಕಂತೆ ಒಬ್ಬಬ್ಬರಿಗೂ ಒಂದ್ದೊಂದು ಕಥೆಯನ್ನು ತನ್ನ ಮನದಲ್ಲೇ ಹೊಂದಿಸಿಕೊಂಡಿದ್ದ. ವಾಕಿಂಗ್ ಅಂಕಲ್ ನಡ್ಕೊಂಡೆ ಹೋಗ್ತಾರೆ ಆದರೆ ಅವರ ಹೆಂಡತಿ ಕಾರ್ ನಲ್ಲಿ ಓಡಾಡ್ತಾರೆ, ನಮ್ಮ ಎರಡನೇ ಅಮ್ಮನ ಥರ ಇರ್ಬೇಕು ಆ ಆಂಟಿ. ಚೈತ್ರಕ್ಕ ಯಾವಾಗಲು ಓದ್ತಾ ಇರ್ತಾಳೆ, ಪಾಪ ಅವರಮ್ಮ ಆಡೋಕೆ ಬಿಡಲ್ಲ ಅನ್ಸತ್ತೆ ಅವಳನ್ನ. ದೊಡ್ಡ ಮನೆ ಆಂಟಿ ತುಂಬಾ ಒಳ್ಳೇವ್ರು, ಅವರ ಅಂಕಲ್ ಯಾವಾಗಲು ಕುಂತು ಪೇಪರ್ ಓದ್ತಾ ಇರ್ತಾರೆ ಪಾಪ ಕಾಲಿಗೆ ಏನಾದರೂ ಆಗಿರಬೇಕು. ಅವರ ನಾಯಿ ಬಡ್ಡಿ ಮಗಂದು ನನ್ನ ನೋಡಿ ಬೊಗಳುತ್ತೆ. ಹೀಗೆ ಕೆಲುವು ಊಹೆ ಗಳನ್ನ ಸಾಕಿದ್ದ . ಎಂಟನೇ ಮೇನ್ ನಲ್ಲಿನ ರಿಟೈರ್ಡ್ ಕಾಲೇಜ್ ಪ್ರೊಫೆಸರ್ ಪರಿಚಯವೂ ಹೇಗೋ ಆಗಿತ್ತು, ಅವರಿಗೆ ದಿನವೂ ತನ್ನ ಕವನ-ಕಥೆಗಳನ್ನ ಓದಿ ಹೇಳುತ್ತಿದ್ದ. ಅವರು ನಕ್ಕು ದುಬ್ಬ ಚಪ್ಪರಿಸಿ ಭಲೇ ಎಂದರೆ ಹಿರಿ ಹಿರಿ ಹಿಗ್ಗುತ್ತಿದ್ದ. ಅವರೂ ಇವನ ಬರವಣಿಗೆಗಳನ್ನು ಪತ್ರಿಕೆಯವರಿಗೆ ಪೋಸ್ಟ್ ಮಾಡಿಸುತ್ತಿದ್ದರು. ತನ್ನ ಹೆಸರು ಪತ್ರಿಕೆಯಲ್ಲಿ ಬಂದರೆ ಹಳ್ಳಿಯಲ್ಲಿನ ಅಪ್ಪ ಎಷ್ಟು ಖುಷಿಪಡುತ್ತಾನೆ, ಚಿನ್ನೂರು ಮಾಸ್ತರರು ಶಾಲೆಯಲ್ಲಿ ತನ್ನ ವರ್ಗದ ಎಲ್ಲರಿಗೂ ಓದಿ ಹೇಳುತ್ತಾರೆ, ಸತ್ತು ಸ್ವರಗದಲ್ಲಿದ್ದ ಅವ್ವ ಅಲ್ಲಿಂದಲೇ ಖುಷಿಯಲ್ಲಿ ಆಕಾಶದ ತುಂಬೆಲ್ಲ ಹರಡುತ್ತಾಳೆ.

ಆವತ್ತೊಂದಿನ ಎಂದಿನಂತೆ ಪೇಪರ್ ಹಾಕಲು ದೊಡ್ಡ ಮನೆ ಹತ್ತಿರ ಹೋದಾಗ ಸೈಕಲ್ ಘಂಟೆಯನ್ನು ಬಾರಿಸಿ ಆಂಟಿ ಬರುವುದನ್ನು ಕಾಯ್ದ. ಆಂಟಿ ಬರದೇ ಹೋದಾಗ ಕಾಂಪೌಂಡ್ ಒಳಗೆ ಮಲಗಿದ್ದ ನಾಯಿಯ ಮೇಲೆ ಪೇಪರ್ ಎಸೆದರೆ ಅದು ತನ್ನ ನೋಡಿ ಬೊಗಳಿ ಆ ಸದ್ದಿಗೆ ಆಂಟಿ ಬರಬಹುದು ಎಂದು ಯೋಜನೆ ಮಾಡಿ ಅದಕ್ಕೆ ಗುರಿ ಇಟ್ಟು ಜೋರಾಗಿ ಪೇಪರ್ ಎಸೆದ. ನಾಯಿ ಮಿಸುಗಲಿಲ್ಲ. ಹಾಂ?! ಇದೇನಪ್ಪ.. ಬಡ್ಡಿ ಮಗಂದು ಸುಮ್ನೆ ಇದೆ ಇವತ್ತು. ಎರಡು ನಿಮಿಷ  ಕಾದು ಸೈಕಲ್ ನಿಂದ ಕೆಳಗಿಳಿದ. ಆ ಮನೆಗೆ ಬರುವುದರೊಳಗೆ ಆಂಟಿ ಕೊಡುವ ತಿನಿಸುಗಳ ನೆನೆದು ತುಸು ಹೊಟ್ಟೆ ಹಸುವು ತಂತಾನೇ ಆಗಿರುತ್ತಿತ್ತು, ಅದೇ ಆಸೆಯಿಂದಲೋ ಅಥವಾ ಆಂಟಿ ಯನ್ನು ಮಾತನಾಡಿಸಿ ಹೋಗಬೇಕೆಂದೋ ನಾಯಿಯನ್ನು ನೋಡುತ್ತ ಅದರಿಂದ ದೊರವನ್ನು ಕಾಯ್ದು ಗೋಡೆ ಹಿಡಿದುಕೊಂಡು ಕಾಂಪೌಂಡ್ ಒಳಗೆ ಹೋಗಿ ಬಾಗಿಲು ಇಣುಕಿದ. ಯಾರೂ ಕಾಣಲಿಲ್ಲ. ಪಡಸಾಲಿ (ಡ್ರಾಯಿಂಗ್ ರೂಂ) ನಿಶಬ್ದವಾಗಿತ್ತು, ಮತ್ತೆ 'ಆಂಟಿ' ಎಂದು ಜೋರಾಗಿ ಕೂಗಿದ, ಅಷ್ಟೊತ್ತಿಗೆ ಅಲ್ಲಿದ್ದ ಫೋನ್ ರಿಂಗಣಗೊಂಡಿತು. ಆ ಸದ್ದಿಗೆ ಬರಬಹುದು!.. ಒಂದು ಸುತ್ತು ಕರೆದು ಫೋನ್ ಸುಮ್ಮನಾಯಿತು. ಅನುಮಾನ ಶುರುವಾಗಿ ಯಾರದರೂ ಬೈದರೂ ಪರವಾಗಿಲ್ಲ ಎಂದು ಪಡಸಾಲಿಯ ಒಳಗಡೆ ಹೋಗಿ ಆಂಟಿಯನ್ನು ಕೂಗುತ್ತಲೇ ರೂಂ ನತ್ತ ನಡೆದ. ರೂಂ ನಲ್ಲಿ ಬೆಡ್ ನ ಕೆಳಗೆ ನೋಡಿದರೇ ಆಂಟಿ!! ಅನಾಹುತವಾಗಿ ಬಿದ್ದಿದ್ದಾರೆ.. ಅವರ ಕತ್ತಿನಿಂದ ರಕ್ತ ಹರಿಯುತ್ತಿದೆ. ಅರ್ಧ ರೂಂ ನಲ್ಲಿ ಆಗಲೇ ರಕ್ತ ಹರಡಿದೆ. ಜೋರಾಗಿ ಕಿರುಚಿಕೊಂಡು ಅಲ್ಲಿ ಕ್ಷಣವೂ ನಿಲ್ಲಲಾಗದೆ ಶರವೇಗದಲ್ಲಿ ಹೊರ ಓಡಿಬಂದ. ಕಾಂಪೌಂಡ್ ಆಚೆ ನಿಂತು ಜೋರು ಜೋರಾಗಿ ಕಿರುಚಿ ವಿಚಿತ್ರವಾಗಿ ಅಳತೊಡಗಿದ.. ಮೈಯ್ಯೆಲ್ಲ ಗದ ಗದ ನಡುಗುತ್ತಿತ್ತು.

ಹದಿನೈದೇ ನಿಮಿಷದಲ್ಲಿ ದೊಡ್ಡ ಮನೆಯ ತುಂಬಾ ಜನಜಂಗುಳಿ. ಅದೆಷ್ಟೋ ಬಂಧುಗಳು, ಬೈಕ್, ಕಾರ್ ಗಳು, ಪೊಲೀಸರು, ಪತ್ರಿಕೆಯವರು, ಟಿವಿ ಚಾನೆಲ್ ನವರು ಸೇರಿದ್ದರು. ಪಕ್ಕದ ಮನೆಯ ರಾವ್ ಅಂಕಲ್ ಶಿವೂನನ್ನು ತಮ್ಮ ಮನೆಯೊಳಗೇ ಕೂರಿಸಿ ನೀರು, ಬಿಸ್ಕೆಟ್ ಅನ್ನು ಕೊಟ್ಟು ಸಮಾಧಾನ ಮಾಡುತ್ತಿದ್ದರು. ಆ ಕಿರಿ ವಯ್ಯಸ್ಸಿಗೆ ಜೀರ್ಣವಾಗದ ದೃಶ್ಯಕ್ಕೆ ಧೃತಿಗೆಟ್ಟು ಕಂಗಾಲಾದ ಶಿವೂ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ನೆರೆದ ಜನರೆಲ್ಲ ಬೊಟ್ಟು ಮಾಡಿ ಅದೇ ಹುಡುಗನಂತೆ ಮೊದಲು ನೋಡಿದ್ದು ಶಾರದಮ್ಮನವರನ್ನು  ಎಂದು ಪರಸ್ಪರ ಹೇಳಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಕೆಲ ಪತ್ರಿಕೆಯವರು ರಾವ್ ಅಂಕಲ್ ಸಹಾಯ ಕೇಳಿಬಂದು ಶಿವೂನನ್ನು ಮಾತನಾಡಿಸತೊಡಗಿದರು. ಹೆದರಿದ ಶಿವೂನನ್ನು ಆ ಮನೆಯ ಆಂಟಿ ಬೆವರು ವರೆಸುತ್ತ ಅವರಿಗೆ ಉತ್ತರಿಸುವಲ್ಲಿ ಸಹಕರಿಸುತ್ತಿದ್ದರು. ರಿಪೋರ್ಟರ್ ಗಳ  ಪ್ರಶ್ನೆಗಳಿಗೆ ನಡುಗುತ್ತಲೇ ತೋಚಿದಷ್ಟು ಉತ್ತರಿಸಿದ ಶಿವು. ಒಂದು ಘಂಟೆಯ ನಂತರ ಆ ಜನಜಂಗುಳಿ ಮಾಯವಾಯಿತು. ಅಲ್ಲಿ ನೆರೆದಿದ್ದ ಪೊಲೀಸರು ಸತ್ತು ಬಿದ್ದಿದ್ದ ಆ ದೊಡ್ಡ ಮನೆ ನಾಯಿಯನ್ನು ಸಾಗಿಸುತ್ತಿದ್ದಿದ್ದು ಕಿಟಕಿಯಿಂದ ಕಂಡ ಶಿವು. ಇವತ್ತು ಅದು ಯಾಕೆ ಬೊಗಳಲಿಲ್ಲ ಎಂದು ಆಗ ಅವನಿಗೆ ತಿಳಿಯಿತು. ಆನಂತರ ಶಿವೂನನ್ನು ತಕ್ಕ ಮಟ್ಟಿಗೆ ವಿಚಾರಿಸಿ ಪೊಲೀಸರು ತಮ್ಮ ಜೀಪಿನಲ್ಲೇ ಅವನನ್ನು ಶಂಭಯ್ಯನ ರೂಮಿಗೆ ತಂದು ಬಿಟ್ಟರು. ಅತ್ತು ಶಂಭಯ್ಯನ್ನನ್ನು ಅಪ್ಪಿಕೊಂಡ ಶಿವೂ. 

ಮರುದಿನ ಶಿವೂ ಪೇಪರ್ ಹಾಕಲು ಹೋಗಲಿಲ್ಲ, ಶಂಭಯ್ಯನ ನೇಯುವ ಕೆಲಸದಲ್ಲೇ ತುಸು ಸಹಾಯ ಮಾಡಿದ. ಆವತ್ತಿನ ಪೇಪರ್ ತಂದ ಶಂಭಯ್ಯ ಶಿವೂಗೆ ತೋರಿಸಿದ. ಪೇಪರ್ ಮೊದಲನೇ ಪುಟದ ಕೆಳಭಾಗದಲ್ಲಿ ದೊಡ್ಡ ಮನೆಯ ಫೋಟೋ ಇತ್ತು, ಅದರ ಮೂಲೆಯಲ್ಲಿ ಪಾಸ್ ಪೋರ್ಟ್ ಸೈಜ್ ನಲ್ಲಿ ಶಿವೂ ಫೋಟೋ ಸಹ ಇತ್ತು. 'ನಸುಕಿನಲ್ಲೇ ಭಾರಿ ದರೋಡೆ!' ಎಂದು ದೊಡ್ದಕ್ಷರದಲ್ಲಿ ಬರೆದಿತ್ತು. ಹಿಂದಿನ ಪುಟದಲ್ಲಿ ಹುಚ್ಚಿಯಂತೆ ಬಿದ್ದಿದ್ದ ಆಂಟಿಯ ಫೋಟೋ ಕಂಡು ಹೆದರಿದ ಶಿವು. 'ಲೇ ಶಿವು .. ಪೇಪರ್ ಒಳಗ ಹೆಸರು ಬರಬೇಕು ಅಂತ ಯಾವಾಗಲೂ ಅಂತಿದ್ದಿ ಲಾ.. ನೋಡ್ ಇವತ್ತ ಬಂದೆತಿ. ಫೋಟೋನೂ ಹಾಕ್ಯರ ಮಳ್ಳ-ಸೂಳೆಗಂಡ್ರು' ಅಂತ ಹೇಳಿ ನಕ್ಕ ಶಂಭಯ್ಯ. ನಗುಬಾರದೆ ಶಿವೂ ಆ ಪೇಪರ್ ಅನ್ನು ಬದಿಗೆ ಇಟ್ಟು ಶಂಭಯ್ಯನ ಹತ್ತಿರಕ್ಕೆ ಸರಿದ.ಶಿವೂನ ತಲೆ ಸವರಿ ಮತ್ತೆ ಹಗ್ಗ ನೇಯತೊಡಗಿದ ಶಂಭಯ್ಯ.

ಮಾದೇವಿಯ ಪಾತ್ರೆಗಳ ಸದ್ದಿಗೆ ಆ ಹಳೆಯ ಟ್ರಂಕ್ ನಿಂದ ಹೊರಬಂದ ಶಿವಪ್ಪನಿಗೆ ಅಂಗಳದಲ್ಲಿ ಆಡುತ್ತಿದ್ದ ಈರಣ್ಣನ ಸದ್ದು ಕೇಳಿತು. ಕೈಯ್ಯಲ್ಲಿ ಗಾಳಿಗೆ ತಿರುಗುವ ಬಣ್ಣದ ಚಕ್ರವ ಹಿಡಿದು ಓಡುತಿದ್ದ ಈರಣ್ಣ ಬಾಯಿಯಿಂದ ಸದ್ದು ಮಾಡುತಿದ್ದ...'ಜೀೕೕೕೕೕೕೕೕ......... 



ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...