Monday, November 27, 2017

ಸರಿ ದಾರಿ ಗೊತ್ತಿದ್ರೆ ಶಬ್ದ ಮಾಡಿ ದಾರಿ ಯಾಕೆ ಕೇಳ್ತೀರಿ?

  


ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತ ನಮ್ ಅಪ್ಪಾ ನಂಗೆ ಚಿಕ್ಕೋನಿದ್ದಾಗ ಬೈತಿದ್ರು. ಬರ್ತಾ ಬರ್ತಾ ರಾಯರು ಅಗಸ ಆದ್ರೆ ಕುದುರೆ ಕತ್ತೆನೇ ಆಗಬೇಕಲ್ವೇ? ಅಂತ ನಾನು ಮನಸಲ್ಲೇ ಉತ್ತರ ಕೊಡ್ತಿದ್ದೆ, ಜೋರಾಗಿ ಕೊಟ್ರೆ ಚಪ್ಪಲಿ ಏಟು ಗ್ಯಾರಂಟಿ ಅಂತ ಗೊತ್ತಿತ್ತು. ಈ ಒಂದು ಗಂಭೀರವಾದ ಚೈಲ್ಡ್-ಹುಡ್ ಚಿಚೇಸನ್ ಈ ಹೊತ್ತಲ್ಲಿ ಯಾಕಪ್ಪ ನೆನಪಾಗಿದ್ದು ಅಂತಂದ್ರೆ ನಿನ್ನೆ ಆಫೀಸ್ ಗೆ ಹೋಗೋವಾಗ ರಸ್ತೆಯಲ್ಲಿ ಆದ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ. ರೋಡಲ್ಲಿ ಇತ್ಲಾಕಡೆ ಎರಡು ಕತ್ತೆ ನಿಂತಿದ್ದಕ್ಕೆ ಹೆವೀ ಟ್ರಾಫಿಕ್  ಜಾಮ್.  ಕತ್ತೆಗಳ ಮುಂದೆ ನಿಂತು ಎಷ್ಟ್ ಬಡಕೊಂಡ್ರು ಅವು  ಕ್ಯಾ ರೇ ಅನ್ಲಿಲ್ಲ, ಇತ್ಲಾಕಡೆ ಇಂದ ಹೋಗೋಣ ಅಂತಂದ್ರೆ ಇಲ್ಲಿ ಎರಡು ಮನುಷ್ಯ-ಕತ್ತೆಗಳು ತಮ್ಮ ಕಾರ್ ಅನ್ನು ಅರ್ಧ ರೋಡ್ ಮುಚ್ಚೋ ಹಂಗೆ ಪಾರ್ಕ್ ಮಾಡಿ ಹೋಗಿವೆ. ಇದೆಲ್ಲದರ ನಡುವೆ ಸಿಕ್ಕಿ ರೇಗಿ ಬೊಗಳುವ ನಾಯಿಗಳ (ಹಾರ್ನ್ ಹಾಕುವ ಮನುಷ್ಯರು ಎಂದು ಓದಿ) ಪಾಡು ದೇವರೇ ಬಲ್ಲ. ಈ ಸೀನ್ ನಲ್ಲಿ ಕತ್ತೆ ಯಾರು, ಮನುಷ್ಯ ಯಾರು, ನಾಯಿ ಯಾರು ಅಂತ ಕಕ್ಕಾಬಿಕ್ಕಿಯಾಗಿ ಮಾನವ ವಿಕಸನವೇ ಒಂದು ಭ್ರಮೆ ಅಂತ ಅನಿಸಿಹೋಗಿತ್ತು. ಕಡೆಗೆ ಕತ್ತೆಗಳೇ  ಅರ್ಥ ಮಾಡಿಕೊಂಡು  ಜಾಗ ಮಾಡಿಕೊಟ್ಟವೇ ವಿನಃ ಆ ಪಾರ್ಕ್ ಆಗಿದ್ದ ಕಾರ್ ಗಳಾಗಲಿ, ಒಬ್ಬರ ಮೇಲೊಬ್ಬರು ಹಾರ್ನ್ ಮಾಡಿ, ಬೊಗಳಿ ಕಿರುಚಾಡಿದ ಡ್ರೈವರ್ ಗಳಾಗಲಿ ಹಿಂದೇಟು ಹಾಕಲಿಲ್ಲ. ಹೆಂಗೋ ಸರ್ಕಸ್ ಮಾಡಿ ಆಫೀಸಿಗೆ ಬಂದು ಮುಟ್ಟಿದ ನಮ್ಮ ಧೀರ ಶೂರ ಡ್ರೈವರ್.  ಬರ್ತಾ ಬರ್ತಾ ಬೆಂಗಳೂರಿನ ಟ್ರಾಫಿಕ್ ಹದಗೆಟ್ಟು ಹೋಯ್ತು ಅಂತ ಕ್ಯಾಬ್ ನಲ್ಲೊಬ್ರು ಹೇಳಿದಾಗ ಅನಿಸ್ತು,  ಬೆಂಗಳೂರಿಗರು ಹದ ಬಿಟ್ಟರಲ್ಲವೇ, ಬೆಂಗಳೂರು ಹದಗೆಡುವುದು ಅಂತ. 

ವೈದ್ಯರು ಸಿಗದೇ ಪೇಷಂಟ್ ಗಳು ಸಾಯ್ತಾ ಇದಾರೆ, ಆಫ್ರಿಕಾದಲ್ಲಿ ತಿನ್ನೋಕೆ ಊಟ ಇಲ್ಲ, ಡೆಲ್ಲಿಯಲ್ಲಿ ಉಸಿರಾಡೋಕೆ ಆಕ್ಸಿಜನ್ ನೇ ಇಲ್ಲ.. ಅಂಥದ್ರಲ್ಲಿ ಟ್ರಾಫಿಕ್ಕು, ಜಾಮು, ರೋಡು ಅಂತ ಬಡ್ಕೊಳೋ ನಾನು, ತಿನ್ನೋಕೆ ಬಾಯಿ ಇಲ್ಲ ಅಂತ ದುಃಖ ಪಡೋರ ಮುಂದೆ ಸೇದೋಕೆ ಒಳ್ಳೆ ಸಿಗರೇಟ್ ಸಿಗ್ತಿಲ್ಲ ಅಂತ ಅಳ್ತಾ ಇರೋನಂಗೆ ಕಾಣಿಸಬಹುದು. ಆದರೆ ಒಮ್ಮೊಮ್ಮೆ ಇಂಥ ಸಮಸ್ಯೆಗಳೇ ಬೆಳೆದು ದೊಡ್ಡವಾಗೋದು, ಸೈಲೆಂಟ್ ಕಿಲ್ಲರ್ ಗಳ ಥರ ಗೊತ್ತಿಲ್ಲದೇ ಹಾನಿ ಮಾಡುವ ವಿಷಯಗಳಿವು. ಒಂದು ಹೇಳ್ತಿನಿ, ಮನುಷ್ಯ ಮತ್ತು ಪ್ರಾಣಿಗಳಿಗೆ ಇರೋ ತುಂಬಾ ದೊಡ್ಡ ವ್ಯತ್ಯಾಸ ಕಾಮನ್ ಸೆನ್ಸ್! ಇದೇ ಕಾಮನ್ ಸೆನ್ಸ್ ನಿಂದ  ಮನುಷ್ಯ ಪ್ರಾಣಿಗಳಿಗಿಂತ ಸ್ವಲ್ಪ ಹೊರತಾಗಿ, ನಾಗರೀಕನಾಗಿ ಕಾಣಸ್ತಾನೆ. ಹಸು ಬಾಯಲ್ಲಿ ತಿಂದ್ರೆ ಮನುಷ್ಯ ಸ್ಪೂನ್ ನಲ್ಲಿ ತಿಂತಾನೆ, ನಾಯಿಗಳು ರೋಡಲ್ಲಿ ಮಾಡಿದ್ರೆ ಮನುಷ್ಯ ಯಾರಿಗೂ ಕಾಣಿಸದಂಗೆ ಮಾಡ್ತಾನೆ, ಕಾಗೆಗಳು ಹಂಚಿಕೊಂಡು ತಿಂದ್ರೆ ಮನುಷ್ಯ ಐ.ಟಿ ರೇಡ್ ಆಗೋವರೆಗೂ ಕೂಡಿಡ್ತಾನೆ..  ಇತ್ಯಾದಿ. ಈ ಕಾಮನ್ ಸೆನ್ಸ್ ಈಗೀಗ ಮನುಷ್ಯನಲ್ಲಿ ಅಷ್ಟು ಕಾಮನ್ ಆಗಿ ಕಾಣಿಸುತ್ತಿಲ್ಲ ಅನ್ನೋದೇ ವ್ಯಂಗ್ಯ, ಕಾಮನ್ ಸೆನ್ಸ್ ಕಡಿಮೆ ಆಗಿ ಮನುಷ್ಯನಿಗೂ, ಪ್ರಾಣಿಗಳಿಗೂ ವ್ಯತ್ಯಾಸದ ಗೆರೆ ಮಬ್ಬಾಗಿ ಹೋಗುತ್ತಿದೆ. ಕೆಲ ಸಮಯದ ನಂತರ ಇವನು ಮನುಷ್ಯ, ಇದು ಪ್ರಾಣಿ ಅನ್ನೋಕೆ ಪುರಾವೆಗಳೇ ಇಲ್ಲದಂತಾಗಬಹುದು, ಆಗ ಗೊತ್ತಿರದೇ ತಪ್ಪು ಮಾಡುವುದು ಪ್ರಾಣಿಗಳು, ಗೊತ್ತಿದ್ದೂ ತಪ್ಪು ಮಾಡುವವನು ಮಾನವ ಅನ್ನುವ ಒಂದೇ ಒಂದು ಬೈಫರ್ಕೆಶನ್ ಉಳಿದುಹೋಗುತ್ತದೆ. ಈ ಕಾಮನ್ ಸೆನ್ಸ್ ಅಂತಂದ್ರೆ ತುಂಬಾ ದೊಡ್ಡ ಕೊಡೆ, ಅದರಡಿ ಬಹಳಷ್ಟು ವಿಚಾರಗಳು ಇವೆ, ನಾನು ಹೇಳ ಹೊರಟಿರೋದು ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಕಾಣುವ ಒಂದು ಬಹುದೊಡ್ಡ ಮೂರ್ಖತನದ ಬಗ್ಗೆ, ಅದುವೇ ಹಾರ್ನ್ ಮಾಡುವ ಚಟ! ಇದರಿಂದ ಆಗುವ ಕಿರಿಕಿರಿ, ಅಸಹ್ಯ, ಹಿಂಸೆಗಳು ಯಾವ ದೊಡ್ಡ ಗ್ಲೋಬಲ್ ವಾರ್ಮಿಂಗ್  ಗಿಂತ ಏನು ಕಮ್ಮಿ ಇಲ್ಲ ಅನ್ನುವುದು ಬುರುಡೆದಾಸನ ಉವಾಚ, ಕೇಳ್ಕಳಿ.

ದೇವರು ಕೊಟ್ಟ ಕಣ್ಣುಗಳಿಗೆ ರಸ್ತೆಯುದ್ದಕ್ಕೂ ಆದ ಟ್ರಾಫಿಕ್ ಜಾಮ್ ಕಾಣಿಸುತ್ತಿರುತ್ತದೆ, ಜನ ಅಸಹಾಯಕರಾಗಿ ಕಾಯುತ್ತ ನಿಂತಿರುತ್ತಾರೆ, ಎಲ್ಲರಿಗೂ ಮನೆಗೆ-ಕೆಲಸಕ್ಕೆ ಹೋಗುವ ಅವಸರವೇ, ಯಾರಿಗೂ ರೋಡಲ್ಲೇ ಇರುವ ವಿಚಾರವಿಲ್ಲ, ಆದರೂ ಹಾರ್ನ್ ಮಾಡಿ ಸಾಯುವವರು ನಮ್ಮಲ್ಲಿ ಎಷ್ಟು ಜನರಿಲ್ಲ. ಟ್ರಾಫಿಕ್ ಸಿಗ್ನಲ್ ನಲ್ಲಿ ಎಲ್ಲರೂ ಹಸಿರು ಬಿದ್ದರೆ ಹೋಗಲೆಂದೇ ನಿಂತಿರುತ್ತಾರೆ, ಯಾರಿಗೂ ಸಿಗ್ನಲ್ ನಲ್ಲಿ ನಿಲ್ಲುವ ಹಪಾಪಿಯಿಲ್ಲ, ಅಷ್ಟಾಗಿಯೂ ಸಿಗ್ನಲ್ ಬಿಡುವ ಮುನ್ನವೇ ಹಾಂಕಿಂಗ್ ಶುರು! ಆಂಬುಲೆನ್ಸ್ ಶಬ್ದ ಮಾಡಿಕೊಂಡೇ ಬರುವುದು, ಜಗತ್ತಿಗೇ ಅದು ಕೇಳಿಸಿದರೂ ಅದಕ್ಕೆ ಅಡ್ಡ ನಿಂತು ಮುಂದಿನವಗೆ ಹಾರ್ನ್ ಮಾಡಿ ಸೈಡ್ ಬಿಡು ಅಂತ ಹೇಳುವರು ಎಷ್ಟಿಲ್ಲ, ಎಲ್ಲರೂ ಹಾರ್ನ್ ಮಾಡಿ ಮಾಡಿ ಕಡೆಗೆ ಆಂಬುಲೆನ್ಸ್ ಶಬ್ದವೇ ಕೇಳದಂತಾಗುತ್ತದೆ. ವಯ್ಯಸ್ಸಾದವರು ಅಡ್ಡ ಬಂದರೆ ಹಾರ್ನ್, ಟರ್ನಿಂಗ್ ಬಂದರೆ ಹಾರ್ನ್, ಹಸು ಅಡ್ಡ ನಿಂತರೆ ಹಾರ್ನ್, ಕಲ್ಲು ಅಡ್ಡ ಸಿಕ್ಕರೂ ಹಾರ್ನ್. ಉಸಿರು ಎಳೆದರೆ ಹಾರ್ನ್, ಉಸಿರು ಬಿಟ್ಟರೆ ಹಾರ್ನ್!! ಅಬ್ಬಬ್ಬಾ! ಯಾಕಿಷ್ಟು ಬಡ್ಕೊಳೋದು ನಾವು?? ಯಾಕೆ ಇಷ್ಟು ಹೆದರಿಕೆ, ಸಿಟ್ಟು, ಅವಸರ ನಮಗೆ? ತಲೇಲಿ ಏನೇ ವಿಷಯ ಇದ್ದರೂ, ಕಣ್ಣ ಮುಂದೆ ಏನೇ ಕಂಡರೂ ನಮ್ಮ ಕೈ ಹೋಗೋದು ಹಾರ್ನ್ ಬಟನ್ ಗೆ, ನಮ್ಮ ಮೆದುಳಿನಲ್ಲಿ ಅದ್ಹೇಗೆ ಈ ಅಭ್ಯಾಸ ಪ್ರೋಗ್ರಾಮ್ ಆಗಿದ್ದು?  ಕರ್ಕಶವಾಗಿ, ಅಷ್ಟು ಜೋರಾಗಿ ಶಬ್ದ ಮಾಡಿ ನಮಗೆ ಹೇಳಬೇಕಾದದ್ದೇನು ಇದೆ? ತುಸು ತಾಳ್ಮೆ, ಶಿಸ್ತಿನಿಂದ ಹೇಳಿದರೆ ಆಗದೇ? ಇಷ್ಟು ಇನ್ಸೆಕ್ಯೂರಿಟಿ ಯಾಕೆ ನಮಗೆ? ಹೌದು! ಯೋಚಿಸಿ ನೋಡಿದರೆ ಹಾರ್ನ್ ಮಾಡುವಾಗ, ಹಾರ್ನ್ ಮಾಡುವವನು ಆ ಕ್ಷಣಕ್ಕೆ ಮಾನಸಿಕವಾಗಿ ಇನ್ಸೆಕ್ಯೂರ್ಡ್ ಫೀಲ್ ಮಾಡುತ್ತಾ ಇರುತ್ತಾನೆ, ಅಭದ್ರ ಭಾವದಿಂದ ಏನು ಮಾಡಲೆಂದು ತೋಚದೇ ಕೈ ಹಾರ್ನ್ ಬಟನ್ ಗೆ ಹೋಗುತ್ತದೆ, ಆ ಕರ್ಕಶ ಶಬ್ದದಿಂದ ಅವನಿಗೇನೋ ಒಂದು ಸಮಾಧಾನ. ಸಮಸ್ಯೆ ಬಗೆ ಹರಿಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕ್ಷಣಕ್ಕೆ ಆ 'ಹಾರ್ನಿಗ' ತನ್ನ ಶಬ್ದವನ್ನ ಮಾಡಿ ವಿರಾಳನಾಗುತ್ತಾನೆ. ಇದೊಂಥರ ಡ್ರಗ್ಸ್ ಸೇವಿಸಿದಂಗೆ, ಎಲ್ಲದಕ್ಕೂ ಡ್ರಗ್ಸ್ ಸೇವನೆಯೇ ಉತ್ತರ ಅಂತ ತಿಳಿದು ಅದಕ್ಕೆ ಅಡಿಕ್ಟ್ ಆಗೋ ಡ್ರಗ್ ಅಡ್ದಿಕ್ಟ್ಸ್ ಗಳ ಹಾಗೆ ರಸ್ತೆ ಮೇಲಿರೋ ಕಲ್ಲು, ಮಣ್ಣು, ನಾಯಿ, ನರಿ, ಕಾರುಗಳಿಗೂ ಹಾರ್ನ್ ಒಂದೇ ಉತ್ತರ ಅಂತ ಅಡಿಕ್ಟ್ ಆಗಿರುವುದು. ತನ್ನ ಡ್ರೈವಿಂಗ್ ನ ಮೇಲೆ ಪೂರ್ತಿ ನಂಬಿಕೆ ಇರುವವ ಜಾಸ್ತಿ ಹಾರ್ನ್ ಮಾಡುವುದಿಲ್ಲ, ಅರ್ಧ-ಮರ್ಧ  ಡ್ರೈವಿಂಗ್ ಮಾಡಿಕೊಂಡು ಹೆದರುತ್ತ ಓಡಿಸುವವನೇ ಜಾಸ್ತಿ ಶಬ್ದ ಮಾಡುವುದು, ಮಾನಸಿಕವಾಗಿ ಅನ್ಸ್ಟೇಬಲ್ ಆಗಿ ತನ್ನ ಮೇಲಿನ ಕಂಟ್ರೋಲ್ ತಾನೇ ಕಳೆದುಕೊಳ್ಳುವವ ರಸ್ತೆ ಮೇಲೆ ಎಲ್ಲರನ್ನೂ ಬೈದುಕೊಂಡು, ಹಾರ್ನ್ ಮಾಡಿಕೊಂಡುಸಾಗುವವರು ಬೆಂಗಳೂರಿನಲ್ಲಿ ಲಕ್ಷದಷ್ಟು. ನಮ್ಮ ಕ್ಯಾಬ್ ಡ್ರೈವರ್ ನ ಹತ್ರ ಮೂರು ಬಗೆಯ ಹಾರ್ನ್ ಗಳಿವೆ, ಅವನಿಗೆ ಅದು ಪ್ರತಿಷ್ಠೆಯ ವಿಷಯ, 'ಸಾರ್! ಇದು ನೋಡಿ ಸಾರ್ ಈಗ, ಹೆಂಗೆ ಸೈಡ್ ಹೋಗ್ತಾರೆ ನನ್ ಮಕ್ಳು' ಅಂತ ನಗಾಡಿಕೊಂಡೇ ಶ್ರಿಲ್ ಹಾರ್ನ್ ಮಾಡಿ ಜನರನ್ನು ಬೆಚ್ಚಿ ಬೀಳಿಸುತ್ತಾನೆ. ನಿದ್ದೆಯಲ್ಲಿದ್ದ ಎಲ್ಲ ಎಂಪ್ಲಾಯೀ ಗಳು ಸಹ ಶಬ್ದಕ್ಕೆ ಬೆಚ್ಚಿ ಎಚ್ಚರವಾಗುತ್ತಾರೆ. ಅಪ್ಪಾ! ಆ ಹಾರ್ನ್ ಮಾಡಬೇಡ, ಸ್ವಲ್ಪ ತಾಳ್ಮೆಯಿಂದ ನೋಡಿಕೊಂಡು ಹೋಗು, ಐದು ನಿಮಿಷಾ ಲೇಟ್ ಆದ್ರೆ ಏನಾಗುವುದಿಲ್ಲ ಅಂತ ನಾವು ಹೇಳಿದರೆ, ಸಾರ್ ಹಂಗಾದ್ರೆ ನೀವು ಮನೆ ಮುಟ್ಟಿದಂಗೆ ಸುಮ್ನಿರಿ ಅಂತ ಹೇಳಿ ನಗ್ತಾನೆ, ಕಿವಿಯಿರದ ವಾದ್ಯಕ್ಕೆ ಹಾಡಿದ್ದೆಲ್ಲ ಸೊಗಡು ಅಂತಾ ಸುಮ್ಮನಾದೆವು. ಈ ಹಾರ್ನ್ ಬಳಕೆಯ ಬಗ್ಗೆಯೇ ಕಂಪನಿಯ ಸಾರಿಗೆ ಇಲಾಖೆಗೆ ದೂರು ನೀಡಿ ನೋಡಿದ್ವಿ, ಹೇಳ್ತಿವಿ, ಮಾಡ್ತಿವಿ ಅಂತ ಹೇಳಿ ನಿರ್ಲಕ್ಷಿಸಿದರೇ ವಿನಃ ಅದನ್ನ ಅಡ್ರೆಸ್ ಮಾಡಲಿಲ್ಲ. ಸಾವಿರ ದೂರುಗಳಿವೆ ಸಾರ್, ಇದೂ ಒಂದು ಮ್ಯಾಟರ್ ನಾ? ಅಂತ ಒಬ್ಬ ಇಲಾಖೆಯ ಮೆಂಬರ್ ಹೇಳಿದ್ದನ್ನು ಕೇಳಿ ಮಾತೇ ಬರಲಿಲ್ಲ.                 

ಹೊರದೇಶಗಳಲ್ಲಿ ಹಾರ್ನ್ ಪದ್ಧತಿ ತೀರಾ ವಿರಳ, ತುಂಬಾ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಹಾರ್ನ್ ಮಾಡಿ ಸಂಪರ್ಕಿಸಲಾಗುತ್ತದೆ. ವಿದೇಶಿಯರು ಭಾರತಕ್ಕೆ ಬಂದು ಹೋದರೆ ಅವರು ಭಾರತದ ಬಗ್ಗೆ ಮಾಡುವ ಎಲ್ಲಕಿಂತ ದೊಡ್ಡ ದೂರೆಂದರೆ ನಮ್ಮ ಜನರ 'ಹಾರ್ನ್ ಮಾಫಿಯಾ' ಬಗ್ಗೆಯೇ. ಇಡೀ ಜಗತ್ತಿಗೆ ಶಾಂತಿ ಸಂದೇಶ ನೀಡಿದ ಭಾರತದ ಮಕ್ಕಳೇ ಈ ಲೆವೆಲ್ ಗೆ ಹಾರ್ನ್ ಮಾಡಿ ಸಾಯ್ತಾರಲ್ಲ ಅಂತ ಒಬ್ರು ಯಾರೋ ಕೇಳಿದ್ರೆ, ದೇಶಕ್ಕೆ ತಂದೆ ಆದೋರು ಸ್ವಂತ ಮಗನಿಗೆ ಆಗಲ್ಲಿಲ್ಲ, ಮೇಷ್ಟ್ರ ಮಕ್ಕಳೇ ಬನ್ನಿ ಪೋಲಿಗಳಾಗೋದು ಅಂತ ಉತ್ತರ ಕೊಟ್ರಂತೆ, ಹಂಗಾಯ್ತು ಕಥೆ. ಕೆಲ ಕಡೆ ಹಾರ್ನ್ ಅನ್ನು ಅಫೆನ್ಸಿವ್ ಆಗಿ ನೋಡಲಾಗುತ್ತದೆ, ಯಾರಾದರೂ ಹಾರ್ನ್ ಮಾಡಿದರೆ ಅದು ಯಾರದ್ದೋ ತಪ್ಪಿನಿಂದ ಎಂದು ಅಸಹ್ಯವಾಗಿ ಕಾಣಲಾಗುತ್ತದೆ , ಒಬ್ಬನಿಗೆ ಹಾರ್ನ್ ಮಾಡಿದರೆ ಅವನು ಹಾರ್ನ್ ಮಾಡಿದವಗೆ ಕ್ಷಮೆ ಕೇಳುವಷ್ಟು ನಾಗರೀಕತೆ. ನಮ್ಮಲ್ಲಿ ಹಾರ್ನ್ ಎನ್ನುವುದು ತೀರಾ ಸಾಮಾನ್ಯವಾದ ವಿಷಯ, ನಮ್ಮಲ್ಲಿ ನಾಗರೀಕತೆ, ಶಿಸ್ತು, ಗೌರವಗಳು ಅಷ್ಟು ಆ-ಸಾಮಾನ್ಯ! ನಮ್ಮ ಮುಂದೆ ಒಬ್ಬ ನಿಂತಿದ್ದಾನೆ ಅಂತಾದರೆ ಅವನೂ ಸಹ ಸ್ಟಕ್ ಆಗಿರಬಹುದು, ತಿಳಿದುಕೊಳ್ಳೋಣ ಅಂತಾಗಲಿ, ಸಿಗ್ನಲ್ ಬಿಟ್ಟ ಮೇಲೆ ಎಲ್ಲರೂ ಹೋಗೋದೇ, ಎರಡು ಸೆಕೆಂಡ್ ಕಾಯೋಣ ಅಂತಾಗಲಿ, ಹಾಸ್ಪಿಟಲ್ ಗಳು, ಸ್ಕೂಲ್ ಗಳು, ಮಾರ್ಕೆಟ್ ಗಳು ಇದ್ದಲ್ಲೆಲ್ಲ ಹಾರ್ನ್ ಹಾಕದೇ ಟ್ರಾಫಿಕ್ ಅನ್ನು ಅರ್ಥ ಮಾಡಿಕೊಂಡು ಹೋಗೋದಾಗಲಿ ನಾವು ಕಲಿಯಬೇಕಿದೆ. ಎಲ್ಲ ಕುರಿಗಳೂ ಬ್ಯಾ ಅಂದಾಗ ನಂದೂ ಒಂದಿರಲಿ ಅಂತ ಬ್ಯಾ ಅನ್ನೋ ಡ್ರೈವರ್ ಗಾಲೆ ಊರಲ್ಲಿ. ಸಿಕ್ಕಾಪಟ್ಟೆ ಸದ್ದು ಮಾಡುವ 'ಶ್ರಿಲ್ ಹಾರ್ನ್' ಗಳನ್ನ ಪೊಲೀಸರು ಬ್ಯಾನ್ ಮಾಡಿದರೂ ಸಹ ಅದನ್ನೇ ಗಾಡಿಗೆ ಸಿಕ್ಕಿಸಿಕೊಂಡು ಎಲ್ಲರಿಗಿಂತ ಜಾಸ್ತಿ ನಾನು ಒದರುತ್ತೇನೆ ಅಂತ ಬರ್ತಾರೆ, ಬೈಕ್ ಗಳಿಗೆ ಯಾವುದ್ಯಾವುದೋ ಎಂಜಿನ್ ಸೌಂಡ್  ಹಾಕಿಸಿ ನಡುರಾತ್ರಿಗಳಲ್ಲಿ ಗರ್! ಅಂತ ಹೋಗ್ತಾರೆ, ಪ್ಯಾಸೆಂಜರ್ ಟೆಂಪೋ-ವ್ಯಾನ್ ಗಳಲ್ಲಿ ಬೋಸ್ ಸ್ಪೀಕರ್ ಗಳಲ್ಲಿ ಜೋರಾಗಿ  ಹಾಡುಗಳನ್ನ ಹಾಕೊಂಡು ಹಿಂದೆ ಬಡಿದುಕೊಳುವವನ ಶಬ್ದ ಕೇಳದೇ  ಜೋರಾಗಿ ಮುಂದಿನವಗೆ ಹಾರ್ನ್ ಮಾಡುತ್ತಾರೆ, ಸಿಟ್ಟಿಗೂ ಹಾರ್ನ್ , ಲಿಫ್ಟಿಗೂ ಹಾರ್ನ್. ದೇವರು ಒಂದಿನ ಬೆಂಗಳೂರಿನ ಎಲ್ಲ  ಗಾಡಿಗಳ ಹಾರ್ನ್ ಗಳನ್ನೂ ಆಫ್ ಮಾಡಿದ್ದೇ ಆದರೆ ಈ ಹಾರ್ನ್ ಅಡಿಕ್ಟ್ ಗಳೆಲ್ಲ ಬೋರ್ ಆಗಿಯೇ ಸತ್ತು ಹೋಗುತ್ತಾರಾ ಅಂತ?

ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ ಅಂತ ಬಡ್ಕೊಳೋ ಸರ್ಕಾರ ಈ ಸಮಸ್ಯೆಯ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿದ್ದರೆ ಒಳ್ಳೇದಿತ್ತು, ಟ್ರಾಫಿಕ್ ಪೇದೆಗಳಿಗೆ ಹಾಂಕಿಂಗ್ ನ ಬಗ್ಗೆ ಜಾಸ್ತಿ ಸ್ಟ್ರಿಕ್ಟ್ ಆಗಲು ಹೇಳಿ, ಕಿಕ್ಕಿರಿಯುವ ಸಿಗ್ನಲ್ ಗಳಲ್ಲಿ ಹಾರ್ನ್ ಸೌಂಡ್ ಚೆಕಿಂಗ್ ಮಾಡಿ, ದಂಡ ವಿಧಿಸಿ, ಡ್ರೈವಿಂಗ್ ಲೈಸೆನ್ಸ್ ಕೊಡುವಾಗ ಚಾಲಕರಿಗೆ ಹಾರ್ನ್ ನ ಕಿರಿಕಿರಿಗಳ ಬಗ್ಗೆ ಹಾಗು ಹೆಡ್ ಲೈಟ್ ಪ್ಲಾಶಿಂಗ್/ಬ್ಲಿಂಕಿಂಗ್ ನಂತಹ  ಪರ್ಯಾಯ ಅಭ್ಯಾಸಗಳ ಬಗ್ಗೆ ತಿಳಿಹೇಳಿ ಕೊಡಬಹುದು. ಈಗಿನ ಬೆಂಗಳೂರಿನ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ನೋಡಿದರೆ  ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಹೋಗಲಾಡಿಸುವುದು ತುಂಬಾ ಕಷ್ಟ, ಆದರೆ ಕನಿಷ್ಠ ಪಕ್ಷ ಹಾರ್ನ್ ಪದ್ಧತಿ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬಹುದು. ಈ ಹಾಂಕಿಂಗ್ ಅಡ್ಡಿಕ್ಷನ್ ನಿಂದ ಹೊರಬರಲು ನಾವೆಲ್ಲರೂ ಜಾಸ್ತಿ ಕಷ್ಟಪಡಬೇಕಾಗಿಲ್ಲ, ಇವತ್ತೊಂದಿನ  ಹಾರ್ನ್ ಮಾಡದೇ ಗಾಡಿ ಓಡಿಸಿ ನೋಡುತ್ತೇನೆ ಎಂದುಕೊಂಡು ಗಾಡಿ ಈಚೆ ತೆಗೆದರೆ ಆಯಿತು. ಒಂದು ದಿನದಿಂದ ಆದ ವ್ಯತ್ಯಾಸ, ಸಿಕ್ಕ ಸಮಾಧಾನ, ಕಲಿತ ತಾಳ್ಮೆ ಯಿಂದ ನಮ್ಮ ಪ್ರಯಾಣ ಎಷ್ಟು ಸುಖಕಾರವಾಗಿತ್ತು ಅಂತ ಅನಿಸದೇ ಇರದು. ನಾಯಿಗಳಂತೆ ರೋಡಿನಲ್ಲಿ ಒಟ್ಟಾಗಿ ಸೇರಿಕೊಂಡು ಬೊಗಳದೇ, ಮನುಷ್ಯರಂತೆ ಟ್ರಾಫಿಕ್ ಅರ್ಥ ಮಾಡಿಕೊಂಡು ಮೂವ್ ಮಾಡಿದಾಗ ಆಗುವ ಒಂದು ಜವಾಬ್ದಾರಿಯ ಅನುಭವ ಬೇರೆಯದ್ದೇ, ಒಮ್ಮೆ ಟ್ರೈ ಮಾಡಿ!       


Thursday, November 16, 2017

ಶಿವಪೂಜೆಯಲ್ಲಿ ಕರಡಿ ಬಿಟ್ಟವರಾರು?



ಜನ ಸೀತೆಯ ಪವಿತ್ರತೆಯನ್ನು ಪ್ರಶ್ನಿಸಿದಾಗ ಸೀತೆ ಆಫೆಂಡ್ ಆಗಲಿಲ್ಲ, ರಾಮ ಅವಳನ್ನ ಡಿಫೆಂಡ್ ಕೂಡ ಮಾಡಲಿಲ್ಲ. ಬದಲಿಗೆ ಒಂದು ಏಕ್ಸಾಮ್ ಏರ್ಪಡಿಸಿ ಊರಿಗೆಲ್ಲಾ ಕನ್ವೀನ್ಸ್ ಮಾಡಲಾಯಿತು. ನಾನು ಇದರಿಂದ ಬರಹ ಶುರು ಮಾಡಿದಾಗ ಮನಸಲ್ಲಿ ಸಾವಿರ ಪ್ರಶ್ನೆಗಳು, ರಾಮ ಮಾಡಿದ್ದು ಸರಿಯೇ? ಸೀತೆ ಅದ್ಯಾರೋ ಹಾಕಿದ ಚಾಲೆಂಜ್ ಒಪ್ಪಿಕೊಂಡು ಪರೀಕ್ಷೆಗೆ ಕುಳಿತಿದ್ದು ಸರಿಯೇ? ಅಷ್ಟೊಂದು ಜನ ಆಡಿಯನ್ಸ್ ನಡೆದುಕೊಂಡ ರೀತಿ ಸರಿಯೇ? ಅಷ್ಟೆಲ್ಲ ಯುದ್ಧ, ಧರ್ಮ-ಅಧರ್ಮಗಳ ಟ್ರಾಶ್-ಟಾಕ್ ಆದಮೇಲೆ ಇಂಥಾ ಒಂದು ಪ್ರೋಗ್ರಾಮ್ ಆ ದೊಡ್ಮನೆ ಫ್ಯಾಮಿಲಿಗೆ ಬೇಕಾಗಿತ್ತೇ? ಮುಖ್ಯವಾಗಿ ಬೇರೆಯವರ ಫ್ಯಾಮಿಲಿ ಮ್ಯಾಟರ್ ನಲ್ಲಿ ಮೂಗು ತೋರಿಸೋ ಚೇಷ್ಟೆ ನನಗೀಗ ಬೇಕಾಗಿತ್ತೇ? ಅಂತ.

ಈ ಘಟನೆಯ ಮೂಲವೇ ಒಂದು ಪ್ರಶ್ನೆ, ಅಂತ್ಯವೂ ಪ್ರಶ್ನೆಗಳಲ್ಲೇ. ನನ್ನ ಕೆಲ ಪ್ರಶ್ನೆಗಳು ಇತ್ತೀಚಿಗೆ ನನಗೆ ಇರುಸು ಮುರುಸುಗಳಿಗೆ ಈಡು ಮಾಡಿದಾಗ ನನಗೆ ಈ ಬರಹದ ಯೋಜನೆ ಹೊಳೆದಿರಬಹುದು. ಉದಾಹರಣೆಗೆ, ಈಗಲೂ ಸಭೆ ಸಮಾರಂಭಗಳಲ್ಲಿ ಮೋದಿಯವರು ಕಾಂಗ್ರೆಸ್, ರಾಹುಲ್ ಗಾಂಧಿ ಅಂತ ಬೈದುಕೊಳ್ಳೋದು ಎಷ್ಟು ಸರಿ? ಅದೆಲ್ಲ ದಾಟಿ ಅವರೀಗ ಬರೀ ಬಿಜೆಪಿ ನಾಯಕರಾಗಿರದೇ ನಮ್ಮ ದೇಶದ ಸನ್ಮಾನ್ಯ ಪ್ರಧಾನಿಯಾಗಿ ಬೆಳೆದಿಲ್ಲವೇ? 'ಥೂ! ಇಷ್ಟೊಳ್ಳೆ  ಪ್ರಧಾನಮಂತ್ರಿ ಸಿಕ್ಕಿದ್ದೇ ಪುಣ್ಯ, ಅಂಥವರನ್ನೂ ಪ್ರಶ್ನೆ ಮಾಡ್ತೀರಲ್ಲೋ' ಅಂತ ನನ್ನ ಸ್ನೇಹಿತ ಸಿಟ್ಟಾಗಿ ಎದ್ದುಹೋದ. ಹಿಂದೊಮ್ಮೆ, ಇಂದಿರಾ ಕ್ಯಾಂಟೀನ್ ಹೇಗೆ ನಡೆಯುತ್ತದೆ, ಅದಕ್ಕೆ ಎಷ್ಟು ಖರ್ಚಾಯ್ತು, ಎಲ್ಲಿಂದ ದುಡ್ಡು ಬಂತು, ಈ ಐಡಿಯಾ ನಮಗೆ ಎಷ್ಟು ಬೇಕಿತ್ತು ಅಂತ ಕೇಳಿದಾಗ, 'ಬಡವರಿಗೆ ತುತ್ತು ಅನ್ನ ಹಾಕೋ ಕಾರ್ಯಕ್ಕೂ ಪ್ರಶ್ನೆ ಹಾಕ್ತೀರಲ್ಲೋ' ಅಂತ ಟ್ವಿಟ್ಟರಿನಲ್ಲಿ ಯಾರೋ ರೇಗಿದ್ರು. ಭಾರತದಲ್ಲೇಕೆ ಅಷ್ಟು ಸ್ಲಂ ಗಳಿವೆ ಅಂತ ನನ್ನ ಅಮೆರಿಕೆಯ ಸಹೋದ್ಯೋಗಿ ನನ್ನನ್ನು ಕೇಳಿದಾಗ, 'ಭಾರತದ ಸಂಸ್ಕೃತಿ, ಪದ್ಧತಿ, ಇತಿಹಾಸ ಗೊತ್ತಿಲ್ದೇ ಏನೇನೋ ಕೇಳ್ಬೇಡ. ನಿಮ್ಮ ದೇಶದಲ್ಲೆಷ್ಟು ಸುರಕ್ಷತೆ, ಶಿಸ್ತು ಇದೆ ಅಂತ ಮಾತಾಡ್ತಿ ನೀನು?'  ಅಂತ ನಾನು ಏನೇನೋ ತಡವರಿಸಿದ್ದೆ. ನಮ್ಮಲ್ಲಿ ಇಷ್ಟೊಂದು ದೇವರು ಯಾಕೆ? ಶಿವ ಕಾಮನ್ನ ಗೆದ್ದ ಅಂತಂದ್ರೆ ಶಿವನಿಗೆ ಹೇಗೆ ಎರಡು ಮಕ್ಳು? ಜಾತಿ ಬಿಡಿ ಅಂತ ಬಡ್ಕೊಂಡ ಬಸವಣ್ಣನ ಹೆಸರಲ್ಲೇ ಯಾಕೆ ಇಷ್ಟೊಂದು ಜಾತಿಗಳು? ಅಂತ ಅವಾಗೆಲ್ಲ ನಾನು ನಮ್ಮಪ್ಪನ್ನ ಕೇಳಿದ್ರೆ ನಮ್ಮಪ್ಪ, 'ಈಸಾರಿನಾದರೂ ಒಳ್ಳೆ ಮಾರ್ಕ್ಸ್ ಬರತ್ತೋ?', 'ನಿನ್ನ ಸ್ಯಾಲರಿ ಹೆಚ್ಚಾಯ್ತೋ ಅಥವಾ ಇನ್ನ ಅಷ್ಟೇ ಇದೆಯೋ?' ಅಂತ ಮರುಪ್ರಶ್ನೆ ಹಾಕಿ ನನ್ನ ಬಾಯಿ ಮುಚ್ಚಿಸಿದ್ದರು.

ಈ ಪ್ರಶ್ನೆ ಮಾಡುವ ಅಭ್ಯಾಸ, ಸಿಕ್ಕ ಸಿಕ್ಕಿದ್ದನ್ನು ಪ್ರಶ್ನೆ ಮಾಡೋದು, ಎಲ್ಲಾನೂ ಪ್ರಶ್ನೆಗಳ ತರ್ಕಕ್ಕೆ ಹಿಡಿದು ನೋಡುವುದು ಎಷ್ಟು ಸರಿ?, ಇದು ಪ್ರಶ್ನೆ! 

ಸೀತೆ ಅಗ್ನಿಪರೀಕ್ಷೆ ಎಪಿಸೋಡ್ ನಲ್ಲಿ ರಾಮ, 'ನೀವು ಯಾರೋ ನಮ್ ಹುಡುಗೀನಾ ಪ್ರಶ್ನೆ ಮಾಡೋಕೆ? ನಾನ್ ರಾಜ ಆಲ್ವಾ, ನಮ್ಮಪ್ಪ ಬೇಜಾನ್ ಮಾಡಿಟ್ಟೋರೆ, ನಾನು ಹೇಳಿದಂಗೆ ಎಲ್ಲಾ ನಡೀಬೇಕ್! ಪ್ರಶ್ನೆ ಕೇಳೋರೆಲ್ಲ ಬ್ಯಾನ್ ಆಬೇಕ್!' ಅಂತ ಹುಚ್ಚ ವೆಂಕಟ್ ಡೈಲಾಗ್ ಬಿಡ್ಲಿಲ್ಲ.
ಕುರುಕ್ಷೇತ್ರದಲ್ಲಿ ಅರ್ಜುನ, ನಾನು ಯಾಕೆ ಯುದ್ಧ ಮಾಡಬೇಕು, ನಂಗೆ ಬೋರ್ ಆಗತ್ತೆ ಇದೆಲ್ಲ ಅಂತ ಕೇಳಿದಾಗ ಕೃಷ್ಣ,  'ಅಪ್ಪಾ ಬೇಜಾನ್ ಕೆಲಸಗಳಿವೆ ನಂಗೆ, ಹೇಳಿದಷ್ಟು ಮಾಡಪ್ಪ ನೀನು' ಅಂತ ಹೇಳಲಿಲ್ಲ. ಬದಲಾಗಿ ಹೆವೀ ಫಿಲಾಸಫಿಕಲ್ ಆಗಿ ಗೀತೆನ ಒಂದೇ ಉಸಿರಲ್ಲಿ ಹೇಳಿಬಿಟ್ಟ. ಅದನ್ನೇ ಇಸ್ಕಾನ್ ದವರು ಈಗ ಐಫೋನ್ ಥರ ಹೊಸ ಹೊಸ ವರ್ಷನ್ ಅಪ್ಡೇಟ್ ಮಾಡಿ ಮಾರ್ಕೆಟ್ ಗೆ ಬಿಡ್ತಾ ಇರೋದು. ಅಂಥ ಮಹಾನುಭಾವರುಗಳೇ ಪ್ರಶ್ನೆಗಳನ್ನ ಸ್ವೀಕರಿಸಿ ಅದಕ್ಕೆ ತಕ್ಕ ಉತ್ತರಗಳ ಹುಡುಕಾಟದಲ್ಲಿ ತೊಡಗಿಕೊಂಡಾಗ, ಯಕಶ್ಚಿತ್ 'ಹುಳು ಮಾನವ'ರಾದ ನಾವೇಕೆ ಆಫೆಂಡ್ ಆಗ್ತೀವಿ ಪ್ರಶ್ನೆಗಳಿಂದ?

ಸಿನಿಮಾಗಳಲ್ಲಿ ರಾಷ್ಟ್ರಗೀತೆಯ ಕಡ್ಡಾಯದ ಬಗ್ಗೆ ಕೇಳಿದರೆ ಕಾಂಟ್ರವರ್ಸಿ. ಹಿಂದಿ ಭಾಷಾ ಹೇರಿಕೆಯ ವಿರುದ್ಧ ಮಾತಾಡಿದರೆ ಕಾಂಟ್ರವರ್ಸಿ. ಮೀಸಲಾತಿ, ನೂರು- ಮತ್ತೊಂದು-ಭಾಗ್ಯ, ಧಾರ್ಮಿಕ ಸಬ್ಸಿಡಿಗಳ ರಾಜಕೀಯಗಳ ಬಗ್ಗೆ ಕೇಳಿದರೆ ಒಂದು. ಆಜಾನ್ ಸೌಂಡು, ದೇವಸ್ಥಾನದ ಸ್ಪೀಕರ್ ಸೌಂಡಿಗೆ ಲೊಚಗುಟ್ಟಿದರೆ ಮತ್ತೊಂದು. ಪರಿಹಾರ ನಿಧಿಯ ಲೆಕ್ಕ ಏನಾಯ್ತು? ಈ ಮೂರ್ತಿ ಯಾಕೆ ಬೇಕಿತ್ತು? ಆ ಜಯಂತಿಯಿಂದ ಏನು ಪ್ರಯೋಜನ? ಎಂದು ಕೇಳು ಕೇಳುತ್ತಲೇ ಗಲಭೆಗಳು, ಹೊಡೆದಾಟಗಳು. 

ಈ 'ಪ್ರಶ್ನೆ'ಗಳಿಂದ ಯಾಕೆ ಇಷ್ಟೊಂದುಮುನಿಸು ನಮಗೆ? ಪ್ರಶ್ನೆಗಳೇ ಜ್ಞಾನದ ದಾರಿ ಅಂತ ಹೇಳೋ ಗುರುಗಳು, ಮೌಲವಿಗಳನ್ನು ಚರ್ಚೆಗಳಿಗೆ ಕೂರಿಸಿದರೆ ಅವರು ಆಫೆಂಡ್ ಆಗಿ ಮಂಗನಂತೆ ಆಡುವುದನ್ನು ನೋಡಿ ಮುಜುಗರ ಆಗುತ್ತದೆ. ಅದರ ಜೊತೆಯಲ್ಲೇ 'ನಾನು ಗುರು' ಅಂತಾ ಹೇಳಿಕೊಳ್ಳುವ ಇವರೆಲ್ಲ ಅದ್ಹೇಗೆ ಗುರು ಆಗ್ತಾರೆ? ಅಂತ ಮತ್ತೊಂದು ಪ್ರಶ್ನೆ ಬರುತ್ತದೆ. ನಾನು ರಾಜ ಅಂತ ಹೇಳ್ಕೊಳೋನು ರಾಜನೇ ಅಲ್ಲ ಅಂತ ಎಲ್ಲೋ ಓದಿದ ನೆನಪು.

ಜ್ಞಾನದ ಮರ ಅಂತೇನಾದ್ರೂ ಒಂದಿದ್ರೆ ಅದರ ರೆಂಬೆ-ಕೊಂಬೆಗಳೇ ಪ್ರಶ್ನೆಗಳು, ಅವುಗಳ ಮೇಲೆ ಅರಳೋ ಎಲೆ ಹೂವುಗಳೆಲ್ಲ ಉತ್ತರಗಳು. ಪ್ರತಿಯೊಂದು ಹೂವು-ಹಣ್ಣಿಂದ ಎಷ್ಟೊಂದು ಮರಗಳು ಹುಟ್ಟೋ ಸಾಧ್ಯತೆ ಇರುತ್ತದೆ. ಹಾಗೆ ಪ್ರತಿ ಉತ್ತರವೂ ಮತ್ತೆ ಹತ್ತು ಹದಿನಾರು ಪ್ರಶ್ನೆಗಳ ಆದಿ. ಯಾವ ಪ್ರಶ್ನೆಯೂ ತಪ್ಪಲ್ಲ, ಉತ್ತರ ತಪ್ಪಾಗಬಹುದಷ್ಟೇ. ಯಾವ ಪ್ರಶ್ನೆಯೂ ಕ್ಷುಲ್ಲಕ ಅಲ್ಲ, ಉತ್ತರ ಸಿಲ್ಲಿ ಆಗಿರಬಹುದಷ್ಟೇ. ಹಾಗೆ, ಯಾವ ಪ್ರಶ್ನೆಯೂ ಅಫೆನ್ಸ್ ಅಲ್ಲ, ಉತ್ತರಿಸುವವ ಪ್ರಭುದ್ಧನಾಗಿರಬೇಕಷ್ಟೆ. ಸಿದ್ರಾಮಯ್ಯನವರ ನಿದ್ದೆಯ ಬಗ್ಗೆ ಪ್ರಶ್ನಿಸಿದಾಗಲೇ ಅವರ ಆರೋಗ್ಯದ ಬಗ್ಗೆ ನಮಗೆ ತಿಳಿದಿದ್ದು. ಕೇಳದೇ ಹೇಗೆ ಪಡೆಯುವುದು? ಬ್ರಾಹ್ಮಣ ಶ್ರೇಷ್ಠ ರಾವಣನೇ ಆತ್ಮಲಿಂಗುನ ಕೇಳಿ ಪಡೆದ. ವರ್ಷಗಟ್ಟಲೇ ಕೇಳಿ ಹೋರಾಡಿದ ಮೇಲೆಯೇ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು. ಪ್ರಶ್ನೆ ಕೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ, ಪ್ರತಿಯೊಂದರ ಬಗ್ಗೆ ಪ್ರಶ್ನೆ ಕೇಳಿ ತಿಳಿಯುವುದನ್ನೇ 'ರೈಟ್ ಟು ಇಂಫಾರ್ಮೇಶನ್' ಅಂತ ಭಾರತ ಸಂವಿಧಾನ ಹೇಳೋದು.

ಯಾಕೆ ಶಿವಪೂಜೆಯಲ್ಲಿ ಕರಡಿ ಬಿಡಬಾರದು? ಅಂತ ಮೊನ್ನೆ ನಮ್ಮ ಅಕ್ಕನ ಮಗ ಕೇಳಿದಾ. ಅವನಿಗೆ ಹದಿನಾಲ್ಕೇ ವರ್ಷ. ನಾನು ಉತ್ತರ ಹುಡುಕಿದಾಗ ಗೊತ್ತಾಗಿದ್ದು ಅದು ಕರಡಿ ಬಿಡೋದಲ್ಲ, 'ಕರಡಿಗೆ' ಬಿಡೋದು ಅಂತ. ಶಿವಪೂಜೆಗೆ ಕರಡಿಗೆ ಹಳೇ ಕಾಲದಲ್ಲಿ ತುಂಬಾ ಮುಖ್ಯವಾಗಿತ್ತಂತೆ. ಅದನ್ನ ಬಿಟ್ಟು ಶಿವಪೂಜೇನ ಮಾಡೋದು ಸಾಧ್ಯವೇ ಇಲ್ಲ ಅನ್ನೋಮಟ್ಟಿಗೆ. ಅದಕ್ಕೆ ಇಂಥ ಕಾರ್ಯದಲ್ಲಿ ಏನಪ್ಪಾ ಮುಖ್ಯವಾದದ್ದನೇ ಬಿಟ್ಟು ಬಂದಿರಲ್ಲ ಅಂತ ಅನ್ನೋಕೆ ಆ ಗಾದೆಯನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಏನಪ್ಪಾ ಮದುವೇಲಿ ತಾಳೀನೇ ಮರೆತು ಬಂದಿರಲ್ಲ ಅಂದಂಗೆ. ಏನಪ್ಪಾ ಎಕ್ಸಾಮ್ ನಲ್ಲಿ ಕಾಪಿ ಚೀಟಿನೇ ಬಿಟ್ಟು ಬಂದಿಯಲ್ಲಾ ನೀನು ಅಂದಂಗೆ. ಇದನ್ನೇ ತುಸು ಸರಳವಾಗಿ ನನ್ನ ಅಳಿಯನಿಗೆ ತಿಳಿಸಿದೆ. ಖುಷಿ ಪಟ್ಟ ಅವನು. ಅವನಿಗಿಂತ ನನಗೆ ಜಾಸ್ತಿ ಖುಷಿಯಾಯ್ತು. ಹೊಸ ವಿಷಯವೊಂದನ್ನು ತಿಳಿದುಕೊಂಡ ಖುಷಿ.

ಹೀಗೆ ಪ್ರಶ್ನೆಗಳಿಗೆ ತಕ್ಕ ಉತ್ತರ ಹುಡುಕುವುದು, ಅದಕ್ಕಿಂತ ಮೇಲಾಗಿ ಪ್ರಶ್ನೆಗಳಿಗೆ ನಾವು ತೆರೆದುಕೊಳ್ಳುವುದು ತುಂಬಾ ಮುಖ್ಯ ಹಾಗು ಆರೋಗ್ಯಕರ. 'ಗಣಪತಿಗೆ ಯಾಕೆ ಅಷ್ಟು ಹೊಟ್ಟೆ? ಶಿವ ಯಾಕೆ ಡಾನ್ಸ್ ಮಾಡ್ತಾನೆ? ನಾನೇಕೆ ವಿಭೂತಿ ಹಚ್ಕೋಬೇಕು? ' ಅಂತೆಲ್ಲ ನನ್ನ ಪುಟ್ಟ ಅಳಿಯ ಕೇಳಿದಾಗೆಲ್ಲ, ನಾನು ರೀಸನ್ ಹುಡುಕಿ ಅವನಿಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ. ಹೇಗೆ ಎಲ್ಲ ಸಣ್ಣ ಪುಟ್ಟ ಆಚರಣೆಗಳು, ನಂಬಿಕೆಗಳಿಗೂ ಒಂದೊಂದು ಅರ್ಥವಿದೆ ಅಂತ ತಿಳಿದುಕೊಂಡಾಗ ನನಗೆ ಈ ಆಚರಣೆಗಳ ಬಗ್ಗೆ ಹೆಮ್ಮೆ ಆಗುತ್ತದೆ. ದೇವರಿಗೆ ಹಾಗೆಲ್ಲ ಅನಬಾರ್ದು, ಹಾಗೆಲ್ಲ ಕೇಳಬಾರ್ದು, ಅಂತ ಹೇಳಿ ಪ್ರಶ್ನೆಗಳನ್ನು ಚಿವುಟಿದರೆ, ನಂಬಿಕೆಗಳಿಗೆ ಕಾರಣ ತಿಳಿಯದೇ ಮುಂದೆ ಅವನಿಗೆ ಇವೆಲ್ಲ ಮೂಢ ನಂಬಿಕೆ ಅಷ್ಟೇ ಅಂತ ಅನಿಸುವ ಅಪಾಯವಿರುತ್ತದೆ. ನನಗಾಗಿದ್ದು ಅದೇ. ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ತಿಳಿಯದೇ ನಾವು ಎಷ್ಟು ಮೂಢರು, ಹಿರಿಯರು ಹೇಳಿದ್ದೆಲ್ಲ ಕುರಿಗಳಂತೆ ಮಾಡುತ್ತಾ ಹೋಗ್ತೇವೆ ಅನ್ನೋ ಭಾವನೆಯಲ್ಲಿದ್ದೆ. ಆಮೇಲೆ ಓದಿ, ಕೇಳಿ ತಿಳಿದ ನಂತರ ನಮ್ಮ ಪದ್ಧತಿ, ಆಚರಣೆಗಳ ಬಗ್ಗೆ ತಿಳುವಳಿಕೆ ಬೆಳೆಯಿತು. ಪ್ರಶ್ನೆಗಳಿಗೆ ಅಂಜುವ ದೇವರು ಅದೆಂಥ ದೇವರು? ಪ್ರಶ್ನೆಗಳಿಗೆ ಹೆದರುವ ಧರ್ಮ ಅದೆಷ್ಟು ಗಟ್ಟಿ? ಎಲ್ಲವನ್ನು ಪ್ರಶ್ನಿಸಿ ಪರೀಶೀಲಿಸಿದಾಗ ಹೊಚ್ಚ ಹೊಸದಾಗಿ ಪ್ರತಿ ಬಾರಿಯೂ ಹೊಳೆಯುತ್ತ ಬರುವ ಉತ್ತರವೇ ಸತ್ಯ. ಆ ಸತ್ಯದಿಂದಷ್ಟೇ ಧರ್ಮ, ದೇವರುಗಳೆಂಬ ನಂಬಿಕೆಗಳು ನಿಲ್ಲಬೇಕೆ ವಿನಃ ಯಾರೋ ಹೇಳಿದರೆಂದೋ ಅಥವಾ ಯಾವುದೋ ಹೆದರಿಕೆಯಿಂದಲೋ ಅಲ್ಲ.

ಎಲ್ಲರೂ ಮನುಷ್ಯರೇ ಅಂದ ಮೇಲೆ ತಪ್ಪು ಮಾಡುವ ಸಾಧ್ಯತೆ ಇದ್ದೇ ಇರುತ್ತದೆ, ಸೀತೇನೆ ಪರೀಕ್ಷಿಸಿದರು, ದ್ರೌಪದಿ ನೇ ಜೂಜಿಗಿಟ್ರು.. ಎಲ್ಲರೂ ತಪ್ಪು ಮಾಡಿನೇ ದೇವರು ಆಗಿರೋದು ಅಂತಂದರೆ, ಮಾಡಿದ ತಪ್ಪುಗಳ ಅವಲೋಕನ ಮಾಡಿ ತಿದ್ದುಕೊಳ್ಳೋಣ. ನಮ್ಮನ್ನ ಒಬ್ಬರು ಪ್ರಶ್ನಿಸಿದರೆ ಅದಕ್ಕೆ ಸಮರ್ಪಕ ರೀತಿಯಲ್ಲಿ ಉತ್ತರಿಸೋಣ, ಆಗದಿದ್ದರೆ ಉತ್ತರ ಹುಡುಕೋಣ.
ಪ್ರಶ್ನೆ ಕೇಳುವ ಧ್ವನಿಗೆ ಕಿವಿ ಕೊಡೋಣ, ಗುಂಡೇಟನಲ್ಲ. ಪ್ರಶ್ನೆಗಳೇ ಇಲ್ಲದ ನಾಗರಿಕತೆಯ ಬೆಳವಣಿಗೆ ಅಸಾಧ್ಯ. ಚರ್ಚೆಯಾಗದ ಬ್ಯಾನ್ ಗಳು, ಸಮೀಕ್ಷಾರಹಿತ ಕಡ್ದಾಯಗಳಿಂದ ಒಂದು ರಾಜ್ಯ, ದೇಶದ ಅಭಿವೃದ್ಧಿಗೆ ಹಾನಿಯೇ ವಿನಃ ಯಾವ ಪ್ರಯೋಜನವೂ ಇಲ್ಲ. ಪ್ರಶ್ನೆಗಳ ಕೇಳುವ ಸಂಸ್ಕೃತಿಯ ಬೆಳೆಸಿಸುವುದು, ಅದಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ತುಂಬಾ ಮುಖ್ಯ. ಅದನ್ನು ನಾವು, ನಮ್ಮ ನಾಯಕರು, ನಮ್ಮ ಸರಕಾರಗಳು ಹೆಚ್ಚೆಚ್ಚು ಮನಗಾಣಲಿ ಎಂದು ಆಶಿಸೋಣ. ಅವರು ಕಿವಿ ಕೊಡಲ್ಲ ಅಂತ ನಾವು ಪ್ರಶ್ನೆ ಕೇಳೋದನ್ನೂ ನಿಲ್ಲಿಸುವುದು ತಪ್ಪೇ. ಹಾವಿಗೆ ಕಿವಿ ಇಲ್ಲ ಅಂತ ಪುಂಗಿ ಊದೋದನ್ನ ನಿಲ್ಲಿಸಿದ್ರೆ ಹಾವಾಡಿಗನಿಗೇ ಕಷ್ಟ, ನಮ್ಮ ಪ್ರಯತ್ನ ನಾವು ಮಾಡೋಣ.

                        

Wednesday, November 1, 2017

ಉಳಿದವರು ಕಂಡಂತೆ

  


ನರೇಂದ್ರ ಮೋದಿ ಒಬ್ಬ ಅದ್ಭುತ ನಟ, ಒಳ್ಳೆ ಆಕ್ಟಿಂಗ್ ಮಾಡ್ತಾರೆ, ಅಂತ ಮೊನ್ನೆ ಒಬ್ರು actor ಹೇಳಿದ್ರಂತೆ. ಏನ್ ಸಾ ಹಿಂಗೆ ಅಂದ್ಬುಟ್ರಿ ಅಂತ ಯಾರೋ ಕೇಳಿದ್ರೆ, ರೀ! ಅಭಿವ್ಯಕ್ತಿ ಸ್ವಾತಂತ್ರ್ಯ ರೀ...ನಾನ್ ಯಾವಾಗ್ಲೂ ವಿರೋಧ ಪಕ್ಸ, ಅಷ್ಟೇ ಆಮೇಲೆ! ಅಂತ ರೇಗಿದ್ರಂತೆ ಸಾರು. ವಿರೋಧ ಪಕ್ಪದ ನಾಯಕ್ರುಗಳೆಲ್ಲ ಚಪ್ಪಾಳೆ ಹೊಡೆದು ಪಾರ್ಟಿ ಮಾಡಿ ಸ್ವಾಗತಿಸಿದ್ರಂತೆ ಸೈಡ್ ಅಲ್ಲಿ, ಏ ನಮ್ ಪಕ್ಸದ್ ಎಸ್ರು ಹೇಳವ್ರೆ ಕಣ್ಲಾ ಅಂತಾ. ಆಡಳಿತ ಪಕ್ಪದವರು, ನಿಮ್ದುಕೆ ಮಾತ್ರ ಆಕ್ಟರ್ ಗೆ ಆಗಿ ಈಥರ  ಪಾಲಿಟಿಕ್ಸ್ ಮಾತಾಡಬೋದು-ಮಾಡಬೋದು.. ನಮ್ದುಕೆ ಯಾಕೆ ಆಕ್ಟಿಂಗ್ ಮಾಡಬಾರ್ದು?  ಅಂತಾ ಕ್ರಾಸ್ ಕೊಚ್ಚನ್ ಮಾಡಿದ್ರಂತೆ. ಸಾಮಾನ್ಯ ಜನ ಬೇಜಾನ್ ಟೆಂಗ್ಸನ್ ಆಗಿ ಇವ್ರು ರಾಜ್ಯದ ವಿರೋಧ ಪಕ್ಷದ ಬಗ್ಗೆ ಹೇಳಿದ್ರಾ ಅಥವಾ ಕೇಂದ್ರ ವಿರೋಧ ಪಕ್ಷದ ಬಗ್ಗೆ ಹೇಳಿದ್ರಾ ಅಂತ ತಲೆ ಕೆರ್ಕೊಳೋವಾಗ,  ಬುದ್ಧಿಜೀವಿಯೊಬ್ಬ ಅರ್ಧ ಬೀಡಿ ಸೇದಿ.. ಏ ಅದು ಹಂಗಲ್ಲಾ ರೀ, ಕೇಂದ್ರಕ್ಕೆ ಇವ್ರು ಕಾಂಗ್ರೆಸ್, ರಾಜ್ಯಕ್ಕೆ ಇವ್ರು ಬಿ.ಜೆ.ಪಿ  ಅಂತ ಹೇಳಿ ಇನ್ನಾ ಜಾಸ್ತಿ ಹುಳ ಬಿಟ್ರಂತೆ. ಮೊನ್ನೆ ಬಸ್ಸಲ್ಲಿ ಕೆಂಪು ಕಲರ್ ಶರ್ಟ್ ಹಾಕಿದ ಒಬ್ಬ (ಸೂತ್ರಗಳ ಪ್ರಕಾರ ಕೆಂಪು ಕಲರ್ ನೇ, ಬೇಕಿದ್ರೆ ಕೇಳ್ಕಳಿ) - 'ಈ ನಟಮಹಾಶಯ ನಮಗಿಂತ ಬೇರೆ ರಾಜ್ಯದ ಸಿನಿಮಾಗಳನ್ನೇ ಜಾಸ್ತಿ ಮಾಡೋದು, ಕಾವೇರಿ ಗಲಭೆ ಬಗ್ಗೆ ಅನಿಸಿಕೆ ಕೇಳಿದ್ರೆ ಅದನ್ನೆಲ್ಲ ಮಾತಾಡೋಕೆ, ಮಾಡೋಕೆ ಕೋರ್ಟ್ ಇದೆ ನಾನ್ಯಾಕೆ ಅನಿಸಿಕೆ ಹೇಳ್ಬೇಕು ಅಂತ ಆ ರಿಪೋರ್ಟರ್ ಹುಡಗಿ ಮೇಲೆ ಗುರ್ ಅಂದು ಎದ್ದೋದ್ರು, ಈಗ ನೋಡು ಹೆಂಗ್ ಬಿಡ್ತಾವ್ರೆ ಬಿಟ್ಟಿ ಅನಿಸಿಕೆಯ' ಅಂತ ನಗ್ತಿದ್ದ. ನಾನೂ ಕಕ್ಕಕ್ಕ ಅಂತ ನಕ್ದೆ, ಸರಿನೋ ತಪ್ಪೋ ಕಾಮಿಡಿಯಾಗಿತ್ತು ಅವ್ನು ಹೇಳಿದ ರೀತಿ.  ಅದನ್ನ ಕೇಳಿ ಪಕ್ಕದಲ್ಲಿದ್ದ ನನ್ನ ಸ್ನೇಹಿತ, "ಯಾವಾಗಲೂ ವಿರೋಧ ಪಕ್ಷದವನಾಗಿರು ನೀನು ಅಂತ ಅವ್ರ ಗುರು ಹೇಳಿದ್ದಂತೆ ಕಣೋ, ಅದೇನೋ ಪಾಪ ನೆನಪಾಗಿರಬೇಕು ಒಂದೇ ಸೈಡ್ ಅಲ್ಲಿ ಕೈ ಇಟ್ಕೊಂಡು ಮಲಗಿದಾಗ, ಅದ್ಕೆ ಸಡನ್ ಆಗಿ ವಿರೋಧ ಪಕ್ಷದವರಾಗಿರ್ತಾರೆ, ಆಮೇಲೇ ಡೈರೆಕ್ಟರು ಶಾಟ್ ರೆಡಿ! ಅಂತ ಕರೆದಾಗ ವಾಪಾಸ್ ಆಕ್ಟಿಂಗ್ ಕೆಲ್ಸಕ್ಕೆ ಹೋಗಿರ್ತಾರಪ್ಪ. ಜನ ಅದೊಂದನ್ನೇ ಹಿಡ್ಕೊಂಡು ಕುಯ್ಯೋದು ತಪ್ಪು ಆಲ್ವಾ" ಅಂತಂದ. ಯಪ್ಪಾ!! ಒಂದೇ ಒಂದು ಮಾತಿಗೆ ಎಷ್ಟೊಂದ್ ಚರ್ಚೆ ನೋಡಿ. ಅವ್ರು ಹೇಳಿದ್ರು, ಇವ್ರು ಹೇಳಿದ್ರು ಅಂತ ನಾನೇ ಎಲ್ಲಾ ಹೇಳ್ತಾ ಇದ್ದೀನಿ ಅಂತ ಅನ್ಕೋಬೇಡಿ, ಇದೆಲ್ಲ ನಮ್ಮ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ನ 'ಸೂತ್ರಗಳ ಆಧಾರವಾಗಿ' ಕಲೆ ಹಾಕಿರೋ ಇಂಫಾರ್ಮೇಸನ್! ಸುಮ್ನಿರ್ರೀ, 'ನುಡಿದಂತೆ ನಡೆದಿದ್ದೇವೆ' ಅಂತ ಬರೀ ಹಳ್ಳಗಳೇ ತುಂಬಿರೋ ರಸ್ತೆ ಮುಂದೆ ಬೋರ್ಡ್ ಹಾಕಿದ್ರೆ ನಂಬತೀರಾ... ನಿಮ್ಮದೊಳ್ಳೆ ರಾಮಾಯಣ!

'ಯೂಟ್ಯೂಬ್' ನಿಮಗೆಲ್ಲ ಗೊತ್ತಿರತ್ತೆ,  ಅದರ ಬಗ್ಗೆ ಸ್ವಲ್ಪ ಕುಯ್ತೀನಿ, ಬಯ್ಬೇಡಿ. ನೀವು ಗಮನಿಸಿರ್ತೀರಾ, ಈ ವಿಡಿಯೋ ಸ್ಟ್ರೀಮಿಂಗ್ ವೆಬ್ಸೈಟ್ ನಲ್ಲಿ ನಾವು ಜಾಸ್ತಿ ಯಾವ ವಿಷಯಗಳ ವಿಡಿಯೋ ಗಳನ್ನ ನೋಡುತ್ತ ಇರುತ್ತೇವೋ ಆ ವಿಷಯಗಳ ಸಂಬಂಧಿತ ಅನ್ಯ ವಿಡಿಯೋಗಳು ನಮ್ಮ ಹೋಮ್ ಪೇಜ್ ನ ಮೇಲೆ ಪಾಪ್ ಆಗ್ತಾ ಇರ್ತವೆ, ಆವರಿಸುತ್ತವೆ. ನೋಡುಗರನ್ನು ವೆಬ್ಸೈಟ್ ನಲ್ಲಿ ತೊಡಗಿಸಿಡಲು, ಎಂಟರ್ಟೈನ್ ಮಾಡಲು ಯೂಟ್ಯೂಬ್ ಮಾಡಿದ ಒಂದು ಪ್ರೋಗ್ರಾಮ್ ಇದು. ನಾವು ಯಾವುದರ ಬಗ್ಗೆ ಜಾಸ್ತಿ ಆಸಕ್ತಿ ತೋರಿಸಿದ್ದೇವೆ ಅಂತ ಸ್ಟಡಿ ಮಾಡಿ, ಅದೇ ವಿಷಯ-ವ್ಯಕ್ತಿಗಳ ಬಗ್ಗೆ ನಮ್ಮ ಸ್ಕ್ರೀನ್ ಮೇಲೆ ವಿಷಯ ತುಂಬುತ್ತದೆ. ಇನ್ನೊಂದು,  ನೋಡುಗನು ಅಲ್ಲಿ ಬೇಕೆಂದ ವಿಷ್ಯಕ್ಕೆ ನೋಂದಾಯಿಸಿಕೊಂಡ್ರೆ, ಆ ವಿಷ್ಯಕ್ಕೆ ಸಂಬಂಧಪಟ್ಟ ಅಧಿಸೂಚನೆಗಳು ಅವನಿಗೆ ಬರುತ್ತದೆ, ಆಗ ಅವನು ಲಾಗಿನ್ ಆಗಿ ವಿಡಿಯೋ ಗಳನ್ನು ನೋಡಬಹುದು. ಈಗ ಒಂದು ಕ್ಷಣ ಈ ಜಗತ್ತು ಕೂಡ ಯೂಟ್ಯೂಬ್ ಅಪ್ಲಿಕೇಶನ್ ಅಂತ ಅಂದುಕೊಳ್ಳಿ, ಸಾವಿರ ಜನರ, ಲಕ್ಷ ಘಟನೆಗಳ ವಿಡಿಯೋಗಳು ನಡೆಯುತ್ತಲೇ ಇರುತ್ತವೆ, ಹಿಗ್ಗಾ ಮುಗ್ಗಾ ಲೈವ್ ಸ್ಟ್ರೀಮಿಂಗ್! ಅವ್ರೇನೋ ಅಂದ್ರು, ಇವ್ರೇನೋ ಮಾಡಿದ್ರು ಅಂತ ಬರ್ತಾನೆ ಇರತ್ತೆ. ನಮಗೆ ಬೇಕಂದದ್ದಕ್ಕೆ  ಮಾತ್ರ ನೋಂದಾಯಿಸಿಕೊಂಡ್ರೆ, ನಮಗೆ ಅದಷ್ಟೇ ಕಾಣ್ತದೆ, ನೋಡಿ ಕಲಿತು, ಲಾಗೌಟ್ ಆಗಬಹುದು. ನಾವು ಪದೇ ಪದೇ ನೋಡೋ/ಆಡೋ ವಿಷಯಗಳು ಅಥವ ನಾವು ನೋಡಬಯಸುವ ವಿಡಿಯೋಗಳನ್ನೇ ಪ್ರಪಂಚ ನಮ್ಮ ಮನಸಿನ ಹೋಂ ಪೇಜ್ ನ ಮೇಲೆ ತೋರಿಸುತ್ತೆ. ಕೆಟ್ಟದನ್ನ ಫಾಲೋ ಮಾಡಿದ್ರೆ ಕಾಣಸಿಗೋದೆಲ್ಲ ಕೆಟ್ಟದ್ದೇ, ಒಳ್ಳೇದನ್ನ ಫಾಲೋ (ಸರ್ಫ್ ಅಂತಾರೆ ಇಂಟರ್ನೆಟ್ ಭಾಷೇಲಿ) ಮಾಡಿದ್ರೆ ಕಾಣಿಸೋದು, ಕೇಳ್ಸೋದು ಎಲ್ಲಾ ಒಳ್ಳೇದೇ. ಬೆಳವಣಿಗೆ ಮುಖ್ಯ, ನಿಂತಲ್ಲೇ ನಿಲ್ಲೋ ಗಿಡ ಕೂಡ ಬೆಳೆದು ಮರವಾಗತ್ತೆ. ಆದ್ರೆ, ಯಾವ ಥರ ಬೆಳವಣಿಗೆ ಬೇಕು ಅಂತ ನೋಡ್ಕೊಬೇಕಷ್ಟೆ. ಪಾಕಿಸ್ತಾನದಲ್ಲಿರೋ ಆತಂಕವಾದಿಗಳು ದೇವರ ಕೆಲಸ ಅಂತ ಹೇಳಿನೇ ಕೊಲೆ ಮಾಡೋದು, ಅವರ ಪ್ರಕಾರ ಹಾಗೆ ಮಾಡೋದ್ರಿಂದ ಅವ್ರು ದೇವರಿಗೆ ಹತ್ತಿರ ಆಗ್ತಾರಂತೆ, ಅವರ ಪ್ರಕಾರ ಅದು ಬೆಳವಣಿಗೆ. ನಾವೆಲ್ಲಾ ಅದು ತಪ್ಪು ಅಂತೀವಿ, ಅದೇ ಸರಿ ಅಂತ ಅವ್ರು ನಂಬಿಸಬಲ್ಲರು (ತಲೆಗೆ ಪಿಸ್ತೋಲ್ ಇಟ್ಟು). ಅದೇ ಯೂಟ್ಯೂಬ್ ನಲ್ಲಿ ಕಾಮೆಂಟ್ಸ್ ವಿಭಾಗ ಕೂಡ ಇದೆ, ಅಲ್ಲಿ ನಮ್ಮ ಅನಿಸಿಕೆಗಳನ್ನು ಎಲ್ಲರಿಗೆ ಕಾಣುವಂತೆ ಬರೆಯಲೂ ಬಹುದು. ಕಾಣುವ ಅಥವಾ ಕೇಳಸಿಗುವ ಪ್ರತಿಯೊಂದಕ್ಕೂ ಅನಿಸಿಕೆ ಇರಲೇಬೇಕೆಂದು ಏನಿಲ್ಲ, ಅದಕ್ಕೆ ಈ ಫೀಚರ್ ನೋಡುಗನಿಗೆ ಐಚ್ಛಿಕ ವಾಗಿದೆ. 'ಜಗತ್ತಿನ ಯೂಟ್ಯೂಬ್ ' ನಲ್ಲೂ ಕೂಡ ಹಿಂಗೇ. ಪ್ರತಿಯೊಂದರ ಬಗ್ಗೆಯೂ ಒಂದು ಅನಿಸಿಕಿ ಹೊಂದಿರಬೇಕು ಅನ್ನೋದೇ ಬಹುಷಃ ನಮ್ಮ ಈಗಿನ ಸಮಾಜದ ದೊಡ್ಡ ಸಮಸ್ಯೆ ಆಗಿರಬಹುದು, ನರೇಂದ್ರ ಮೋದಿನಾ ಅಥವಾ ಸೋನಿಯಾ ಗಾಂಧಿನಾ?, ಎಡಪಂಥ ನಾ ಅಥವಾ ಬಲ ನಾ? ಸಚಿನ್ ನಾ ಅಥವಾ ದ್ರಾವಿಡ್ ನಾ? ಇಂಥ ಪ್ರಶ್ನೆಗಳನ್ನ ಅವರಿವರ ಪ್ರಭಾವದಿಂದ ಮನಸಲ್ಲೇ ಕೇಳ್ಕೊಂಡು ಒಂದು ಪಕ್ಷದ ಕಡೆಗೆ ವಾಲಿ ಫಿಕ್ಸ್ ಆಗಿಯೇ ಮುಂದಿನ ಮಾತು ಕಥೆ! ಎಲ್ಲದರ ಬಗ್ಗೆಯೂ ಒಂದು ಸ್ವಾಗತಾರ್ಹ ಮನೋಭಾವ ಇಟ್ಟುಕೊಂಡು ನೋಡಿದರೆ ಬಹುಷಃ  ತಪ್ಪುಗಳು ಕಡಿಮೆ ಕಾಣಬಹುದು, ಮಲಯಾಳಿ ನರ್ಸಮ್ಮನ್ನ ಬಯಸಿದ ರೋಗಿಗೆ ಅವಳು ಚುಚ್ಚುವ ಸೂಜಿ ಕಾಣಿಸಲ್ವಂತೆ. ಎಲ್ಲರೂ ಮನುಷ್ಯರೇ ಅಂದ ಮೇಲೆ ಸರಿ ತಪ್ಪು ಗಳನ್ನ ಎಲ್ಲರೂ ಮಾಡಿರಬಹುದು, ಕೆಲವರಿಗೆ ಒಳ್ಳೇದನ್ನ ಹೊಗಳೋ ಗುಣ ಇದ್ರೆ, ಕೆಟ್ಟದನ್ನ ಬಯ್ಯೋ ಗುಣನೂ ಎಲ್ಲೋ ಒಬ್ಬರಿಗೆಇರುತ್ತೆ. ಪುರುಸೊತ್ತಿದ್ರೆ ಕೆಟ್ಟ ಕಾಮೆಂಟ್ಸ್ ಗಳನ್ನೂ ನೋಡಿ ಕಲಿಯೋಣ, ಬೇಡವಾದ್ರೆ ಬಿಟ್ಟು ಬಿಡೋಣ. ಬರೀ ಕಾಮೆಂಟ್ಸ್ ಮಾಡುತ್ತಾ ಕುಳಿತ್ಕೊಂಡ್ರೆ ನಮ್ಮ ಪುಟ್ಟ ಕನಸಿನ ಕಥೆಯ ವಿಡಿಯೋವನ್ನು ಕಟ್ಟಿ ಬೆಳೆಸಿ ಈ ಜಗತ್ತಿಗೆ ತೋರಿಸಲು ಆಗುವುದೇ ಇಲ್ಲ. ಮೋದಿ ಆಕ್ಟರ್ ಅಂತ ಒಬ್ಬರಿಗೆ ಅನಿಸಿದ್ರೆ ಅದು ಅವರ ಅನಿಸಿಕೆ, ನಾವೆಲ್ಲಾ ಅದಕ್ಕೆ ಸಿಟ್ಟಾಗಬೇಕಾಗಿಲ್ಲ ಇಲ್ಲ. ಅವರು ಅದ್ಯಾವ ಪರಿಸ್ಥಿತಿ, ಮನಸ್ಥಿತಿಯಲ್ಲಿ ಹಾಗಂದರೋ ಅವರಿಗೇ ಗೊತ್ತು. ಅವರು ಘಟನೆಯ ಘನತೆ ಹಾಗು ಗಾಂಭೀರ್ಯವ ದಾಟಿ ಒಬ್ಬ ವ್ಯಕ್ತಿಯ ಬಗ್ಗೆ ಅವಸರಕ್ಕೆ ಸಿಕ್ಕಿ ತೀರ್ಪು ಕೊಡುವುದು ಅಥವಾ ಕಾಮೆಂಟ್ ಮಾಡಿದ್ದು ತಪ್ಪು ಎಂದೆನ್ನುವವರು ಮಾಡುತ್ತಿರುವುದೇನು? ಅವರು ಕೂಡ ಪೂರ್ತಿ ಚಿತ್ರ ತಿಳಿಯದೇ ಆ ನಟನನ್ನುತೀರ್ಪಿಗೆ ಈಡು ಮಾಡುತ್ತಿರುವುದೇ ತಾನೇ? ಕಣ್ಣಿಗೆ ಕಣ್ಣು ಅಂತಾದರೆ ಜಗತ್ತೇ ಕುರುಡಾಗಿರುತಿತ್ತು. ಕಣ್ಣು ಬೇಕು ರೀ, ಇನ್ನು ಏನೇನೋ ನೋಡಬೇಕು ನಾವೆಲ್ಲಾ. ದಲಿತರಿಗೆ ಎಪ್ಪತ್ತು ಪ್ರತಿಶತಃ ಮೀಸಲಾತಿ ಅಂತ ಸಿ.ಎಂ ಸಾಹೇಬ್ರು ಹೇಳಿದ್ದಾರೆ ಮೊನ್ನೆ, ಅದನ್ನ ನೋಡೋದು ಬೇಡವಾ? ಮೀಸಲಾತಿ ನೂರಕ್ಕೆ ನೂರು ಆದ್ಮೇಲೆ ಎಲ್ಲಾನೂ ನೋಡಿದಂತಾಗಿ ತಣ್ಣಗೆ ಕಣ್ಣು ಮುಚ್ಚಬೋದು ಎಲ್ಲರೂ ಒಟ್ಟಿಗೆ, ಏನಂತೀರಾ?

ಅಂಕಣ : ಬುರುಡೆದಾಸ
     

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...