Saturday, November 10, 2018

ರಾವಣನ ಕಥೆಯಲ್ಲಿ ರಾಮನೇ ರಾಕ್ಷಸ


 ರಾಕ್ಷಸ ರಾವಣನ ವಿರುದ್ಧ ಧರ್ಮಯುಧ್ಧಕ್ಕೆ ಹೋಗುವ ಮುನ್ನ ರಾಮನು ಯಜ್ಞ ಮಾಡಬೇಕು, ಆ ಯಜ್ಞವನ್ನು ಒಬ್ಬ ಶ್ರೇಷ್ಠ ಬ್ರಾಹ್ಮಣನು ನೆರವೇರಿಸಿ ಕೊಡಬೇಕು ಅಂತ ಗುರುಗಳು ಪಂಡಿತರೆಲ್ಲ ಹೇಳಿದಾಗ, ರಾವಣನಿಗಿಂತ ಶ್ರೇಷ್ಠ ಬ್ರಾಹ್ಮಣ ಇನ್ನೊಬ್ಬನಿಲ್ಲ ಅಂತ ತಿಳಿದ ರಾಮನು ಆ ಯಜ್ಞವನ್ನು ರಾವಣನೇ ಮಾಡಿಕೊಡಲಿ ಎಂದು ರಾವಣನಲ್ಲಿ ಕೇಳಿಕೊಂಡನಂತೆ. ಬ್ರಾಹ್ಮಣ ನೀತಿಯಂತೆ ಆ ವಿನಂತಿಗೆ ಓಗೊಟ್ಟು ದಾನವ ರಾವಣನು ಪೂಜೆಯ ನಡೆಸಿಕೊಟ್ಟು ರಾಮನಿಗೆ 'ವಿಜಯೀಭವ!' ಅಂತ ಆಶೀರ್ವಾದ ಕೂಡ ಮಾಡಿದ್ದನಂತೆ. ಈ ಅಜ್ಜಿ ಕಥೆಯನ್ನು ಈಗಿನ ಆಡಳಿತ ಪಕ್ಷ, ವಿರೋಧ ಪಕ್ಷದ ದೇವರುಗಳು ನಂಬಲಿಕ್ಕಿಲ್ಲ. ಮೋಹಕತಾರೆ ರಮ್ಯಾ ಅಂತೂ 'ಇದು ರಾಮನ ಕುತಂತ್ರ, ನನ್ನ ಬಳಿ ಪ್ರೂಫ್ ಇದೆ. ಕೆಮ್ಮಂಗೇ ಇಲ್ಲ!' ಅಂದುಬಿಡಬಹುದು. ಸದಾ ಕೆಮ್ಮುವ ಕೇಜ್ರಿವಾಲ್ ಕೂಡಈ ಮಾತಿಗೆ ಕೆಮ್ಮದೇ ಸುಮ್ಮನಿದ್ದು ಬಿಡಬಹುದು. ಇತಿಹಾಸ, ಪುರಾಣ ಕಥೆಗಳೇ ಹಾಗೆ, ಒಮ್ಮೊಮ್ಮೆ ನಮ್ಮನ್ನು ಆಶರ್ಯಕ್ಕೆ ಈಡುಮಾಡುತ್ತವೆ. ಯಾವುದೇ ಆಗಲಿ  ಮೊದಲನೇ ಬಾರಿ ಕೇಳಿದಾಗ ತುಂಬಾ ಕುತೂಹಲ ಮೂಡಿಸುತ್ತವೆ. ಒಹ್! ಹೌದೇ? ಚೆನ್ನಾಗಿದೆ ಇದು, ಆದರೆ ಇದು ಹೇಗೆ? ಹಾಗೂ ಇರಬಹುದಲ್ಲವೇ? ಅಂತನಿಸಬಹುದು. ಮನುಷ್ಯನ ಸ್ವಭಾವ ಅದು, ಕಂಡದ್ದು ಕೇಳಿದ್ದನ್ನು ಪ್ರಶ್ನೆ ಮಾಡಿ, ಪರಿಶೀಲಿಸಿ ನೋಡಿ ಆಮೇಲೆ ಧೃಡ ಅನಿಸಿದಾಗ ಅದನ್ನು ನಂಬುವುದು. ಆದರೆ ಒಂದು ಕಥೆಯನ್ನು ನೀವು ಬಿಟ್ಟೂ ಬಿಡದೆ ಹತ್ತು ಹದಿನೈದು ಸಾರಿ ಕೇಳಿದಾಗ ಮನಸಿನ ಆಶ್ಚರ್ಯ ಸೂಚಿಗಳು, ಪ್ರಶ್ನಾರ್ಥಕ ಚಿಹ್ನೆಗಳೆಲ್ಲವೂ ಮಾಸಿ ಸುಸ್ತಾಗಿ ಹೋಗಬಹುದು. ಹೌದು ಇದು ಹೀಗೇ ಇದೆ, ನನಗೂ ಇದು ಗೊತ್ತು ಅಂತ ಅಂದುಕೊಳ್ಳುತ್ತೇವೆಯೋ ಏನೋ. ಒಂದು 'ಕಥೆ' ಯು 'ಸತ್ಯ' ವಾಗುವುದು ಹೀಗೆಯೇ.   

ಕೆಲ ಕೆಥೆಗಳು ಇತಿಹಾಸ ಆದರೆ,  ಕೆಲವು ಪುರಾಣಗಳಾಗಿವೆ, ಇನ್ನೂ ಕೆಲವು ಸತ್ಯವಾಗಿ ಹೋಗಿವೆ.    ಅಜ್ಜಿಕಥೆ ಮೊಮ್ಮಗನಿಗೆ ನಿದ್ದೆ ತರಿಸಿದರೆ, ಅಪ್ಪನ ಕಥೆ ಮಗಳಿಗೆ ಸ್ಫೂರ್ತಿ ತುಂಬುತ್ತದೆ. ದೇವರ ಕಥೆಗಳು ಧೈರ್ಯ ತುಂಬಿದರೆ, ದೆವ್ವಗಳ ಕಥೆಗಳು ಥೇಟರಿನಲ್ಲಿ ದುಡ್ಡು ಮಾಡುತ್ತವೆ. ರಾಮನ ಕಥೆಯಲ್ಲಿ ರಾಮನೇ ದೇವರು , ರಾವಣನ ಕಥೆಯಲ್ಲಿ ರಾವಣನೇ ರಾಮ, ಶಾಮ ಎಲ್ಲಾ. ರಾಮನ ಕಥೆ, ರಾವಣನ ಕಥೆಗಳೆರಡೂ ಸೇರಿದ ಮೇಲೆಯೇ ಒಂದು ರಾಮಾಯಣವಾಗಿದ್ದು, ದೀಪಾವಳಿ ಹುಟ್ಟಿದ್ದು. ಯಾವುದೇ ಕಥೆಯಲ್ಲಿ ಸರಿ ತಪ್ಪುಗಳೆರಡೇ ಆಯಾಮಗಳು ಇರುವುದಿಲ್ಲ. ಸರಿಯಲ್ಲದೇ ಇರುವುದು ತಪ್ಪು, ತಪ್ಪಲ್ಲದೇ ಇರುವುದು ಸರಿ ಅನ್ನುವ ವಾದ ಪ್ರಬುದ್ಧವಾದದ್ದಲ್ಲ. ಚಿಕ್ಕವರಿದ್ದಾಗ ಬ್ಲಾಕ್ ಅಂಡ್ ವೈಟ್ ಟಿವಿಯಲ್ಲಿ ಸಿನಿಮಾ ನೋಡುತ್ತಾ, 'ಅಪ್ಪಾ, ಇವಾ ಚೊಲೋ ಅದಾನೋ ಕೆಟ್ಟ ಅದಾನೋ?' ಎಂದು ಕೇಳುತ್ತಿದ್ದೆವು. ಒಳ್ಳೆಯವನ ಪಾರ್ಟಿ ಆಗಿ, ಅಲ್ಲಿ ನಡೆಯುವ ಕಥೆಯನ್ನು ನೋಡಿ ಆನಂದಿಸಲು ಆಗ ಸ್ವಲ್ಪ ಸುಲಭವಾಗುತ್ತಿತ್ತು. 'ಒಳ್ಳೆಯವನು' ಹುಡುಗಿಯನ್ನು ರೇಗಿಸಿದರೆ ಅದು ಗಂಡಸುತನ, 'ಕೆಟ್ಟವನು' ರೇಗಿಸಿದರೆ ಅದು ಹಿಂಸೆ, ಒಳ್ಳೆಯವನು ಎರಡು ಬಗೆದರೆ ಅದು ಪರಿಸ್ಥಿತಿ, ಕೆಟ್ಟವನು ತಪ್ಪು ಮಾಡಿದರೆ ಅದು ಅಪರಾಧ. ಒಮ್ಮೊಮ್ಮೆ ಯೋಚಿಸಿದರೆ ಈಗಲೂ ಸಹ ನಾವು ಆ ಸಿನಿಮಾ ನೋಡುವ ಪುಟ್ಟ ಹುಡುಗ/ಹುಡುಗಿರಿಯರಾಗೇ  ಉಳಿದು ಹೋದೆವಾ ಅಂತ ಅನಿಸುತ್ತದೆ. ಒಂದು ಘಟನೆ ಶುರುವಾಗೋ ಮುನ್ನವೇ ಯಾರೋ ಒಬ್ಬರನ್ನು ಇದರಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಅಂತ ಕೇಳಿ, ಆ 'ಒಳ್ಳೆಯವರ' ಪಕ್ಷದವರಾಗಿ ಆಮೇಲೆ ನಡೆಯುವ ಕಥಾನಕವನ್ನು ನೋಡಿ, ಕೆಟ್ಟವರನ್ನು ನಿಂದಿಸಿ, ಶಪಿಸಿ ಆನಂದಿಸುತ್ತೇವೆ. ನಮ್ಮ ಬದುಕಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಅಂತ ಹೇಳುವುದು/ನಿರ್ಣಯಿಸುವುದು ಇಂಥ ದಾರಿ ಹೋಹಕರೇ. ಕಪ್ಪು ಬಿಳುಪು ಸಿನಿಮಾಗಳು, ಕಥೆಗಳನ್ನು ನೋಡಿ ನೋಡಿ ಬೆಳೆದ ಪೀಳಿಗೆಗೆ, ಕಪ್ಪು ಮತ್ತು ಬಿಳುಪುಗಳಷ್ಟೇ ಸತ್ಯ ಅಂತ ಅನಿಸಿರಬಹುದು. ಕಪ್ಪು ಬಿಳುಪುಗಳ ನಡುವೆಯೂ ಸಾಕಷ್ಟು ಬಣ್ಣಗಳಿವೆ, ಛಾಯೆಗಳಿವೆ ಎಂಬುದು ನಮಗೆ ಮರೆತು ಹೋದಂತಿದೆ.

ನಮ್ಮ ಸುತ್ತ ನಡೆಯುವ ಪ್ರತಿಯೊಂದು ಘಟನೆ, ಪರಿಸ್ಥಿತಿ, ಸಂಗತಿಗೆ ಸಾವಿರಾರು ಆಯಾಮಗಳಿರುತ್ತವೆ. ಕಪ್ಪು ಬಿಳುಪಿನಲ್ಲಿ ನೋಡದೇ, ಯಾವ ಉಲ್ಲೇಖಗಳಿಂದ ಪ್ರಭಾವಿತರಾಗದೇ   ನಡೆದದ್ದನ್ನು ನಡೆದ ಹಾಗೆಯೇ ಕಂಡು ನಮ್ಮದೇ ಸತ್ಯ, ಅಸತ್ಯ ಗಳನ್ನು ಹುಡುಕುವುದರಲ್ಲಿ ಬದುಕು ಅಡಗಿದೆ. ಗಡಿಯಾರದ ಲೋಲಕಕ್ಕೆ (ಪೆಂಡುಲಮ್) ಇರುವುದು ಎರಡೇ ತುದಿಗಳಾದರೂ ಅದುಯಾವ ತುದಿಗೂ ಅಂಟಿಕೊಂಡಿರುವುದಿಲ್ಲ. ಲೋಲಕವು ಸದಾ ಎರಡು ತುದಿಗಳ ನಡುವೆ ಪಯಣಿಸುತ್ತದೆ, ಆ ಪಯಣವೇ ಜಗತ್ತಿಗೆ ಸಮಯದ ಅರಿವು ಮೂಡಿಸುತ್ತದೆ. ಇತಿಹಾಸ, ಪುರಾಣಗಳಲ್ಲಿ ಬರೆದಿದೆ ಎಂದು ಅದೇ ಹಳೆಯ ಕಪ್ಪು ಬಿಳುಪಿನ ಕನ್ನಡಕ ಹಾಕಿಕೊಂಡು ಮುಂದೆ ನಡೆಯುವುದನ್ನೆಲ್ಲ ನೋಡುತ್ತಾ ಕುಳಿತರೆ ಮತ್ತದೇ ಬ್ಲಾಕ್ ಅಂಡ್ ವೈಟ್ ಟಿವಿ ಕಥೆಯಾದೀತು. ಇತಿಹಾಸ ಎಂಬುದು ಇತಿಹಾಸಕಾರನ ಹೊಟ್ಟೆಪಾಡು; ಇತಿಹಾಸ ಓದುವವನಿಗೆ ಅದು ಬರೀ ಒಂದು  ಕಥೆ. ಇತಿಹಾಸಕ್ಕೆ ಜೋತು ಬಿದ್ದು ಭವಿಷ್ಯವನ್ನು ನೋಡಿದರೆ ಜೋತಾಡಿ ಕಣ್ಣು ಮಂಜಾಗುತ್ತದೆಯಷ್ಟೇ. ನೋಟುಗಳನ್ನು ಬದಲಿಸಿದ ರಾಜಕೀಯ ಪಕ್ಷದವರೇ ಊರುಗಳ ಹೆಸರು ಬದಲಾಯಿಸುವುದನ್ನು ಕಂಡು ಅಚ್ಚರಿಯಾಗುತ್ತದೆ. ಒಂದು ಕಾಲದಲ್ಲಿ ಜನ ಸಾಮಾನ್ಯರಿಗೆ ದೇವತೆಯಾಗಿದ್ದ ಇಂದಿರಾ ಗಾಂಧಿಯೇ ಎಮರ್ಜೆನ್ಸಿ ತಂದದ್ದು. ದೇಶಕ್ಕೇ ತಂದೆಯಾದವರು ಸ್ವಂತ ಮಗನಿಗೆ ತಂದೆಯಾಗುವುದರಲಿ ಎಡವಿದರು ಎಂದು ಕೂಡ ಅಲ್ಲಲ್ಲಿ ನಾವು ಓದುತ್ತೇವೆ. ನಿನ್ನೆಯ ಒಳ್ಳೆಯದರಲ್ಲಿ ಇವತ್ತು ಕೆಟ್ಟದ್ದು ಕಾಣಬಹುದು, ಕಂಡರೆ ಅದು ತಪ್ಪಲ್ಲ. ನಿನ್ನೆಗಿಂತ ನಾವು ಇವತ್ತು ಕಣ್ಣು ಅಗಲಿಸಿ ನೋಡಿದ್ದೇವೆ ಎಂದಷ್ಟೇ ಅದರ ಅರ್ಥ.

ರಾಮ ರಾವಣರು ಇಬ್ಬರು ವ್ಯಕ್ತಿಗಳಲ್ಲದೇ ಇರಬಹುದು, ದೇವರುಗಳಲ್ಲದೇ ಇರಬಹುದು, ಅವರಿಬ್ಬರೂ ಬರೀ ನಮ್ಮ ಮನಸಿನ ಎರಡು ಬಣ್ಣಗಳಾಗಿರಬಹುದು. ಅವರಿಬ್ಬರೂ ನಮ್ಮಲ್ಲಿರುವ ಒಳ್ಳೆತನ, ಕೆಟ್ಟ ಗುಣಗಳ ಪ್ರತೀಕ ಮಾತ್ರವೇ ಆಗಿರಬಹುದು. ನೇರ ಬುದ್ಧಿ ಮಾತು ಹೇಳಿದರೆ ಗಮನ ಕೊಟ್ಟು ಕೇಳದ ಒಂದು ಪುಟ್ಟ ಮಗುವಿಗೆ ಅಜ್ಜಿಯೊಬ್ಬಳು ಕಥೆ ಮಾಡಿ ಹೇಳಿದ ಒಂದು ದೊಡ್ಡ ಕಥೆಯೇ ರಾಮಾಯಣವಾಗಿರಬಹುದು, ಕಂಡವರಾರು. ಹಾಗೇನಾದರೂ ಇದ್ದರೆ ಆ ಅಜ್ಜಿಯ ಪ್ಲಾನ್ ವರ್ಕ್ ಔಟ್ ಆಯಿತು, ಬರೀ ಆ ಪುಟ್ಟ ಹುಡುಗನಲ್ಲದೇ ಒಂದಿಡೀ ನಾಗರಿಕತೆಯೇ  ಆ ಕಥೆ ಕೇಳಿತು, ಬುದ್ಧಿ ಕಲಿಯಿತು. ರಾಮ ರಾವಣರಿದ್ದರೋ ಇಲ್ಲವೋ ಎಂಬುದು ನನ್ನ ವಾದವಲ್ಲ,  ಅವರು ಈಗಲೂ ಇದ್ದಾರೆ ಎಂಬುದು, ಪ್ರತಿಯೊಂದರಲ್ಲಿ. ತನ್ನ ದೇಶಕ್ಕೆ ರಾಮನಾದ ಜರ್ಮನಿಯ ಹಿಟ್ಲರ್ ನೋಡು ನೋಡುತ್ತಿದ್ದಂತೆಯೇ ಜಗತ್ತಿಗೆ ರಾವಣನಾಗಿ ಹೋಗುತ್ತಾನೆ. ಗಟ್ಟಿಯಾದ ಬಂಡೆಗಲ್ಲು ಕೆಲ ವರ್ಷಗಳ ನಂತರ ಕರಗಿ ಮರಳಾಗುತ್ತದೆ. ರಾತ್ರಿ ಕಳೆದ ನಂತರ ಕತ್ತಲೂ ಬೆಳಕಾಗುತ್ತದೆ. ನಮ್ಮೊಡನೆ ನಡೆಯುವ ಪ್ರತಿ ಸಂಗತಿ, ಘಟನೆ, ಆಗು ಹೋಗುಗಳಲ್ಲಿಯೂ  ರಾಮ ರಾವಣರು ಹುಟ್ಟಿ, ಬೆಳೆದು, ಆಡಿ, ಗುದ್ದಾಡಿ, ಕೆಟ್ಟು, ಉದ್ಧಾರವಾಗಿ ಕಡೆಗೆ ಸಮಯ ಸತ್ಯದ ಮುಂದೆ ಇಬ್ಬರೂ ಇತಿಹಾಸ ಆಗಿಹೋದರೆ ಮಾತ್ರ ಮನುಷ್ಯತ್ವಕ್ಕೆ ದೀಪಾವಳಿ.


           

Saturday, October 27, 2018

ಊರ ಉಸಾಬರಿ, ತಪ್ಪು ಯಾವುದು, ಯಾವುದು ಸರಿ.

   
             ಚಿಕ್ಕವನಿದ್ದಾಗ ತರಕಾರಿ ಹೆಚ್ಚುವ ಚಾಕುವನ್ನು ನಾನು ಮುಟ್ಟದೇ ಇರಲಿ ಅಂತ ಅವ್ವ ನನಗೆ 'ಅದ್ರಾಗ ಬವ್ವಾ ಐತಿ, ಮುಟ್ಟಬ್ಯಾಡ' ಅಂತ ಹೇಳಿದ್ದಳು. ಅವ್ವ ಹೇಳಿದರೆ ಆಯ್ತು, ಇದ್ದರೂ ಇರಬಹುದು ಅಂತ ನಾನು ಹೆದರಿಕೊಂಡು ಹದಿನೆರಡು ವಯ್ಯಸ್ಸಿನವರೆಗೂ ಆ ಚಾಕುವಿನ ಹತ್ತಿರ ಹೋಗಿರಲೇ ಇಲ್ಲ. ಆಮೇಲೆ ಅಲ್ಲಿ ಇಲ್ಲಿ ನೋಡಿ, ಕೇಳಿ, ತಿಳಿದ ನಂತರ ಅನಿಸಿದ್ದು ಆಕೆ ಹಾಗೆ ಹೇಳುವುದಕ್ಕೆ ಬೇರೆಯೇ ಕಾರಣ ಇತ್ತು ಅಂತ. ಅಕಸ್ಮಾತ್ ಅದನ್ನೇ ನಂಬಿಕೊಂಡು ನಮ್ಮಮ್ಮ ಹೇಳಿದ್ದೇ ಸರಿ, ಆಕೆ ನನಗೋಸ್ಕರ ಇಷ್ಟೆಲ್ಲಾ ಮಾಡಿದ್ದಾಳೆ ಅವಳ ಮಾತು ಹೇಗೆ ಸುಳ್ಳಾದೀತು? ಅವಳು ತಪ್ಪು ಮಾಡಲು ಸಾಧ್ಯವೇ ಇಲ್ಲ, ಅವಳು ದೇವರು ಅಂತ ಪ್ರಾಕ್ಟಿಕಲ್ ಆಗುವಲ್ಲಿ ಭಾವೂಕನಾಗಿ ಆ ಚಾಕುವಿನಿಂದ ಇನ್ನೂ ದೂರವೇ ಉಳಿದಿದ್ದರೆ ಈಗ ತರಕಾರಿ ಹೆಚ್ಚಲಾಗದೇ ನನ್ನ ಹೆಂಡತಿಯ ಕಯ್ಯಲ್ಲಿ ಶಾಸ್ತಿಯಾಗುತ್ತಿದ್ದಿದ್ದು ಖಂಡಿತ. ಅಂದರೆ, ಇಲ್ಲಿ ಮಾತು ನಾವು ವ್ಯಕ್ತಿಯನ್ನು ಅಥವಾ ವಸ್ತುವನ್ನು ಗೌರವಿಸುವುದರ ಬಗ್ಗೆ ಅಲ್ಲ, ಅದನ್ನು ಮೀರಿ ವಿಷಯವನ್ನು ಕಾಣುವುದರ ಬಗ್ಗೆ. ಇಲ್ಲಿ ಚಾಕುವಿನ ಪರಿಣಾಮಗಳು  'ವಿಷಯ', ಅಮ್ಮ ವ್ಯಕ್ತಿ ಅಥವಾ ಅಮ್ಮನ ಮಾತು ಒಂದು ವಸ್ತು.

ಕೆಲವು ಸಂಬಂಧವಿರದ ಹೇಳಿಕೆಗಳನ್ನು ಹೇಳುತ್ತೇನೆ, ಸಂಬಂಧ ಕಂಡಲ್ಲಿ ಹೆಮ್ಮೆ ಪಡಿ.
ನಾನಾ ಪಾಟೇಕರ್ ಒಬ್ಬ ಉತ್ತಮ ಕಲಾವಿದ, ಸರಳ ಜೀವಿ, ಅನೇಕ ಪ್ರಶಸ್ತಿಗಳ ಸರದಾರ, ಅಂಥವರಿಂದ ಕಲಿಯುವುದು ಬೆಟ್ಟದಷ್ಟಿದೆ; ಆದರೆ ಕೆಲ ಮಹಿಳೆಯರು ಅವರ ಸ್ವಭಾವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ದೀಪಾವಳಿ ಕತ್ತಲಿನ ಮೇಲೆ ಬೆಳಕಿನ ವಿಜಯದ ಪ್ರತೀಕ, ಅದಕ್ಕೆ ಸಿಕ್ಕಾಪಟ್ಟೆ ಮದ್ದು ಸಿಡಿಸಿ ಬೆಳಕು ತರುವ ಪ್ರಯತ್ನ ನಮ್ಮೆಲ್ಲರದ್ದು. ಬಕ್ರಿ ಈದ್ ಹಬ್ಬವು ತ್ಯಾಗದ ಪ್ರತೀಕ, ಅದಕ್ಕೆಂದೇ ನಾವು ಎಲ್ಲಕ್ಕಿಂತ ಹೆಚ್ಚು ಪ್ರೀತಿಯ ಒಂದನ್ನು ತುಂಬಾ ದೇವರಿಗೆ ಬಲಿ ಕೊಡುತ್ತೇವೆ. ಬಸವಣ್ಣನವರು ಜಾತಿ ಬಿಡಿ ಅಂತ ಹೇಳಿದರು,ಅದನ್ನು ಪಾಲಿಸುವ ನಿಟ್ಟಿನಲ್ಲಿ ನಾವು ಅವರ ಹೆಸರಿನಲ್ಲೇ ಒಂದು ಜಾತಿಯನ್ನು ಸೃಷ್ಟಿಸಿ ಅವರ ದಾರಿಯಲ್ಲಿ ನಡೆಯುವ ಪ್ರಯತ್ನದಲ್ಲಿದ್ದೇವೆ. ಅರ್ಜುನ್ ಸರ್ಜಾ ಒಬ್ಬ ಅಪ್ರತಿಮ ನಟ, ನಮಗೆಲ್ಲ ಅವರೆಂದರೆ ಪ್ರೀತಿ, ಹೆಮ್ಮೆ  ಜೊತೆಗೆ ಅವರು ಹನುಮಂತನ ಕಟ್ಟಾ ಭಕ್ತರೂ ಹೌದು. ಶೃತಿ ಹರಿಹರನ್ ಕೂಡ ಒಬ್ಬ ಉತ್ತಮ ನಟಿ, ಬಹುಭಾಷಾ ಚಿತ್ರಗಳಲ್ಲಿ ಗುರುತಿಸಿಕೊಂಡವರು; ಆದರೆ ಆದ್ಯಾವುದೋ ಇಂಟರ್ವ್ಯೂ ನಲ್ಲಿ ಅವರು ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ, ಛೆ ಛೆ ಬ್ರಹ್ಮಾಂಡ ತಪ್ಪು! ನರೇಂದ್ರ ಮೋದಿ ಒಬ್ಬ ಆಕರ್ಷಕ ಭಾಷಣಕಾರ, ಅವರು ಎಷ್ಟು ಮಾತನಾಡಿದರೂ ಕೇಳಬೇಕೆನಿಸುತ್ತದೆ, ಅದಕ್ಕೆಂದೇ ಅವರು ಬಹುಷಃ ಅಷ್ಟು ಮಾತನಾಡುತ್ತಾರೆ. ಜೀಸಸ್ ಕ್ರೈಸ್ಟ್ ದೇವರ ಮಗ, ಅವರಷ್ಟೇ ಸತ್ಯ, ಅವರಿಗೆ ಎರಡು ಬಗೆದರೆ ದೇವರು ಕ್ಷಮಿಸುವುದಿಲ್ಲ. ಶಿವರಾಜಕುಮಾರ್ ಅಣ್ಣಾವ್ರ ಮಗ ಅವರಿಗೆ ಯಾರಾದರೂ ಸಿನಿಮಾದಲ್ಲೂ ಹೊಡೆದರೆ ಅಭಿಮಾನಿ ದೇವರುಗಳು ಕ್ಷಮಿಸುವುದಿಲ್ಲ.

         ಮೇಲೆ ಹೇಳಿದ ಎಲ್ಲಾ ವಾಕ್ಯಗಳ್ಲಲೂ ವಸ್ತು ಹಾಗು ಕೆಲ ವಿಷಯಗಳಿವೆ. ನಾನಾ ಪಾಟೇಕರ್ ಮಾತಿನ ವಸ್ತುವಾದರೆ ಅವರ ಮೇಲೆ ಹಾಕಲಾದ ಅಪವಾದಗಳು ವಿಷಯ. ದೀಪಾವಳಿ ಮಾತಿನ ವಸ್ತುವಾದರೆ, ಮದ್ದು ಸಿಡಿಸಿ ಪರಿಸರ ಮಾಲಿನ್ಯ ಮಾಡುವುದೊಂದು ವಿಷಯ. ಬಕ್ರಿ ಈದ್ ಮಾತಿನ ವಸ್ತುವಾದರೆ, ಸಾಮೂಹಿಕ ಪ್ರಾಣಿ ಹತ್ಯೆ  ಒಂದು ವಿಷಯ. ಅರ್ಜುನ್ ಸರ್ಜಾ ವಸ್ತು, ಅವರ ಮೇಲಿದ್ದ ಆಪಾದನೆಗಳು ವಿಷಯ. ಶೃತಿ ಹರಿಹರನ್ ವಸ್ತು,ಅವರಾಡಿದ ಮಾತುಗಳು ವಿಷಯ. ನರೇಂದ್ರ ಮೋದಿ ಮಾತಿನ ವಸ್ತುವಾದರೆ, ಅವರ ಭಾಷಣದ ಹವ್ಯಾಸ ಒಂದು ವಿಷಯ. ಜೀಸಸ್, ಶಿವಣ್ಣ ಮಾತಿನ ವಸ್ತುವಾದರೆ, ಅವರ ಅಭಿಮಾನದಲ್ಲಿ ನಡೆಯಬಹುದಾದ ಮೂಢ ಆಚರಣೆಗಳು ವಿಷಯ. ಈ ಬರಹವೂ ಒಂದು ವಸ್ತು, ವಿಷಯವೇನೆಂದರೆ ನಾವು ಒಂದು ಸೃಜನಶೀಲ ಸಮಾಜವಾಗಿ ಇಂತಹ ನೂರೆಂಟು ದೈನಂದಿನ  'ವಸ್ತು' ಹಾಗು 'ವಿಷಯ'ಗಳ ನಡುವೆ ಇರುವ ಅಂತರವನ್ನು ಎಷ್ಟು ಸ್ಪಶ್ಟವಾಗಿ ಗುರುತಿಸಿ ಪ್ರತಿಕ್ರಯಿಸುತ್ತಿದ್ದೇವೆ ಹಾಗೂ ಸ್ಪಂದಿಸುತ್ತಿದ್ದೇವೆ ಎಂಬುದು. ಎಷ್ಟೋ ಬಾರಿ ಒಂದು ಪರಿಸ್ಥಿತಿ/ಘಟನೆಯಲ್ಲಿ ನಾವು ವಸ್ತು ವಿಷಯಗಳನ್ನ ಬೇರ್ಪಡಿಸದೇ ಭಾವೂಕರಾಗಿ, ಯಾವುದೋ ಮೂಢ ನಂಬಿಕೆಯ ಕಾರಣದಿಂದಾಗಿ, ಹುಚ್ಚು ಅಭಿಮಾನದಿಂದಾಗಿ ಹಠಾತ್ತನೇ ನಿರ್ಣಯಿಸಿಬಿಡುತ್ತೇವೆ. ಗುಪ್ತರ ಆಳ್ವಿಕೆಯವರೆಗೂ ನಾವು ಭೂಮಿ ಸಪಾಟಾಗಿದೆ ಅಂತಲೇ ನಂಬಿದ್ದೆವು, ಭೂಮಿ ಗೋಲಾಕಾರದಲ್ಲಿದೆ ಅಂತ ಹೇಳಿದವರಿಗೆಲ್ಲ ತಲೆ ತಿರುಕನ ಪಟ್ಟ ಕಟ್ಟಿ ನೇಣು ಹಾಕಿದ್ದೂ ಉಂಟಂತೆ. ಜಗತ್ತಿಗೆ ಒಂದೇ ಸತ್ಯ ಅಂತ ನಂಬಿದ ಒಂದು ಸಮಾಜಕ್ಕೆ, ಇಲ್ಲ! ಇನ್ನೊಂದೇನೋ ಬೇರೆ ಇದೆ/ಇರಬಹುದು ಅಂತ ಒಬ್ಬ ಹೇಳಿದರೆ ಒಪ್ಪಿಕೊಳ್ಳುವುದು ತುಸು ಹೊತ್ತಾಗಲಿ ಆದರೆ ಅವನನ್ನು ಎಳೆದು ನೇಣು ಹಾಕಿತೆಂದರೆ? ಎಷ್ಟು ಭಯಾನಕ ಪರಿಸರವದು? ಅಂತಹ ಪರಿಸರದಲ್ಲಿ ಹೊಸತು ಹುಟ್ಟುವುದೆಷ್ಟು ದುರ್ಲಭ. ನಮ್ಮ ಸೌಭಾಗ್ಯ, ಎಲ್ಲೋ ಒಂದು ಕಡೆ ಯಾರೋ ಒಬ್ಬರು ಕಿವಿ ಕೊಟ್ಟು, ನಿನ್ನ ವಿಷಯವನ್ನಾದರೂ ಹೇಳು ಅಂತ ಅಂಥದ್ದೇ  ಒಬ್ಬ 'ತಲೆ ತಿರುಕ'ನಿಗೆ ಹೇಳಿರಬಹುದು. ಆಗ ಭೂಮಿಯ ಆಕಾರದ ಬಗ್ಗೆ ಚರ್ಚೆಗಳು ಶುರುವಾಗಿ ಈಗ ನಮಗೆ ಯಾವುದು ಗೋಲು, ಯಾವುದು ಓಳು ಎಂದು ತಿಳಿದಿದೆ.

ವಿಷಯ ಇಷ್ಟೇ, ಯಾರ ಬಗ್ಗೆ ಯಾರು ಹೇಳಿದರು ಹೇಳಿದರು ಅಂತ ಭಾವೂಕರಾಗಿ, ಹುಚ್ಚು ಅಭಿಮಾನದಿಂದಾಗಿ, ಸಾಮೂಹಿಕವಾಗಿ ಒಮ್ಮೆಲೇ ನಿರ್ಧಾರಗಳಿಗೆ ಬಾರದೇ, ಏನು ಹೇಳಿದರು? ಯಾಕೆ ಹೇಳಿರಬಹುದು ಎಂದು ತುಸು ಪ್ರಾಕ್ಟಿಕಲ್ ಆಗಿ, ತಾಳ್ಮೆಯಿಂದ ಯೋಚಿಸೋಣ. ಕಣ್ಣಲ್ಲಿ ಕಂಡು, ಕಿವಿಯಲ್ಲಿ ಕೇಳಿ input ತೆಗೆದುಕೊಂಡರೆ ಮಾತ್ರ ಮೆದುಳು ಅದನ್ನು analyse ಮಾಡಿ ಒಂದು output ನೀಡಬಲ್ಲದು. ಬಾಯಿಯಿಂದ ತಿಂದು, ಹೊಟ್ಟೆಯಲ್ಲಿ ಜೀರ್ಣಿಸಿದರೆ ಮಾತ್ರ ಬರಬೇಕಾದ ಜಾಗದಿಂದ ಮಲವು ಹೊರಬಂದು ದೇಹ ಶುಚಿಯಾರುವುದು. Input ಇರದೆಯೇ ನಮ್ಮ ತಲೆಯಲ್ಲಿ ಇದ್ದಿದ್ದನ್ನೇ ಹೊರ ಹಾಕುತ್ತ ಕುಳಿತರೆ ಅದು ಬಾಯಿಂದ ಸರಿಯಾಗಿ ತಿನ್ನದೇ ಬಾಯಿಂದಲೇ ಹೊರಹಾಕಿದ ವಾಂತಿಯಂತೆ, ಇದರಿಂದ ದೇಹಕ್ಕೆ ಬರುವುದು ರೋಗ ರುಜಿನಗಳಷ್ಟೇ. ಸಮಾಜವೂ ಒಂದು ಸದಾ ವಿಕಸಿತಗೊಳ್ಳಬೇಕಾದ ದೇಹ, ಸಮಯಕ್ಕೆ ತಕ್ಕಂತೆ ಊಟ ಮಾಡಿ, ಜೀರ್ಣಿಸಿ, ಮಲವನ್ನು ಹೊರಹಾಕುತ್ತಲೇ ಇರಬೇಕು, ಇಲ್ಲವಾದರೆ ಆ ಸಮಾಜದ ಬೆಳವಣಿಗೆ ಕಷ್ಟ. ಊಟ ಯಾವುದು, ಮಲ ಯಾವುದು ಅಂತ ಗುರುತು ಸಿಗುವುದು ನೋಡುವುದರಿಂದ, ಕೇಳುವುದರಿಂದ, ಸಮಾಧಾನದಿಂದ ತಿಳಿದುಕೊಳ್ಳುವುದರಿಂದ. ಊಟದ ಮೇಲಿರಬೇಕಾದ ಪ್ರೀತಿ ಮಲದ ಮೇಲೆ ಆಗಿಹೋದರೆ ಏನನ್ನೂ ಹೊರಹಾಕಬೇಕೆಂದು ತಿಳಿಯದೇ confuse ಆಗಿ ಹಾಳಾಗಿ ಹೋಗುತ್ತದೆ.

ಒಂದೋ ಸುದ್ದಿಯಲ್ಲಿರುವ ಯಾವುದೇ ವಸ್ತು ಅಥವಾ ವಿಷಯಗಳ ಬಗ್ಗೆ ಗಮನ ಕೊಡಬೇಡಿ, PUBG ಆಡಿಕೊಂಡು, ಸುದೀಪ್-ಶಿವಣ್ಣ ಕಟ್ ಔಟ್ ಗಳಿಗೆ ಅರ್ಧ ಲೀಟರ್ ಹಾಲು ಸುರಿದು ಜಮ್ಮಂತ ಇದ್ದುಬಿಡಿ. ಇಲ್ಲವೋ 'ವಸ್ತು' ಹಾಗೂ 'ವಿಷಯ' ಎರಡಕ್ಕೂ ಸಮನಾದ ಗಮನ ಕೊಡಿ. ನಾನಾ ಪಾಟೇಕರ್, ಅರ್ಜುನ್ ಸರ್ಜಾ ದೊಡ್ಡವರೇ, ಹಾಗಂತ ಅವರು ತಪ್ಪೇ ಮಾಡಿಲ್ಲ ಅಂತ ಮೂಢವಾಗಿ ನಂಬಿ ಕುಳಿತರೆ ಆಗದು, ಹಾಗೆಯೇ ಶ್ರುತಿ ಹರಿಹರನ್ ತನುಶ್ರೀ ದತ್ತ ಒಳ್ಳೆಯವರು ಅಥವಾ ಕೆಟ್ಟವರು ಅಂತ ಒಂದೇ ಉಸಿರಲ್ಲಿ ಹೇಳಲಾಗುವುದಿಲ್ಲ, ಎಲ್ಲರೂ ಹೇಳುವುದನ್ನು  ಕೇಳಿ ತಿಳಿದುಕೊಂಡಮೇಲೆಯೇ ಪರಿಶೀಲನೆಗೆ ದಾರಿ. ಹಾಗೆಯೇ ನಾವು ಆಚರಿಸುವ ಹಬ್ಬಗಳು, ನಮ್ಮ ಆಚರಣೆಗಳು ತುಂಬಾ ಹಳೆಯ ಕಾಲದಿಂದ ನಡೆದು ಬಂದ ಮಾತ್ರಕೆ ಅವುಗಳು ನೂರಕ್ಕೆ ನೂರು ಸರಿ ಅಂತಲೂ ಹೇಳಲಾಗುವುದಿಲ್ಲ, ಭೂಮಿ ಸಪಾಟಾಗಿ ಇರದೇ ಇರಬಹುದು ಎಂಬ ಸಣ್ಣ ಸಾಧ್ಯತೆಯ ಅರಿವು ನಮಗೆ ಸಕಾಲದಲ್ಲಿ ಬಂದಿದ್ದಕ್ಕೇ ನಾವು ಈಗ ಜಿಯೋ ಇಂಟರ್ನೆಟ್ ನಲ್ಲಿ ಬಿಗ್ ಬಾಸ್ ನೋಡುತ್ತಿರುವುದು. ಗಣೇಶನ ಶಿರ ಕಡಿದು ತಾನು ತಪ್ಪು ಮಾಡಿದೆ ಎಂದು ಶಿವ ಅರಿತಮೇಲೆಯೇ ನಮಗೆ ಗಣೇಶನ ಹಬ್ಬ ಹುಟ್ಟಿದ್ದು. ಆಡುವುದಕ್ಕೆ ಬಾಯಿ ಒಂದೇ, ಆದರೆ ಕೇಳುವುದಕ್ಕೆ ಎರಡು ಕಿವಿಗಳು, ಎರಡರಷ್ಟು ಕೇಳಿಸಿಕೊಳ್ಳೋಣ. ಅಮ್ಮನ ಆ ಪುಟ್ಟ ಸುಳ್ಳನ್ನು ಧನಾತ್ಮಕವಾಗಿ ಕಂಡು, ಅರಿತುಕೊಂಡ ಮೇಲೆಯೇ ನಾವು ಚಾಕುವಿನಿಂದ ಅನಾಹುತಗಳಿಂದ ದೂರ ಉಳಿದೆವು, ಕಲಿಯಬೇಕಾದ ಸಮಯದಲ್ಲಿ ತರಕಾರಿ ಹೆಚ್ಚುವುದನ್ನೂ ಕಲಿತೆವು. ಇನ್ನೂ ಕಲಿಯದೇ ಇರುವವರು ಬೇಗ ಕಲೀರಪ್ಪಾ, ಹೆಂಡತಿಯಿಂದಾಗಬಹುದಾದ ಅನಾಹುತಗಳಿಂದ ಉಳಿಯಬಹುದು.      


Thursday, October 18, 2018

ಒಂಭತ್ತು ದಿನಗಳ ದುರ್ಗಿ


 
 
             ಆಫೀಸಿಗೆ ತಡವಾಯಿತೆಂದು ಅವಸರದಿ ಓಡುತ್ತ ಕ್ಯಾಬ್ ಹತ್ತುವಾಗ ತನ್ನ ಆರು ವರ್ಷದ ಮಗ ಕಿಟಕಿಯಿಂದಲೇ ಅಮ್ಮ..ಬಾಯ್! ಎಂದು ಕೂಗಿಕೊಂಡನು. 'ಬಾಯ್ ಪುಟ್ಟು' ಎಂದು ಕೈ ಮಾಡುತ್ತಾ ಕಯ್ಯಲ್ಲಿದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ಗಾಡಿಯಲ್ಲಿ ಇಟ್ಟು ಕುಳಿತುಕೊಂಡಳು ಗಂಗೆ. ತಾನು ಹಾಗೂ ತನ್ನ ಗಂಡ ಇಬ್ಬರೂ ಕಂಪನಿ ಕೆಲಸಗಳಿಗೆ ಹೋಗುತ್ತಾರೆ. ಆರು ವರ್ಷದ ಮಗುವನ್ನು ನೋಡಿಕೊಳ್ಳಲು 'ಬಾಯೀ' ಯನ್ನು ನೇಮಿಸಿದ್ದಾರೆ, ಆಗಾಗ ಅತ್ತೆ- ಮಾವ ಕೂಡ ಬಂದು ನೆರವಾಗುತ್ತಾರೆ. ಗಂಗೆಯ ಅಪ್ಪ- ಅಮ್ಮ ಬರುವುದಿಲ್ಲ. ಗಂಡನ ಮನೆಯಿಂದ ಆದ ಕೆಲ ಪುಡಿ ಜಗಳಗಳಿಂದ ನೊಂದ ಅವರನ್ನು ತಾನೂ ಸಹ ದೂರವೇ ಇರಿಸಿದ್ದಾಳೆ. ಆಗಾಗ ಗಂಗೆಗೆ ಅಮ್ಮನ ನೆನಪಾಗುತ್ತದೆ. ಕೆಟ್ಟವನಲ್ಲದೇ ಇದ್ದರೂ ಗಂಡ ಯಾಕೋ ತನ್ನ ತವರು ಎಂದರೆ ತುಸು ರೇಗಾಡುತ್ತಾನೆ, ಇದರಿಂದ ತನ್ನ ತವರು ಮನೆಯವರಿಗೆ ಆಗುವ ತೊಂದರೆಗಳನ್ನ ನೋಡಿ ತನಗೆ ಬೇಜಾರಾಗುತ್ತದೆ. ಹೋದ ವಾರದಿಂದ ತಮ್ಮಮ್ಮನಿಗೆ ಬೆನ್ನು ನೋವು ಜೋರಾಗಿದೆಯಂತೆ, ಎರಡು ದಿನ ಆಸ್ಪತ್ರೆಗೂ ಸೇರಿಸಿ, ಅಪ್ಪ ಒಬ್ಬನೇ ಪೇಚಾಡುತ್ತಿದ್ದನ್ನು ನೆನೆದು ದಿನವೂ ನೋಯುತ್ತಾಳೆ. ಆಫೀಸಿನಿಂದ ತಾಸಿಗೊಮ್ಮೆ ಅಪ್ಪನಿಗೆ ಫೋನ್ ಮಾಡಿ ಅಮ್ಮನ ಆರೋಗ್ಯ ವಿಚಾರಿಸುತ್ತಾಳೆ. ತನ್ನೂರಿನ ಡಾಕ್ಟರ್ ನೀಡಿದ ಗುಳಿಗೆಗಳ ವಿವರಗಳನ್ನು ಫೋನಿನಲ್ಲೇ ಅಪ್ಪನಿಂದ ಕೇಳಿ ಬೆಂಗಳೂರಿನ ತನ್ನ ಡಾಕ್ಟರ್ ಸ್ನೇಹಿತರಲ್ಲಿ ವಿಚಾರಿಸಿದ್ದಾಳೆ. ಕೆಲಸದ ನಡು ನಡುವೆ ಗೂಗಲ್ ನಲ್ಲಿ ಬೆನ್ನು ನೋವಿಗೆ ಏನೇನು ಮಾಡಬೇಕು, ಏನು ಮಾಡಬಾರದೆಂದು ಹುಡುಕಿ ತಿಳಿದುಕೊಂಡು ಅಮ್ಮನಿಗೆ ಅವುಗಳನ್ನು ತಿಳಿಹೇಳುತ್ತಾಳೆ.  ಮನೆಯಲ್ಲಿ ತನ್ನ ಗಂಡ ಇಲ್ಲದ ವೇಳೆ ಮಗನಿಂದ ಅಜ್ಜ-ಅಜ್ಜಿಯರಿಗೆ ಫೋನು ಮಾಡಿಸಿ ಮಾತನಾಡಿಸುತ್ತಾಳೆ. ಮೊಮ್ಮಗ ಅಂದರೆ ಅಜ್ಜ-ಅಜ್ಜಿಯರಿಗೆ ಬ್ರಹ್ಮಾಂಡ ಪ್ರೀತಿ. 'ಅಜ್ಜಿ, ನೀ ಜಲ್ದಿ ಅರಾಮ್ ಆಗು, ನನ್ನ ಜೊತಿ ಆಟ ಆಡುವಂತಿ ಈಸಾರಿ ಊರಿಗೆ ಬಂದಾಗ' ಅಂತ ಮೊಮ್ಮಗ ಫೋನಿನಲ್ಲಿ ಹೇಳಿದರೆ ಖುಷಿಗೆ ಮರುಕ್ಷಣವೇ ಅಜ್ಜಿಯ ಬೆನ್ನು ನೋವು ಮಾಯ.

ಎರಡು ತಿಂಗಳ ಹಿಂದೆ ಗಂಡ ತನ್ನ ಹುಟ್ಟುಹಬ್ಬಕ್ಕೆಂದು ಮೊಬೈಲ್ ಗಿಫ್ಟ್ ಮಾಡಿದ್ದ. ತನ್ನ ಪಗಾರ ಜಾಸ್ತಿ ಆದ ನಂತರ ಪ್ರತಿ ತಿಂಗಳು ಎಕ್ಸ್ಟ್ರಾ ಬರುವ ಆ ಮೂರು ಸಾವಿರ ರೂಪಾಯಿಗಳನ್ನು ಕೂಡಿಟ್ಟು ಕೆಲ ತಿಂಗಳಾದ ಮೇಲೆ ಕಂತಿನಲ್ಲಿ ಒಂದು ಗೇರ್ ಲೆಸ್ ಬೈಕ್ ಖರೀದಿಸಿ ಗಂಡನಿಗೆ ಸರ್ಪ್ರೈಸ್ ಕೊಡುವುದೆಂದು ಲೆಕ್ಕ ಹಾಕುತ್ತಿದ್ದಾಳೆ. ಮನೆಗೆ ಒಂದು ಬೈಕ್ ಅಂತ ಆದರೆ ತನಗೆ ಹಾಗು ಗಂಡನಿಗೆ ಸಹಾಯವಾದೀತು. ಮನೆಯ ಖರ್ಚು, ಅತ್ತೆ ಮಾವರ ಜೀವನೋಪಾಯ ಮತ್ತು ದವಾಖಾನೆ ಖರ್ಚು, ಹಳೆಯ ಸಾಲದ ಈ.ಎಂ.ಐ ಗಳು, ಭವಿಷ್ಯದ ಪುಟ್ಟುವಿನ ಶಾಲೆಗೆಂ ಕೂಡಿಕೆಯೆಂದು ಗಂಡ ಹಗಲೂ ರಾತ್ರಿ ದುಡಿಯುತ್ತಾನೆ. ಅವನಿಗೂ ಬಹಳ ಕಷ್ಟಗಳಿವೆ, ಈ ಎಲ್ಲಾ ಗೋಜು ದುಗುಡಗಳಿಂದ ಧೈರ್ಯ ಸಾಲದೇ ಆಗಾಗ ಅವನು ಧೃತಿಗೆಟ್ಟು ತನ್ನ ಮೇಲೆ ರೇಗಾಡುವುದನ್ನು ಗಂಗೆ ಇಂದಿಗೂ ಯಾರ ಮುಂದೆಯೂ ಹೇಳಿಕೊಂಡಿಲ್ಲ. ಅವನ ವಯ್ಯಸ್ಸಿಗೆ ಅವನಿಗೆ ಜವಾಬ್ದಾರಿಗಳು ಜಾಸ್ತಿ, ಸಮಾಧಾನ ಕಡಿಮೆ, ಮುಂದೆ ಹೋಗ್ತಾ ಎಲ್ಲ ಸರಿ ಹೋಗುತ್ತೆ ಎಂಬ ನಂಬಿಕೆ ಅವಳದು. ಹಿಂದೊಮ್ಮೆ ಹೀಗೆ ಯಾವುದೋ ಆಫೀಸ್ ಟೆನ್ಶನ್ ನಿಂದ ರೇಗಿಹೋಗಿದ್ದ ಅವನು ಸಿಟ್ಟಾಗಿ ಯಾವುದೋ ಮಾತಿಗೆ ತನ್ನನ್ನು ಹೊಡೆದಿದ್ದ. ತನ್ನ ಮುಖದ ಮೇಲೆ ಮೂಡಿದ ಹೆಪ್ಪು ಗಟ್ಟಿದ್ದ ರಕ್ತದ ಗುರುತನ್ನು ಕಂಡು ಮಗ ಪುಟ್ಟು ರಾತ್ರಿ ಅಳುತ್ತ ಬಂದು 'ಅಮ್ಮಾ.. ನೋವಾಗಕತ್ತೇತಿ?' ಅಂತ ಕೆನ್ನೆ ಸವರಿ ಕೇಳಿದಾಗ ತನಗೆ ಅಳು ತಡೆಯಲಾರದೆ ಪುಟ್ಟುವನ್ನು ತಬ್ಬಿ ಅತ್ತಿದ್ದಳು. ಅದಾಗಿ ಸ್ವಲ್ಪ ದಿನಕ್ಕೇ ಗಂಡನ ಬಿ.ಪಿ ಜಾಸ್ತಿಯಾಗಿ ಬಿದ್ದಾಗ ಅವನನ್ನು ಆಫೀಸಿನಿಂದಲೇ ಆಸ್ಪತ್ರೆಗೆ ಕರೆತಂದಿದ್ದೇವೆ ಎಂದೊಂದು ಫೋನ್ ಕರೆ ಬಂದಾಗ ತಾನು ಅರೆಹುಚ್ಚಿಯಂತೆ ಒಬ್ಬಳೇ ಆ ಆಸ್ಪತ್ರೆಗೆ ಓಡಿದ್ದಳು. ಬೆಡ್ ಮೇಲೆ ಮಗುವಿನಂತೆ ಮಲಗಿದ್ದನವನು ಪಾಪ. ಒಂದು ವಾರ ತನ್ನ ಆಫೀಸಿಗೆ ರಜೆ ಹಾಕಿ ಗಂಡನನ್ನು ತಾಯಿಯಂತೆ ನೋಡಿಕೊಂಡಿದ್ದಳು, ಆಗ ಹೋಗಿ ತುಸು ಹುಷಾರಾಗಿದ್ದ. ಅವನ ಆರೋಗ್ಯದ ಬಗ್ಗೆ ಅತ್ತೆ ಮಾವರಲ್ಲಿ ಹೇಳಿಕೊಳ್ಳುವುದು ಬೇಡ, ಅವರಿಗೂ ಚಿಂತೆಯಾಗುತ್ತದೆ ಎಂದು ಗಂಡನಿಗೆ ಹೇಳಿಕೊಟ್ಟದ್ದೂ ತಾನೇ. ಆಗಿನಿಂದ ಗಂಡನ ಊಟ, ನಿದ್ದೆ, ಆಚಾರ ವಿಚಾರಗಳಲ್ಲಿ ಏರುಪೇರಾಗದಂತೆ ತೀರಾ ನಿಗಾ ವಹಿಸುತ್ತಾಳೆ. ಆಫೀಸಿನಲ್ಲಿ ಮೊನ್ನೆ ಸೆಲ್ಫ್-ಹೆಲ್ಪ್ ಸೆಶನ್ ನಲ್ಲಿ ಒಳ್ಳೆ ಆರೋಗ್ಯ-ಅಭ್ಯಾಸಗಳೆಂದು ಆ ಟ್ರೈನರ್ ಹೇಳಿದ ಚಿಕ್ಕ ಪುಟ್ಟ ಟಿಪ್ಸ್ ಗಳನ್ನು ಬರೆದಿಟ್ಟುಕೊಂಡು ಅಲ್ಲಲ್ಲಿ ಅಳವಡಿಸಿಕೊಳ್ಳುತ್ತಾಳೆ.

ಸಂಜೆ ಆಫೀಸ್ ನಿಂದ ವಾಪಸ್ಸು ಮನೆಗೆ ಹೋಗುವಾಗ ತಾನು ಪ್ರಯಾಣಿಸುತ್ತಿದ್ದ ಬಾಡಿಗೆ ಓಲಾ ಕ್ಯಾಬ್ ರಸ್ತೆಯಲ್ಲಿ ನಡೆಯುತ್ತಿದ್ದ ದುರ್ಗಾ ದೇವಿ ಮೆರವಣಿಗೆಯನ್ನು ದಾಟಿಕೊಂಡು ಹೋಗಬೇಕಿತ್ತು. ದೈತ್ಯಾಕಾರದ ಪ್ರಸನ್ನ ದುರ್ಗೆಯ ಮೂರ್ತಿ, ಅವಳ ಮೈ ತುಂಬಾ ಅಲಂಕಾರದ ಒಡವೆಗಳು, ಸುತ್ತ ಮುತ್ತಲೂ ಸಾವಿರ ಜನ ಹಾಡಿ ಕುಣಿದು ಆಚರಿಸುತ್ತಿರುವುದನ್ನು ಗಂಗೆಯು ಕಾರಿನ ಕಿಟಕಿಯಿಂದಲೇ ತದೇಕಚಿತ್ತದಿಂದ ನೋಡುತ್ತಿದ್ದಳು. ದುರ್ಗೆಯ ಮೂಗಿನ ನತ್ತನ್ನು ಗಮನಿಸಿದಾಗ, ತಾನು ಮದುವೆಯಾದ ಹೊಸತರಲ್ಲಿ ಅಪ್ಪ ತನಗೆ ಮಾಡಿಸಿ ಹಾಕಿದ್ದ ಬಂಗಾರದ ನತ್ತುನೆನಪಾಯಿತು. ಅರೆ! ತಾಯಿಯ ನತ್ತು ಕೂಡ ನನ್ನ ನತ್ತಿನಂತೆಯೇ ಮೂರು ಮುತ್ತಿನದ್ದಿದೆ ಎಂದು ಖುಷಿಪಟ್ಟಳು. ಡೋಲು ಡಂಗುರದ ನಡುವೆ ಧೂಪ ಹಾಕಿ, ಬಣ್ಣಗಳ ಬಳಿದುಕೊಂಡು ಕುಣಿಯುತ್ತಿದವರನ್ನು ನೋಡಿ ಮೈಮರೆತು ಕುಳಿತವಳಿಗೆ ತನ್ನ ಕ್ಯಾಬ್ ಡ್ರೈವರ್ ನ ಹಾರ್ನ್ ಶಬ್ದದಿಂದ ಟ್ರಾಫಿಕ್ ನ ಅರಿವಾಯಿತು. ಕ್ಯಾಬ್ ತುಸು ಮುಂದೆ ಹೋಗುತ್ತಿದ್ದಂತೆ ತನ್ನ ಕಿಟಕಿಯ ಗಾಜನ್ನು ಚೂರು ಕೆಳಗಿಳಿಸಿ ಅಂಗೈ ಹೊರ ಹಾಕಿ ಕೈ ಮುಗಿದರೆ, ಮೆರವಣಿಗೆಯಲ್ಲಿದ್ದ ಯಾರೋ ಒಬ್ಬರು ಎರಡು ಹೂವುಗಳನ್ನು ಅವಳ ಕೈಗಿಟ್ಟರು. ಹೂವುಗಳು ಕೈಗೆ ಬಿದ್ದಂತೆಯೇ ಗಂಗೆಗೆ ಆ ಕ್ಷಣದಲ್ಲಿ ಖುಷಿ, ಸಮಾಧಾನ ಹಾಗೂ ತನ್ನ ಸಾವಿರ ದುಃಖಗಳು ಒಮ್ಮೆಲೇ ನುಗ್ಗಿಬಂದು ಅವಳ ಕಣ್ಣಲ್ಲಿ ನೀರಾಗಿ ಹೋದವು. ಅವಳಿಗೆ ದುರ್ಗೆ ಇನ್ನೂ ಹತ್ತಿರ ಕಂಡಳು. ಕ್ಯಾಬ್ ನ ಡ್ರೈವರ್ ಹಿಂದೆ ತಿರುಗಿ 'ಕ್ಯಾ ಮೇಡಂ? ಮಾ ಕಾ ಆಶೀರ್ವಾದ್ ಮಿಲ್ಗಯಾ ಆಪ್ಕೋ' ಅಂತ ನಗುತ್ತಲೇ ಹೇಳಿದ. ಅರೆನಗುವಲ್ಲಿ 'ಹೌದು, ಪುಣ್ಯ ನಂದು' ಅಂದಳು. 'ಒಹ್, ನೀವು ಕನ್ನಡದವರಾ!' ಅಂತ ಅಂದು ಡ್ರೈವರ್ ಮತ್ತೊಂದು ಹಾರ್ನ್ ಹಾಕಿ ಗಾಡಿ ಮುನ್ನಡೆಸಿದ. ಆ ಇಪ್ಪತ್ತು ನಿಮಿಷಗಳಲ್ಲಿ ದುರ್ಗೆ ಹಾಗೂ ತನ್ನ ನಡುವೆ ಅದ್ಯಾವುದೋ ಮಾತಿರದ ಸಂಭಾಷಣೆ ಆಯಿತೆಂಬ ಭಾವನೆ ಗಂಗೆಯದ್ದು. ದೇವಿಯ ಕಣ್ಣಲ್ಲಿ ಕಣ್ಣಿಟ್ಟು ಅವಳಿಂದ ಧೈರ್ಯ ಪಡೆದುಕೊಂಡವಳಂತೆ, ಬಂದ ಕಣ್ಣೀರನ್ನು ನುಂಗಿಕೊಂಡಳು. ಹೇಗೋ ಇನ್ನು ತುಸು ದಿನ ಕಳೆದರೆ ಎಲ್ಲವೂ ಸರಿ ಹೋಗಿ, ಮತ್ತೆ ಹೊಸತಾಗಿ ಎಲ್ಲಾ ಚಂದವಾಗುತ್ತದೆ ಎಂಬ ಹುಚ್ಚು ನಂಬಿಕೆ ಅವಳನ್ನು ಆವರಿಸಿತು. ಬ್ಯಾಗಿನಲ್ಲಿನ ಪುಟ್ಟ ಕನ್ನಡಿಯ ಹೊರತೆಗೆದು ತನ್ನ ಕಣ್ಣ ಕಾಡಿಗೆಯನ್ನೊಮ್ಮೆ  ಸರಿಮಾಡಿಕೊಂಡಳು. ಗೋಜು ಗದ್ದಲ ಸರಿದಂತೆ ಅವಳ ಗಾಡಿ ಮುನ್ನಡೆಯಿತು.    

           ಅಂದಹಾಗೆ, ಇಂತಹ ನೂರು ಗಂಗೆಯರನ್ನು ನಾವು ದಿನವೂ ನೋಡುತ್ತೇವೆ. ಒಮ್ಮೊಮ್ಮೆ ಆಫೀಸಿನಲ್ಲಿ ನೀರು ಕುಡಿಯುತ್ತ ನೇಪಥ್ಯದಲ್ಲಿ ಯಾವುದೋ ಟ್ಯಾಬ್ಲೆಟ್ ತಗೆದುಕೊಳ್ಳುತ್ತಿರುತ್ತಾಳೆ, ಮರುದಿನ ಏನೂ ಆಗದವರಂತೆ ರಂಗೋಲಿ ಕಾಂಪಿಟಿಷನ್ ನಲ್ಲಿ ಸಂಭ್ರಮದಿಂದ ಆಚರಿಸುತ್ತಿರುತ್ತಾಳೆ. ಒಮ್ಮೊಮ್ಮೆ ಯಾರಿಗೋ  'ಏನ್ರೀ? ಮದುವೆಯಾದಾಗಿಂದ ಆಫೀಸಲ್ಲಿ ಜಾಸ್ತಿ ಕಾಣೋದೇ ಇಲ್ಲ ನೀವು?' ಎಂದು ಕೇಳಿ ನಕ್ಕರ, ಒಮ್ಮೊಮ್ಮೆ  ಎಲ್ಲರೂ ನಗುವಾಗ ಒಬ್ಬಳೇ ಎಲ್ಲೋ ಕಳೆದು ಹೋದವರಂತೆ ಕೂತಿರುತ್ತಾಳೆ.  ಒಮ್ಮೊಮ್ಮೆ ಎರಡು ದಿನ ಹುಷಾರಿಲ್ಲ ಎಂದು ಯಾರಿಗೂ ಸಿಗದೇ ಇದ್ದುಬಿಡುತ್ತಾಳೆ, 'ಆಕೆಗೆ ಮನೇಲಿ ಏನೋ ಪ್ರಾಬ್ಲಮ್ ಇದೆ ಪಾಪ' ಅಂತ ಜನ ಮಾತನಾಡಿಕೊಳ್ಳುತ್ತಾರೆ. ಒಮ್ಮೊಮ್ಮೆ ರಸ್ತೆಯ ಬದಿ ಕಾಯಿಪಲ್ಯ ಮಾರುತ್ತ 'ತಗೋರಿ ಯಪ್ಪಾ.. ಎರಡು ರೂಪಾಯಿ ಕಮ್ಮಿಗೆ ಕೊಡ್ತೀನಿ' ಅಂದರೆ, ಒಮ್ಮೊಮ್ಮೆ ಊರಿನಿಂದ ಫೋನು ಮಾಡಿ 'ಮಗಾ.. ನಿನ್ನೆ ರಾತ್ರಿ ನನಗ ಕೆಟ್ಟ ಕನಸು ಬಿದ್ದಿತ್ತು, ಅರಾಮ್ ಆದಿ ಹೌದಿಲ್ಲಾ ಅಲ್ಲೆ ನೀ?' ಎಂದು ಭಾರವಾದ ಧ್ವನಿಯಲ್ಲಿ ಕೇಳುತ್ತಾಳೆ. ಒಮ್ಮೊಮ್ಮೆ ಪುಟ್ಟ ಮಗುವನ್ನು ಮೈಗೆ ಬಿಗಿದುಕೊಂಡು ಝಾನ್ಸಿ ರಾಣಿಯಂತೆ ದಟ್ಟ ಟ್ರಾಫಿಕ್ ನಲ್ಲಿ ಬೈಕು ಚಲಾಯಿಸಿಕೊಂಡು ಹೋಗುತ್ತಾಳೆ, ಆಗಾಗ ಅವಳನ್ನು ರೋಡಲ್ಲಿ ಯಾರೋ ಪುಢಾರಿಗಳು ಕೆಟ್ಟದಾಗಿ ಛೇಡಿಸುತ್ತಾರೆ. ಅವಳ ಮದುವೆಯಾಗುತ್ತಿಲ್ಲ ಎಂದು ಅಪ್ಪ ಸಿಟ್ಟು ಸಿಡುಕು ಮಾಡಿಕೊಂಡು ಓಡಾಡುತ್ತಾರೆ, ಮಕ್ಕಳಾಗುತ್ತಿಲ್ಲ ಎಂದು ಅತ್ತೆ ಹೀಯಾಳಿಸುತ್ತಾಳೆ, ಗಂಡನ ಬಿಟ್ಟವಳೆಂದು ಸಮಾಜ ಕಥೆ ಮಾಡಿ ಆಡಿಕೊಂಡು ಸಮಾಧಾನವಾಗುತ್ತದೆ. ಆಗಾಗ ದೇವಸ್ಥಾನಗಳಲ್ಲಿ ದೇವರೊಡನೆ ಮೌನ ಸಂಭಾಷಣೆಯಲ್ಲಿ ತೊಡಗಿದವರಂತೆ ಮೂಲೆಯಲ್ಲಿ ನಿಂತಿರುತ್ತಾಳೆ. ಆಫೀಸು, ಮನೆ, ರಸ್ತೆ, ಊರು, ಜವಾಬ್ದಾರಿ ಹಾಗೂ ಕನಸುಗಳ ನಡುವೆ ಸಿಕ್ಕಿ ಒದ್ದಾಡಿ, ಮತ್ತೆ ನಗುತ್ತಲೇ ಹಬ್ಬಗಳಲ್ಲಿ ಅವಳು ದುರ್ಗೆ, ಕಾಳಿ, ಲಕ್ಷ್ಮೀಯಾಗುತ್ತಾಳೆ.


ನಮ್ಮ ಜೊತೆಗಿರುವ ಇಂತಹ ಗಂಗೆಯರನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳದೇ ಅವರನ್ನು ಅಂಗೀಕರಿಸೋಣ. ಅದಷ್ಟೇ ಸಾಕು! ಬೇರೆಲ್ಲ ದುನಿಯಾ ನಮ್ಮಪ್ಪರಿಗಿಂತಲೂ ಚನ್ನಾಗಿ ಅವರಿಗೆ ಗೊತ್ತು. 
ಗಂಡಸರಿಗೆಲ್ಲ ಹಿಂದೆ ಹೋದ ಹಾಗೂ ಮುಂದೆ ಬರುವ ವಿಶ್ವ ಮಹಿಳೆಯರ ದಿನಗಳ ಶುಭಾಷಯಗಳು!    


Monday, October 15, 2018

ಮನುಷ್ಯರು ಓದಲೆಂದು ಹುಟ್ಟಿದವರಲ್ಲ... ನೀವು ಮನುಷ್ಯರಾಗಿದ್ದಲ್ಲಿ ಇದನ್ನು ಓದಬೇಡಿ !





ದೇಶ ಸುತ್ತು ಇಲ್ಲ ಕೋಶ ಓದು! ಈ ಗಾದೆ ಮಾತನ್ನ ಒಂದು ಸಾವಿರ ಸಾರಿನಾದ್ರೂ ಕೇಳಿರಬೇಕು ಇಲ್ಲಿವರೆಗೂ ನಾವು. ಇಂಥ ಸಾಕಷ್ಟು ಮಾತುಗಳಿವೆ, ಅಷ್ಟು ಬಾರಿ ಕೇಳಿಯೂ ಅವನ್ನ ತಲೆಗಲ್ಲದೆ ಬರೀ ಕಿವಿಗಷ್ಟೇ ಹಾಕಿಕೊಂಡಿರುತ್ತೇವೆ ನಾವು. ಹಾಗೆ ನೋಡಿದರೆ ಕಿವಿಗೆ ತಲೆಗಿಂತ ಜಾಸ್ತಿ ತಾಳ್ಮೆ ಇದೆ, ಪಾಪ ಏನೇ ಇದ್ದರೂ ಕೇಳಲೇಬೇಕು ಅದು. ಕಣ್ಣಿಗೆ ರೆಪ್ಪೆ ಇದೆ, ಮಿದುಳು ತನಗೆ ಬೇಕಾದ್ದನ್ನು ಮಾತ್ರ ಒಳ ಬಿಡುತ್ತದೆ. ಕಿವಿಗೆ ಆ options ಇಲ್ಲ. ಕೋಶ ಓದುವುದು ಅಂದರೆ ಏನನ್ನೋ ಓದಿ ಪಂಡಿತರಾಗಿ, ಕಾವಿ ಬಟ್ಟೆ, ಮರದ ಚಪ್ಪಲಿ ಹಾಕಿಕೊಂಡು ಊರು ಬಿಟ್ಟು ದೇಶಾಂತರ ಹೋಗಿ ಎಂಬುದಲ್ಲ. ನಾನು ಪ್ರಸ್ತಾಪಿಸುತ್ತಿರುವುದು ಓದುವ ಹವ್ಯಾಸದ ಬಗ್ಗೆ. 21 ನೇ ಶತಮಾನದ busy ಪೀಳಿಗೆಯಾದ ನಾವು ಯಾಕೆ 'e-ಲೋಕ' ದಿಂದ ಸ್ವಲ್ಪ ಹೊರಬಂದು ಆ-ಲೋಕ ಗಳಿಗೆ ಹೋಗಿ ಬರಬೇಕೆಂದು. 'ಆ ಲೋಕ' ಎಂದರೆ ಆಯಾ ಪುಸ್ತಕಗಳ ಆಯಾ ಕಥೆ-ಕಾದಂಬರಿಗಳ ಲೋಕಗಳು ಎಂದು ಭಾವಿಸಬಹುದು. ದಯವಿಟ್ಟು ಓದಿ ಎಂದು ಕೇಳಿಕೊಂಡೇ ಒಂದು ಓದನ್ನು ಬರೆಯುವುದು 'ಓದಿಗೆ' ವ್ಯಂಗ್ಯ ಮಾಡಿದಂತೆ.

ಮೊನ್ನೆ ನಮ್ಮ ಆಫೀಸ್ ನಲ್ಲಿ straight-hairs, ಕಡುಗೆಂಪು-lipstick ಹಾಗು ಮೈಗಂಟಿದ ಬಟ್ಟೆಯ (ಹೆಸರು ಹೇಳಬಾರದೆಂದು ಈ ವಿಶ್ಲೇಷಣೆ, ನಾನು ಸ್ತ್ರೀ-makeup ವಿರೋಧಿಯಲ್ಲ!) ಒಂದು ಹುಡುಗಿ ಹೇಳ್ತಾ ಇತ್ತು ... 'ನಂಗೆ ಬುಕ್ಸ್ ಅಂದ್ರೆ ಬಹಳ ಇಷ್ಟ ಕಣೇ , ಬುಕ್ಸ್ ಓದದೆ ಇದ್ರೆ ನಂಗೆ ನಿದ್ದೆ ನೇ ಬರಲ್ಲ ಗೊತ್ತಾ?'. ಮರುಭೂಮಿಯಲ್ಲಿ ನೀರು ಕಂಡಂತಾಗಿ ನಾನು ತಿರುಗಿ ನೋಡಿ ಕೇಳಿದೆ, ಸಧ್ಯಕ್ಕೆ ಯಾವ ಪುಸ್ತಕ  ಓದ್ತಾ ಇದ್ದೀರಾ ?? ಅವಳಿಂದ ಉತ್ತರ ಬಂತು 'ಹಾಫ್ ಗರ್ಲ್ಫ್ರೆಂಡ್ '. ಇದಕ್ಕೂ ಮುಂಚೆ ಅವಳು ಇಂಥದ್ದೇ ಎರಡನ್ನು ಓದಿದ್ದಾಳಂತೆ, ಮುಂದೆ ನಾನೇನೂ ಕೇಳಲಿಲ್ಲ. ಕುಡ್ದುಗಣ್ಣಲ್ಲಿ ಮೆಳ್ಳುಗಣ್ಣು ಲೇಸು ಎಂದು ಸುಮ್ಮನಾದೆ. ಕಾಲೇಜ್ ದಿನಗಳಲ್ಲಿ ಇಂಥ ಸಾವಿರ ಪುಸ್ತಕಗಳನ್ನ ನಾವೂ ಸಹ ಓದಿರುತ್ತೇವೆ ಆದರೆ ಅದೆಲ್ಲ ಮನರಂಜನೆಗಷ್ಟೆ ಸೀಮಿತವಾಗಿತ್ತು, ಯಾವುದೋ ಕಥೆಗೆಂದೋ, ಯಾರೋ ಹೇಳಿದರೆಂದೋ ಓದಿದ್ದು. ಸರಿ, ತಪ್ಪೇನಿಲ್ಲ... ಆದರೆ ಅದನ್ನೇ ಒಂದು ಹವ್ಯಾಸವನ್ನಾಗಿ ಏಕೆ ಮಾಡಬಾರದು. ಅಂತಹ tailor-made for entertainment ಪುಸ್ತಕವೇ ನಮ್ಮನ್ನು ಅಷ್ಟು ತನ್ನಲ್ಲಿ ಹಿಡಿದಿಟ್ಟಿತ್ತು ಎಂದಾದರೆ ಒಂದು ಒಳ್ಳೆಯ ಸದಭಿರುಚಿಯ, ರಚನಾತ್ಮಕ ಪುಸ್ತಕ ನಮ್ಮನ್ನು ಎಷ್ಟು ಕೂಡಿಟ್ಟುಕೊಳ್ಳಬಹುದು.  ಕೂಡಿಟ್ಟು ಕೊಳ್ಳುವುದರ ಬಗ್ಗೆ ಹೇಳುವುದು ಯಾಕೆ ಎಂದರೆ ನಮ್ಮ ಮನಸೂ ಸಹ ರುಪಾಯಿ ನೋಟಿನಂತೆ, ಎಷ್ಟು ಹೊರಗಡೆ ಓಡಾಡುವುದೋ ಅಷ್ಟು ಸವೆದು, ಹಳೆದಾಗಿ ಹರಿದು ಹೋಗುವುದು. ಅದನ್ನೇ ಯಾವುದೋ ಒಳ್ಳೆಯ ಪುಸ್ತಕವೆಂಬ ಬ್ಯಾಂಕ್ ನಲ್ಲಿ ಇನ್ವೆಸ್ಟ್ ಮಾಡಿದರೆ ಬಡ್ಡಿನೂ ಬಂದೀತು, ಬುದ್ಧಿನೂ ಬೆಳದೀತು. ಬಡ್ಡಿ ಎಂದರೆ ಮೈ ಕರಗಿಸದೇ ಬಂದು ಬೀಳುವ ದುಡ್ಡು, ಹಾಗೆಯೇ ಎಲ್ಲೂ ಅಡ್ದಾಡದೇ ನೋಡದೇ ನಮ್ಮೊಡನೆಯೇ ನಡೆದ ಅನುಭವದಂತೆ ಒಂದು ಪರಿಸ್ಥಿತಿ/ಕಥಾನಕವನ್ನು ಅನುಭವಿಸಿದಾಗ ಅಂಥವುಗಳಿಂದ ದೊರಕುವ ಪ್ರಬುದ್ಧತೆಯೂ ಸಿಗುತ್ತದೆ. ಆಯ್ತಲ್ಲವೆ ಬಿಟ್ಟಿ ಲಾಭ!

ಸಿನಿಮಾ ನೋಡಿಯೂ ಈ ಅನುಭವಗಳನ್ನು ಪಡೆಯಬಹುದಲ್ಲವೆ? ಅದಕ್ಕೆ ಪುಸ್ತಕವನ್ನು ಓದಿ ಬೋರ್ ಯಾಕೆ ಆಗಬೇಕು ಎಂದು ನನ್ನ ಮಿತ್ರ ಮಹಾಶಯನೊಬ್ಬ ಕೇಳಿದ. ನಿಜ, ಅದು ಒಂದು ರೀತಿಯ ಕನಸಿನ ಲೋಕವೇ, ಆದರೆ ಅದಕ್ಕೆ ಅದರದೇ ಆದ ಕೆಲ ಲಿಮಿಟ್ಸ್ ಗಳಿವೆ. ಅಲ್ಲಿ ನಿರ್ದೇಶಕ ತೋರಿಸಿದಂತೆಯೇ ನಾವು ನೋಡಬೇಕಾಗಬಹುದು. ಪುಸ್ತಕ ಓದುವುದರಲ್ಲಿ ಹಾಗಲ್ಲ, ಅಲ್ಲಿದ್ದ ಪ್ರತಿಯೊಂದು ಪುಟವನ್ನೂ ನಾವು ನಮ್ಮಲ್ಲೇ ಕಟ್ಟುತ್ತ ಹೋಗುತ್ತೇವೆ, ಮನಸಿನಲ್ಲೇ ಅದರ ಸೆಟ್ ಒಂದನ್ನು ಹಾಕಿ ಅಲ್ಲಿ ಪಾತ್ರಗಳನ್ನೂ ನೋಡುತ್ತೇವೆ. ಕಥೆಯ ವೇಗವೂ ನಮ್ಮ ಓದಿನ ಕಯ್ಯಲ್ಲಿ ಇರುವುದರಿಂದ ಪ್ರತಿ ಪಾತ್ರ-ಪ್ರಸಂಗ-ಪರಿಹಾರವನ್ನೂ ನಾವು analyse ಮಾಡಿಕೊಳ್ಳಬಹುದು. ಇದರಿಂದ ಮೆದುಳಿನ ಅದೆಷ್ಟೋ unused ಭಾಗಗಳನ್ನು ಮುಟ್ಟಿ ವ್ಯಾಯಾಮಿಸುತ್ತೇವೆ. ಇಲ್ಲವಾದರೆ ಆ ಆಯಾಮಗಳನ್ನು ನಮ್ಮ ಮನಸಿಗೆ ನಿಜ ಜೀವನದಲ್ಲಿ ಕಾಣಲು ಸಾಧ್ಯವೇ ಆಗಿರಲಿಕ್ಕಿಲ್ಲ. ಉದಾಹರಣೆಗೆ fiction, historic ಪುಸ್ತಕಗಳು ನಮ್ಮ ಕಲ್ಪನೆ, ಕ್ರಿಯಾಶೀಲತೆಯನ್ನು ಬಹಳಷ್ಟು ವೃದ್ಧಿಸುತ್ತದೆ.

ಮಾತನಾಡುವ ಹಾಗು ಅರ್ಥೈಸಿಕೊಳ್ಳುವ ಶಕ್ತಿಗಳಂತೆ ಓದುವ ಸಾಮರ್ಥ್ಯವು ಪ್ರತಿಯೊಬ್ಬರಿಗೆ ತಳೀಯವಾಗಿ ಬಂದಿರುವುದಿಲ್ಲ. ಅದು ಒಂದು ಅಬ್ಯಾಸ, ಅದನ್ನು ಮಾನವ ಮೆದುಳು ಅಭ್ಯಸಿಸಿರಬೇಕು. ಮನುಷ್ಯನ ಮೆದುಳು ಓದಿಗಾಗಿ ಮಾರ್ಪಟ್ಟೇ ಇಲ್ಲ, ಮನುಷ್ಯರು ಓದಿಗಾಗಿ ಹುಟ್ಟಿದವರೇ ಅಲ್ಲ ಎಂದು ಟಫ್ಟ್ಸ್ ಯೂನಿವರ್ಸಿಟಿ ಯ ಸೆಂಟರ್ ಫಾರ್ ರೀಡಿಂಗ್ ಅಂಡ್ ಲ್ಯಾಂಗ್ವೇಜ್ ರಿಸರ್ಚ್ ನಿರ್ದೇಶಕ ಮರ್ಯಾನ್ ವೂಲ್ಫ್ ಬರೆಯುತ್ತಾರೆ. ಬಹಳ ವೇದನೆಯಿಂದಲೇ ಓದುವ ಹವ್ಯಾಸವನ್ನು ಮಾನವ ಮೆದುಳು ರೂಢಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ. ಓದಲು ಮೆದುಳಿನಲ್ಲಿ ಉಪಯೋಗವಾಗುವ reading circuits ಗಳು ವಾಸ್ತವವಾಗಿ ಬೇರೆ ಕೆಲಸಗಳಿಗಾಗಿ ವಿಕಸನಗೊಂಡಿರುವಂಥವು, ಅವುಗಳನ್ನು ಪಳಗಿಸಿ ತನ್ನ ಓದಿನ ಹತೋಟಿಗೆ ಉಪಯೋಗಿಸಿಕೊಂಡವನು ಪ್ರೀತಿಯಲ್ಲಿ ಬಿದ್ದಂತ ಒಂದು ಸುಂದರ ಅನುಭವವನ್ನು ಪ್ರತಿ ಸಾಲಿನಲ್ಲೂ ಕಟ್ಟಿಕೊಳ್ಳುತ್ತಾನೆ. ಪ್ರೀತಿಯಲ್ಲಿ ಬೀಳುವ ಆ ಅನುಭವಕ್ಕಿಂತ ಮನುಷ್ಯನ ಮನಸಿಗೆ ಮುದ ನೀಡುವ ವಿಷಯ ಇನ್ನಾವುದು ಇರಲು ಸಾಧ್ಯ ಎಂದು ವೂಲ್ಫ್ ಹೇಳುತ್ತಾನೆ.         

ಕೆನೆಡಾ ದ ಯಾರ್ಕ್ ಯೂನಿವರ್ಸಿಟಿ ಯ ಮನಶ್ಯಾಸ್ತ್ರಜ್ಞ ರೇಮಂಡ್ ಮಾರ್ಸ್ ಪ್ರಕಾರ ಕಾದಂಬರಿ, ಕಥೆಗಳ  ಓದುಗರ ತಿಳುವಳಿಕೆ ಶಕ್ತಿಯು ಹಾಗೂ ಅನ್ಯರೊಡನೆ ಅವರ ಅನುಭೂತಿಯು ಬೇರೆ ಜನರಿಗಿಂತ ಒಂದು ಕೈ ಮೇಲೆಯೇ ಇರುತ್ತದಂತೆ. ಆಳವಾದ ಓದು (Deep-reading ) ಅಳಿವಿನಂಚಿನಲ್ಲಿರುವ ಹವ್ಯಾಸ ಆಗಿದ್ದರಿಂದ ನಮ್ಮ ಸಧ್ಯದ ಪೀಳಿಗೆಯ  ಬೌದ್ಧಿಕ ಹಾಗು ಭಾವನಾತ್ಮಕತೆಯ ಬೆಳವಣಿಗೆಯನ್ನುಕುಂಠಿತಗೊಳಿಸಿದೆ. ಯಾರ ಮನಸು ಆಳವಾದ ಓದಿಗೆ ತರಬೇತಿಗೊಳಿಸಲಾಗಿದೆಯೋ ಅವರಿಗೆ ಮಾತ್ರ ಕಾದಂಬರಿ, ಕಾವ್ಯಗಳನ್ನು ಮನಸಾರೆ ಸವಿಯಲಾದೀತು. ನಿಜ ಜೀವನದಲ್ಲಿ ಒಂದು ಘಟನೆ ನಡೆದರೆ ಮೆದುಳಿನ ಯಾವ ಭಾಗಗಳಿಗೆ ಸ್ಪಂದನೆ ಆಗುವುದೋ ಪುಸ್ತಕ-ಕಾದಂಬರಿಗಳನ್ನು ಓದುವಾಗ ಆಗುವ ನಮ್ಮ ಒಳಗೊಳ್ಳುವಿಕೆಯಿಂದ  ಅದೇ ಮೆದುಳಿನ ಭಾಗಗಳು ಚೈತನ್ಯವಾಗುತ್ತದಂತೆ. ಇದರಿಂದ ಮನಸಿನ ಗ್ರಹಿಕೆ ಶಕ್ತಿ ಹಾಗು ಒಂದು ಅಂಶವನ್ನು ಆನಂದಿಸುವ ಸಾಮರ್ಥ್ಯವು ಹೆಚ್ಚುಗೊಳ್ಳುತ್ತದೆ. ಮನುಷ್ಯನ ಜೀವನದ ಮುಖ್ಯ ಅಂಶವೇ ತನ್ನದಾದ ಪ್ರತಿ ಕ್ಷಣವನ್ನು ಆನಂದಿಸುವುದಲ್ಲವೇ?        

ಕುವೆಂಪು , ಬೇಂದ್ರೆ, ಕಾರಂತ, ಅಡಿಗ, ಶಿವರುದ್ರಪ್ಪ, ಭೈರಪ್ಪ ಇಂತಹ ಸಾವಿರಾರು ರಸ ಋಷಿಗಳು ನಮ್ಮಲ್ಲೇ ಇರುವಾಗ, ಎಂಟು ಜ್ಞಾನಪೀಠಗಳು ಕನ್ನಡದ ಸಾಹಿತ್ಯಿಕ ಚರಿತ್ರೆಯನ್ನು ಮೆರೆದಾಗ ನಮಗೆ ಅದರಲ್ಲೊಂದಿಷ್ಟನ್ನು ಓದಿ ಆನಂದಿಸಲು ಏನು ಅಡ್ಡಿ ಇದ್ದೀತು. ಸಿನಿಮಾ, ಕ್ರಿಕೆಟ್, ಮೊಬೈಲ್ ಗೇಮ್ಸ್, ಇಂಗ್ಲಿಷ್ ಸೀರಿಯಲ್ ಗಳು ಹೀಗೆ ಸಾವಿರ ಅಭ್ಯಾಸಗಳು ಇರಲಿ ಆದರೆ ಒಂದಷ್ಟನ್ನು ಓದಿ ನೋಡಿ, ಪುಸ್ತಕಗಳೇ ಆಗಲಿ, ಕವನ-ಕಥನಗಳೇ ಆಗಲಿ. ಮನಸಿನ ವಿಕಸನವನ್ನು ಒಂದು ಪುಸ್ತಕ ಮಾಡಿದಷ್ಟು ಯಾರೂ ಮಾಡಲಾರರು. ಬೇರೆ ಭಾಷೆಯಲ್ಲಿ ಓದುವ ಮುನ್ನ ಒಮ್ಮೆ ಮಾತೃಭಾಷೆಯಲ್ಲಿ ಓದುವುದು ಸೂಕ್ತ, ಓದಿದ್ದೆಲ್ಲ ಪೂರ್ತಿ ತಿಳಿದಾಗ ಆಗುವ ಆ ಸಂತೋಷವೇ ಬೇರೆ. ಒಂದು ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದ ಮೇಲೆ ಆಗುವ ಖುಷಿಯನ್ನು, ಒಂದು ತೀರಾ ವಯಕ್ತಿಕ ಪ್ರಯಾಣವನ್ನು ಒಬ್ಬರೇ ಮಾಡಿ ಬಂದಾಗ ಆಗುವ ತನ್ಮಯತೆಗೆ ಹೋಲಿಸುತ್ತಾರೆ. ಸುಂದರ ಸೃಜನಶೀಲ ಬದುಕಿಗೆ ಓದು ತೀರಾ ಮುಖ್ಯ. ಮೂಕಜ್ಜಿಯೊಡನೆ ಒಮ್ಮೆ ಕನಸು ಕಂಡು ನೋಡಿ, ಮಲೆಗಳಲ್ಲಿ ಮಧುಮಗಳನ್ನೊಮ್ಮೆ ಹುಡುಕಿ ನೋಡಿ, ಬದುಕನ್ನು ಪ್ರೀತಿಸುವವರು ನೀವು, ಜೀವನವನ್ನು ಇನ್ನೂ ಹತ್ತಿರದಿಂದ ಸವೆದು ನೋಡಿ.

ಕಟ್ಟ ಕಡೆಯಲ್ಲಿ ನನ್ನದೊಂದು ವಯಕ್ತಿಕ ಸಲಹೆ, ಕನ್ನಡ ಸಾಹಿತ್ಯದ ಅರಿವಿಲ್ಲದೆ ಇಂಗ್ಲೀಷು, ಕಂಗ್ಲೀಷಿನ ಬೆನ್ನು ಚಪ್ಪರಿಸುವ ಇವತ್ತಿನ ನಮ್ಮ ಯುವಕ/ಯುವಕಿಯರಲ್ಲಿ ಒಂದು ವಿನಂತಿ, ದಯವಿಟ್ಟು ನಿಮ್ಮಮ್ಮನ ಮುಂದೆ ಪಕ್ಕದ್ಮನೆ ಆಂಟಿಯನ್ನು ಹೊಗಳಬೇಡಿ! ಅಮ್ಮ ಊಟದಲ್ಲಿ ವಿಷ ಹಾಕದೆ ಇರಬಹುದು ಆದರೆ ಲಟ್ಟಣಿಗೆಯಲ್ಲಿ ಪೆಟ್ಟು ಸರಿಯಾಗೇ ನೀಡಬಲ್ಲಳು ;).              


Tuesday, August 14, 2018

ನಾನೇ ಇವತ್ತಿನ ಭಾರತ!



ನಿಮಗೆ ಗೊತ್ತೆ? ಭಾರತ ಸ್ವತಂತ್ರವಾಗಿ ಹದಿನಾಲ್ಕು ವರ್ಷಗಳಾದ ಮೇಲೆ ಗೋವಾ ಭಾರತಕ್ಕೆ ಸೇರ್ಪಡೆ ಆಗಿದ್ದಂತೆ, ಅಲ್ಲಿವರೆಗೂ ಅದು ಭಾರತಕ್ಕೆ ಸೇರಿರಲಿಲ್ಲ. ಸ್ವಾತಂತ್ರ್ಯ ಎಂದೊಡನೆ ಗೋವಾ ಯಾಕೆ ಮನಸಿಗೆ ಬಂತೋ ಅಂತ ಇನ್ನು ಪೂರ್ತಿಯಾಗಿ ಅರ್ಥ ಆಗಿಲ್ಲ, ಆಗದೆಯೇ ಇರಲಿ. ಅಂದಹಾಗೆ ಭಾರತಕ್ಕೆ ಹೊರಗಿನವರಿಂದ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳ ಮೇಲಾಯಿತು, ಒಳಗಿನ ನಮಗೆಲ್ಲ ಶುಭಾಶಯ. ಬೇಗ ಎದ್ದರೆ ಧ್ವಜಾರೋಹಣ ಅಟೆಂಡ್ ಮಾಡಿ, ಲೇಟ್ ಆಗಿ ಎದ್ದರೆ #flag-ಸೆಲ್ಫಿ ತಕ್ಕಳಿ,  ಯಾರೋ ಒಬ್ಬ ಬಿಳಿ ಬಟ್ಟೇಲಿ ಭಾಷಣ ಮಾಡಿದ್ರೆ ಕಿವಿ ಮುಚ್ಕೊಂಡು ಕೇಳಿ,  ಸ್ವೀಟ್ ತಿನ್ನಿ. ಮರುದಿನ ಮತ್ತೆ ಈ ದೇಶ ಯಾಕೆ ಉದ್ಧಾರ ಆಗಲ್ಲ, ಹೆಂಗ್ ಹೆಂಗೆ ಉದ್ಧಾರ ಆಗಲ್ಲ ಅಂತ ರಿವಿಶನ್ ಮಾಡ್ಕೊಳಿ, ಫೇಸ್ಬುಕ್ ನಲ್ಲಿ ಹೊಟ್ಟೆ ಹಿಂದೆ ತಗೊಳ್ಳಿ, ಇನಸ್ಟಾಗ್ರಾಮ್ ನಲ್ಲಿ ತುಟಿ ಮುಂದೆ ತನ್ನಿ, ಟ್ವಿಟ್ಟರ್ ನಲ್ಲಿ ಯಾವಂದೋ ಜೊತೆ  ಜಗಳಾಡಿ ಬ್ಲಾಕ್ ಮಾಡಿ... ಅಲ್ಲಿಗೆ ನಿಮ್ಮ ಜೊತೆ ಭಾರತಮಾತೆನೂ ಸುಸ್ತು. ಮೊನ್ನೆ ಅಂಕಲ್ ಒಬ್ರು ಬಸ್ ಸ್ಟಾಪ್ ನಲ್ಲಿ ಹೇಳ್ತಾ ಇದ್ರು, 'ನಮ್ಮ ಪುಣ್ಯ ಬ್ರಿಟಿಷರು ಮತ್ತೆ ನಮ್ಮ ಮೇಲೆ ದಾಳಿ ಮಾಡೋ ಯೋಚನೆ ಮಾಡಿಲ್ಲ. ಮಾಡಿದ್ರೆ ಈಗ ನಮ್ಮ ಕಥೆ ಅಷ್ಟೇ' ಅಂತ. ಇಂದಿನ ಯುವಕರ ಮೇಲೆ ಅವರ ವ್ಯಂಗ್ಯ. ಸುತ್ತ ಇದ್ದ ಕಾಲೇಜು ಹುಡುಗ ಹುಡುಗಿಯರೆಲ್ಲ ಒಮ್ಮೆ ಅವರನ್ನ ನೋಡಿ ಮತ್ತೆ ತಮ್ಮ ತಮ್ಮ ಫೋನಿನಲ್ಲಿ ಸೇರಿಕೊಂಡರು. ಫೋನ್ ಬ್ಯಾಟರಿ ಖಾಲಿಯಾಗಿದ್ದ ನನಗೆ ನಿಜವಾಗಿಯೂ ಹಾಗೇನಾದರೂ ಆದ್ರೆ? ಅಂತ ಯೋಚನೆ ಬಂತು. ಕಿಟಕಿಯಲ್ಲಿ ಭಾರತೀಯ ಪ್ರವಾಸಿ ಜಾಹೀರಾತಿನ ಪೋಸ್ಟರ್ ಕಂಡಿತು 'ಒಮ್ಮೆ ಭಾರತಕ್ಕೆ ಬನ್ನಿ, ನಮ್ಮಲ್ಲೊಬ್ಬರಾಗಿ'.

ಸಮಯ ತುಂಬಾ ಬದಲಾಗಿದೆ, 'ಭಾರತ ಬಿಟ್ಟು ತೊಲಗಿ' ಅಂತ ಅಂದವರನ್ನೆಲ್ಲಾ 'ಭಾರತಕ್ಕೆ ಬನ್ನಿ' ಎಂದು ಆತಿಥ್ಯಕ್ಕೆ ಕರೆಯುತ್ತಿದ್ದೇವೆ. ಸಮಯದ ಜೊತೆಗೆ ಭಾವನೆಗಳು, ಲಕ್ಷ್ಯಗಳು, ನಿಲುವುಗಳೆಲ್ಲವೂ ಬದಲಾಗಿದೆ. ಇತಿಹಾಸವನ್ನು ಕಯ್ಯಲ್ಲಿ ಹಿಡಿದುಕೊಂಡು ಭವಿಷ್ಯತ್ತನ್ನು ನೋಡದೇ ಇರುವುದು ಬರೀ ಅಜ್ಞಾನವೇ ಅಲ್ಲ, ಅಪರಾಧವಾಗಿದೆ. ಗಾಂಧೀಜಿ ಸರೀನಾ, ಗೋಡ್ಸೆ ಸರೀನಾ, ನೆಹರುಗೆ ಏನೇನು ಕೆಟ್ಟ ಚಟಗಳಿದ್ದವು, ಟಿಪ್ಪು ಸುಲ್ತಾನ್ ನಿಜವಾಗಲೂ ಹುಲಿಯ ಬಾಯಲ್ಲಿ ಕೈ ಹಾಕಿದ್ನಾ? ಅಂತ ಇನ್ನೂ ಚರ್ಚೆ ಮಾಡುತ್ತಾ ಕುಳಿತರೆ ಸಮಯ ಪೋಲು ಅಷ್ಟೇ. ಅವರೆಲ್ಲ ಅವರವರ ಸಮಯಕ್ಕೆ ಅವರಿಗೆ ಸರಿ ಅನಿಸಿದ್ದನ್ನ ಮಾಡಿ ಹೋಗಿಯಾಗಿದೆ. ನಮ್ಮ ಸಮಯಕ್ಕೆ ನಾವು ಮಾಡಬೇಕು, ಮಾಡದೇ ಬರೀ ಆಡಿದರೆ ಏನು ಬಂತು. ದೇಶ, ಪ್ರೇಮ, ದೇಶಪ್ರೇಮ ಗಳ ಅರ್ಥಗಳೂ ವಿಕಸಿತಗೊಂಡಿವೆ. ದೇಶವೆಂದರೆ ಬರೀ ಭಾರತದ ಭೂಗೋಳ ಅಲ್ಲ, ಜಿಯೋ ಇಂಟರ್ನೆಟ್ ಫ್ರೀ ಆಗಿದೆ ಅಂತ ಹೇಳಿ ಫೇಸ್ಬುಕ್ ನಲ್ಲಿ 'ಅಖಂಡ ಬಾರತ್' ಅಂತ ಹಗಲೂ-ರಾತ್ರಿ ಕೇಸರಿ ಬಣ್ಣ ಬಳಿದು ಕೂತರೆ ಟೈಮ್ ವೇಸ್ಟ್ ಅಷ್ಟೇ. ಪ್ರೇಮ ಅಂತ ಹೇಳಿ ಈಗ ಕೈ ಕುಯ್ದುಕೊಂಡು, ಹುಡುಗಿ ಹಿಂದೆ ಹೋಗಿ 'ಒಲವಿನ ಉಡುಗೊರೆ ಕೊಡಲೇನು, ರಕುತದಿ ಬರೆದೇನು ಇದ ನಾನು' ಅಂತ ಹಾಡಿದರೆ infection ಆದೀತು ಹೋಗಪ್ಪ ರೋಮಿಯೋ ಅಂತಾರೆ ಹುಡುಗೀರು. ಪಾಯಿಂಟ್ ಏನಪ್ಪಾ ಅಂದ್ರೆ, ಆಯಾ ಕಾಲದ ಭಾವಗಳು, ನಂಬಿಕೆಗಳು ಆಯಾ ಕಾಲಕ್ಕೆ ಸೂಕ್ತ. ದೇಶಪ್ರೇಮವೂ ಹಾಗೆ. ಜಾತಿ, ಧರ್ಮ, ಭೂಗೋಳ, ಇತಿಹಾಸ ಇಂತಹ ವಿಷಯವಾಗಿ ಆಗುವ ಹೊಡೆದಾಟ, ಗುದ್ದಾಟ ಗಳು ಈಗ ತೀರಾ irrelevant. ಎತ್ತಣ ಮಂಗಳ ಗ್ರಹಯಾನ, ಎತ್ತಣ ಹಜ್ ಸುಬ್ಸಿಡಿ!

ಬದಲಾಗುತ್ತಿರುವ ಅರ್ಥಗಳ ನಡುವೆ ಹೊಸ ಅರ್ಥಗಳನ್ನು ಅರಿತುಕೊಳ್ಳಲು, ಆಯ್ದುಕೊಳ್ಳಲು ಬೇಕಿರುವುದು ಸ್ವಾತಂತ್ರ್ಯ. ಈಗಿನ ಪೀಳಿಗೆಯ ಸ್ವಾತಂತ್ರ್ಯವದು. ನಮಗೆ ಬೇಕಾದುದನ್ನು ನೋಡಲು, ಕೇಳಲು, ಪರೀಕ್ಷಿಸಲು ಹಾಗೂ ಮಾಡಲು ಬೇಕಿರುವ ಸ್ವಾತಂತ್ರ್ಯ.  ಎಡ ಪಂಥ, ಬಲ ಪಂಥ ಗಳ ಆಚೆ, ಜಾತಿ-ಧರ್ಮ, ಬಣ್ಣಗಳಾಚೆ,  ಸಾವಿರಾರು ದೇವರುಗಳ ಆಚೆ. ನಾನು ನಾನಾಗಿರಲು, ನೀನು ನೀನಾಗಿರಲು, ಬೇಕಿರುವ ಸ್ವಾತಂತ್ರ್ಯ. ಇದನ್ನು ಯಾರು ಯಾರಿಗೂ ಕೊಡಲಾಗುವುದಿಲ್ಲ, ಕೊಟ್ಟರದು ಭಿಕ್ಷೆ, ಸ್ವಾತಂತ್ರ್ಯ ಹೇಗಾದೀತು. ಬೇಡವೆಂದು ಬಿಟ್ಟರದು ಅಜ್ಞಾನ, ಬೆಳವಣಿಗೆ ಹೇಗಾದೀತು. ಜಗತ್ತಿಗೆಲ್ಲ ಒಂದೇ ಸತ್ಯ ಇದೆ ಎಂದರೆ ಶುದ್ಧ ಸುಳ್ಳು, ಅವರವರಿಗೆ ಅವರವರ ಸತ್ಯ. ಆ ಸತ್ಯ ಶೋಧನೆಗೆ ಬೇಕಿರುವ ಆಂತರಿಕ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರಿದೆ, 'ಜವಾಬ್ದಾರಿ'. ಜವಾಬ್ದಾರಿಯೇ ನಿಜವಾದ ಸ್ವಾತಂತ್ರ್ಯ.

ನಾನು ಕೇಸರಿಯಲ್ಲ, ನಾನು ಹಸಿರೂ ಅಲ್ಲ, ನಾನು ಬರೀ ವಾಟ್ಸ್ ಅಪ್, ಫೇಸ್ಬುಕ್, ಟ್ವಿಟ್ಟರ್ ಅಲ್ಲ, ನಾನು ಹಾಕಿಕೊಳ್ಳುವ ಬಟ್ಟೆಯಲ್ಲ, ನಾನು ಬರೀ ಒಂದು ನಂಬಿಕೆಯಲ್ಲ, ಬರೀ ಮಸಾಲೆಗಳಲ್ಲ, ನಾಲ್ಕು ನದಿಗಳಲ್ಲ, ಐವತ್ತೆರಡು ಸೆಕೆಂಡ್ ಗಳ ಒಂದು ಹಾಡಲ್ಲ, ಮೂವತ್ತು ಸಾವಿರ  ದೇವರುಗಳಲ್ಲ, ಕಳೆದು ಹೋದ ಇತಿಹಾಸವಲ್ಲ, ಅಳೆದು ನೋಡಬಲ್ಲ ಭವಿಷ್ಯವಲ್ಲ, ನಾನು ಸರಿಯಾಗಿದ್ದರೆ ನನ್ನ ಊರು, ದೇಶ ಸರಿ. ನಾನು ನಿನ್ನೆ ಕಂಡುಕೊಂಡು ಇವತ್ತು ಮರಳಿ ಬದಲಿಸಿದ ಸತ್ಯವೇ ನನಗೆ ಇವತ್ತಿನ ಧರ್ಮ. ನಾನು ಪರಿಶೀಲಿಸಿ, ಪ್ರಯತ್ನಿಸಿ, ಬಿದ್ದು ಮತ್ತೆ ಎದ್ದು ನಿಂತ ಪಾಠಗಳೇ  ನನಗೆ ಧರ್ಮ ಗ್ರಂಥಗಳು. ನಾನು ಭಾರತ. ನಾನೇ ಇವತ್ತಿನ ಭಾರತ.             


Saturday, June 16, 2018

ಬೂಬೂ



 'ಬೂಬೂ...!!' ಎಂದು ಕೂಗುತ್ತ, ಛಾ ಕುಡಿಯಲು ಬಾ ಎಂದು ಸನ್ನೆ ಮಾಡಿ ಕರೆದಳು ಅಕ್ಕ, ಹಿತ್ತಲಿನಲ್ಲಿ ರಾಶಿ ಭಾಂಡಿಗಳ ನಡುವೆ ಬೆವರಾಗುತ್ತಿರುವವಳನ್ನ. 

ಅಡುಗೆ ಮನೆಯಿಂದ ಬಂದ ಛಾ ಲೋಟವೊಂದು ಪಡಸಾಲಿಯ ಟೀಪಾಯಿ ಮೇಲೆ ಬೆಚ್ಚಗೆ ಹೊಗೆ ಬಿಡುತ್ತ ಬೂಬೂಳನ್ನೇ ದಿಟ್ಟಿಸಿ ನೋಡಹತ್ತಿತು. ಅಕ್ಕನ ಅವಸರ ಬಲ್ಲ ಬೂಬೂ ತನ್ನ ಭಾಂಡಿಗಳನ್ನು ಬೇಗ ಮುಗಿಸಲು ಶುರುಮಾಡಿದಳು.

ತನ್ನ ಅಮ್ಮ ಅಡುಗೆ ಮನೆಯ ಕಪಾಟುಗಳ ಸರಂಜಾಮುಗಳನ್ನು ಕಿತ್ತು ಧೂಳು ಝಾಡಿಸುವ ಕೆಲಸದಲ್ಲಿ ಮಗ್ನಳಾಗಿದ್ದನ್ನು  ಕಂಡ ಪುಟ್ಟೂ ಅವಳ ಕಣ್ಣು ಮರೆಸಿ ಅಲ್ಲಿಂದ ಕಾಲು ಕಿತ್ತು ಹೊರ ಓಡಿಬಂದ. ಟೀಪಾಯಿಯ ಮೇಲಿಟ್ಟ ಛಾ ಕಪ್ಪಿನ ಮೇಲೆ ತೇಲುತ್ತಿದ್ದ ದುಂಡು ಕೆನೆಯ ಪದರನ್ನು ತನ್ನ ತೋರುಬೆರಳಿನಲ್ಲಿ ಅದ್ದಿ ಆಡಿದ. ಅಷ್ಟರಲ್ಲೇ ಪಡಸಾಲಿಗೆ ಬಂದ ಬೂಬೂ ಪುಟ್ಟೂವಿನ ಬೆರಳನ್ನು ತನ್ನ ಸೆರಗಿನಿಂದ ಒರೆಸಿ ಛಾ ಲೋಟವನ್ನು ಎತ್ತಿಕೊಂಡಳು. 'ಕೆನಿ ಬೂಬೂ!!, ಅಂದ್ರ ಛಾ ಆರೇತಿ' ಎಂದು ಒಂದೊಂದೇ ಪದ ಜೋಡಿಸಿ ಅಮ್ಮ ಹೇಳಿಕೊಟ್ಟದ್ದನ್ನು ಹೇಳಿದ ಪುಟ್ಟೂ. 'ಹೌದೂ??' ಎಂದು ಮುದ್ದಿನಿಂದ ಪುಟ್ಟೂ ನ ಗಲ್ಲ ಹಿಂಡಿ ಅಡುಗೆ ಮನೆಯತ್ತ ನಡೆದಳು ಬೂಬೂ.

'ಏನಂತಾನ್ ಅವಾ ಉಡಾಳ?' ಅಂತ ಅಕ್ಕ ಬೂಬೂಳನ್ನು ನೋಡಿ ಕೇಳಲು, 'ಏನಿಲ್ಲಕ್ಕಾ' ಅಂತ ನಕ್ಕಳು. ಛಾ ಆರಿದ್ದು ತಿಳಿದರೆ ಅಕ್ಕ ಮತ್ತೊಮ್ಮೆ ಬಿಸಿ ಮಾಡಿ ಕೊಡುವ ಗೋಜಿಗೆ ಹೋಗಬಾರದು. ಅಕ್ಕನ ಮನೆಯಲ್ಲಿ ಕೆಲಸ ಮಾಡುತ್ತಾ ಈಗ ಐದು ವರ್ಷಗಳು, ತನಗೆ ಮದುವೆಯಾಗಿ ಈ ಊರಿಗೆ ಬಂದು ಕೂಡ ಅಷ್ಟೇ ವರ್ಷ. ಗಂಗೀಮರಡಿಯ ಕೇರಿಯಲ್ಲಿ ಒಂದು ಪುಟ್ಟ ತಗಡಿನ ಮನೆಯಲ್ಲಿ ಅವಳ ಸಂಸಾರದ ಬಿಡಾರ. ಗಂಡನ ಹೆಸರು ಮಲಿಕಸಾಬ. ಮಲ್ಕಪ್ಪಣ್ಣ ಎಂದೇ ಜನರಲ್ಲಿ  ಬೆರೆತ ಮಲಿಕಸಾಬ ಬೂಬೂಗಿಂತ ಹದಿನೈದು ವರ್ಷ ದೊಡ್ಡವನು. ಊರಲ್ಲಿ ಸಣ್ಣ ಪುಟ್ಟ ಬಡಿಗಿ ಕೆಲಸವನ್ನು ಮಾಡಿಕೊಂಡಿದ್ದ ಮಲ್ಕಪ್ಪಣ್ಣ ಬೂಬೂಳ 'ಅಕ್ಕ'ನ ಮನೆಯ ಕಪಾಟು, ಕಿಟಕಿಗಳಿಗೂ ಪರಿಚಯ. ರಾಮಗುಡಿಯ ತೇರು ರಿಪೇರಿ ಕೆಲಸ ತುಸು ಕೈ ಹಿಡಿಯುತ್ತಿದ್ದುದರಿಂದ ಈಗೀಗ ಮಲ್ಕಪ್ಪಣ್ಣ ಮನೆಗೆ ಬರಲು ಆರರ ಸಂಜೆಯಾಗುತ್ತದೆ. ಸಂಜೆ ತನ್ನ ಯಜಮಾನ ಮನೆಗೆ ಬರುವ ಮುನ್ನ ಅಂಗಳದ ಕಸ ಗೂಡಿಸಿ, ನೀರು ಚಿಮುಕಿಸಿ, ಕಿಟಕಿಯಡಿಗೆ ಬಂದು ಕುಳಿತರೆ ತನಗೆ ಗಂಗೀಮರಡಿಯ ಮಸೀದಿಯ ಅಜಾನ್ ಕೇಳಿಸುತ್ತದೆ. ಕುಳಿತಲ್ಲಿಂದಲೇ ಕಿಟಕಿಯ ಕಂಬಿಗಳನ್ನು ಸವರಿ ಕೈ ಮುಗಿದು, ಮನೆಯ ಟ್ಯೂಬ್ ಲೈಟ್ ಹಚ್ಚುತ್ತಾಳೆ.

ಮಲಿಕಾಸಾಬನನ್ನು ಬಿಟ್ಟರೆ ಆ ಊರಿನಲ್ಲಿ ಬೂಬೂಳಿಗೆ ಯಾವ ಸಂಬಂಧಿಕರೂ ಇರಲಿಲ್ಲ. ಇಷ್ಟು ದೂರದ ಊರಿಗೆ ತನ್ನ ಮದುವೆ ಗೊತ್ತು ಮಾಡಿದ ತನ್ನ ಚಾಚಾನ ನೆನೆದು ಆಗಾಗ ಅಳು ಬರುತ್ತದೆ. ರೈಲಿನಲ್ಲಿ ತನ್ನೂರಿಗೆ ಹೋಗಲು ಎರಡು ರಾತ್ರಿ ಬೇಕು. ಕೊನೆ ಬಾರಿ ಊರಿಗೆ ಹೋದಾಗ ಚಾಚಾ ಮಂಚಕ್ಕೇ ಅಂಟಿಕೊಂಡಂತಿದ್ದ, ಈಗ ಹೇಗಿದ್ದಾನೋ. ಮುಂದಿನ ತಿಂಗಳು ಹೇಗಾದರೂ ಮಾಡಿ ಹೋಗಿ ಚಾಚಾನನ್ನು ನೋಡಿಕೊಂಡು ಬರೋಣ ಎಂದು ಗಂಡನನ್ನ ಬೇಡಿ ಒಪ್ಪಿಸಿದ್ದಳು. ಊರಿಗೆ ಹೋಗುವುದ ನಿಶ್ಚಯಿಸಿದ ದಿನದಿಂದ ಸರಿಯಾಗಿ ಮೂವತ್ತು ದಿನಗಳನ್ನು ಎಣಿಸಿ ಗೋಡೆಯ ಕ್ಯಾಲೆಂಡರ್ ಮೇಲೆ ತನ್ನ ಕಾಜಲ್ ನಿಂದ ಒಂದು ಸಣ್ಣ ಚುಕ್ಕಿಯನ್ನು ಇಟ್ಟಿದ್ದಾಳೆ. ನೆನಪಾದಾಗ ಒಮ್ಮೆ ಪುಟ ತಿರುಗಿಸಿ, ಪುಟದ ಹಿಂದೆ ಅಡಗಿ ಕುಳಿತ ಆ ಚುಕ್ಕಿಯನ್ನು ನೋಡಿ ಸಮಾಧಾನವಾಗುತ್ತಾಳೆ. 'ನೀ ನಿನ್ನ ಚುಕ್ಕಿ ಮುಟ್ಟುದು ಇರ್ಲಿ, ಚಾಚಾ ಅದನ್ನ ಮುಟ್ಟತಾನೇನ ನೋಡೋಣು ತಡಿ ಇನ್ನ ' ಎಂದು ಗೇಲಿ ಮಾಡಿದ ಮಾಲಿಕಸಾಬನ ಮೇಲೆ ಕೋಪಿಸಿಕೊಂಡವಳು, ಅವನ ಬಾಯಿಂದಲೇ ತೋಬಾ ತೋಬಾ ಅನಿಸಿದ್ದಳು. ಈ ಚಾಚಾ ಚುಕ್ಕಿಯ ಸಂಭ್ರಮವನ್ನು ತನ್ನ ಅಕ್ಕನ ಜೊತೆಗೂ ಹಂಚಿಕೊಂಡು ಖುಷಿಪಟ್ಟಿದ್ದಳು. ಗಂಡನ ಬಿಟ್ಟರೆ ಅಕ್ಕನೇ ಬೂಬೂಳಿಗೆ ಆಸರೆ, "ಸಂಜೀಮುಂದ ಲೇಟ್ ಆಗಿ ಹೋಗೂ ಧವತಿ ಏನೈತಿ ನಿಂಗ, ದಾರಿ ಕಟ್ಟಿಗೆ ಆ ಉಡಾಳ್ ಹುಡಗೋರು ಕುಂತಿರ್ತಾವ ಆ ಹೊತ್ತಿನ್ಯಾಗ ಮೊದಲ" ಎಂದು ಅಕ್ಕ ಅವಳನ್ನು ಜಬರಿಸಿ ಬೇಗ ಮನೆಗೆ ಅಟ್ಟಿದ್ದು, ಪುಂಡರ ಗುಂಪನ್ನು ನೋಡಿದಾಗ ನೆನಪಾಗಿ ಮುಗುಳುನಗುತ್ತಾಳೆ. ಕಟ್ಟೆಯ ಹುಡುಗರು ಮರಳಿ ನಕ್ಕು ತುಸು ದೂರ ಹಿಂಬಾಲಿಸಿದರೆ ಹೆದರಿ ವೇಗ ಪಡೆಯುತ್ತಾಳೆ. ತನಗೆ ತಿಳಿಯದೇ ಇದ್ದ ಎಷ್ಟೋ ವಿಷಯಗಳನ್ನ ತನ್ನಕ್ಕನಿಂದ ತಿಳಿದುಕೊಂಡಿದ್ದಾಳೆ, ತಿಂಗಳಿಗೆ ಐದು ದಿನ ತಾನು 'ಹೊರಗಾದಾಗ' ತನ್ನನ್ನು ರಾತ್ರಿ ಮುಟ್ಟಕೂಡದು ಎಂದು ತನ್ನ ಯಜಮಾನನಿಗೆ ತಾನೇ ತಿಳಿ ಹೇಳಿದ್ದಾಳೆ. ಇಷ್ಟೆಲ್ಲಾ ಗಟ್ಟಿತನ, ತಿಳುವಳಿಕೆ ಅವಳಿಗೆ ದೊಡ್ಡಮನೆ ಅಮ್ಮನವರಿಂದಲೇ ಬಂದಿರುವುದು ಎಂದು ಗೊತ್ತಿದ್ದೂ ಮಲ್ಕಪ್ಪಣ್ಣ "ಅರೆ! ಭಾಳಾ ಶಾಣೆ ಆಗಿ ನೋಡ್ ನೀ ಈಗೀಗ" ಅಂತ ಕಾಡಿಸಿ ನಗುತ್ತಾನೆ. 

ಆವತ್ತು ಮಧ್ಯಾಹ್ನ ಗಂಗೀಮರಡಿಯಲ್ಲಿ ಎಂದಿನಂತೆ ತುಸು ಪೋಲೀಸು ವ್ಯಾನುಗಳು ಸಾಲುಗಟ್ಟಿ ನಿಂತಿದ್ದವು. ಊರಿನಾಚೆ ಇರುವ ಈ ಕೇರಿಯಲಿ ಈ ದೃಶ್ಯ ಹೊಸದೇನಲ್ಲ, "ರಾಮನವಮಿ ಬಂದಿದ್ಕ ಪೊಲೀಸ್ ಬಂದೂಬಸ್ತ್ ಜಾಸ್ತಿ ಆಗೇತಿ" ಎಂದು ನಿನ್ನೆ ರಾತ್ರಿ ಗಂಡ ಹೇಳಿದ ಮಾತು ನೆನಪಾಗಿ ಆ ವ್ಯಾನುಗಳಿಂದ ತುಸು ದೂರದಿಂದಲೇ ಹಾದು ಅಕ್ಕನ ಮನೆಗೆ ಹೆಜ್ಜೆ ಹಾಕಿದಳು. ವಾರೆಗಣ್ಣಿಂದಲೇ ವ್ಯಾನುಗಳನ್ನು ಎಣಿಸುತ್ತ ಬೇಗ ಅಕ್ಕನ ಮುಂದೆ ಇದೆಲ್ಲ ಕಥೆ ಮಾಡಿ ಹೇಳಬೇಕು, "ಇವತ್ತ  ಎಣಿಸಿ ಹನ್ನೆರಡು ಪೊಲೀಸ್ ಗಾಡಿ ಬಂದಾವ್ ಅಕ್ಕಾ!". "ಏನ್ ಬಿಡಾ ಬೂಬೂ, ಸುಮ್ಮ ಕಡ್ಡೀನ ಗುಡ್ಡಾ ಮಾಡ್ತಾವ್ ಮಂದಿ. ಪಾಪ್ ಪೊಲೀಸರು ಹೆಂಡತಿ ಮಕ್ಕಳ್ನ ಬಿಟ್ಟು ಈ ಪುಢಾರಿಗಳ ಮುಕಳಿ ಕಾಯ್ಬೇಕು" ಎಂದು ಏನೋ ಒಂದನ್ನ ಹೇಳಿ ನಕ್ಕು ಬಿಡುತ್ತಾಳೆ ಅಕ್ಕ. ತನ್ನ ಮನದಲ್ಲಿದ್ದ ಎಷ್ಟೋ 'ಗುಡ್ಡ' ಗಳನ್ನ ಹೀಗೇ ಒಂದೇ ಕ್ಷಣದಲ್ಲಿ ಅಕ್ಕ 'ಕಡ್ಡಿ' ಮಾಡಿಬಿಡುತ್ತಾಳೆ.

ಗೇಟು ತೆಗೆದು ಒಳ ಬಂದ ಬೂಬೂಳನ್ನು ನೋಡಿ ಅಕ್ಕ ಅಡುಗೆ ಮನೆಯ ಕಿಟಕಿಯಿಂದಲೇ ಬಾ ಎಂದಳು. ಸೆಕ್ಯೂರಿಟಿ ಗಾರ್ಡ್ ಖಾನ್ ಭಯ್ಯಾ "ಬಾರವಾ ಸೌಕಾರ್ತಿ!" ಅಂತ ಚಾಷ್ಟಿ ಮಾಡಿ ನಕ್ಕು ಬರಮಾಡಿಕೊಂಡ. ಒಳಗೆ ಬಂದವಳೇ ತನ್ನ ಬುರ್ಖಾ ತೆಗೆದು ಚೀಲದಲ್ಲಿಟ್ಟು ಹಿತ್ತಲಿನ ಕಡೆ ನಡೆದಳು. ಹಿತ್ತಲಿನಲ್ಲಿದ್ದ ಪುಟ್ಟೂ ಅವಳನ್ನು ನೋಡಿ ಅವರಮ್ಮನ ಕಡೆಗೆ ಓಡಿದ. ಬೂಬೂ ನೀರಲ್ಲಿ ಅದ್ದಿದ ಬಟ್ಟೆಗಳನ್ನು ಒಂದೊಂದಾಗಿ ತೆಗೆಯುವಾಗ ಪಡಸಾಲಿಯ ಬಾಗಿಲಿನಿಂದ ಪುಟ್ಟೂ ಕಯ್ಯಲ್ಲಿ ಛಾ ಕಪ್ ಹಿಡಿದುಕೊಂಡು ಹಗುರವಾಗಿ, ಒಂದೊಂದೇ ಹೆಜ್ಜೆ ಹಾಕುತ್ತ, ಛಾ ಕೆಳ ಬೀಳಿಸದೆ ಅವಳತ್ತ ಬರುವುದನ್ನು ನೋಡಿ ಬಟ್ಟೆ ಬಿಟ್ಟು ಅವನತ್ತ ಓಡಿದಳು. "ಬೂಬು, ಛಾ!" ಎಂದು ಅರ್ಧಮರ್ಧ ಹೇಳಿದ ಪುಟ್ಟುವಿನ ಕೆನ್ನೆಗೆ ಮುತ್ತಿಡುತ್ತ "ಛಾ!!" ಎಂದು ಅವನ  ಧಾಟಿಯಲ್ಲೇ ಹೇಳಿ ನಕ್ಕಳು. "ಅಕ್ಕಾ, ಇವಾ ಜಳಕಾ ಮಾಡ್ಯಾನ್ರೀ?" ಅಂತ ಅಲ್ಲಿಂದಲೇ ಕೂಗಿ ಅಕ್ಕನನ್ನು ಕೇಳಿದಳು. "ಆಗ್ಲಿಂದ ಕರ್ಯಾಕತ್ತೀನಿ ಬರೇ ಓಡ್ತಾನಾ.. ಅವರಪ್ಪಾ ದಿನಾ ಗಿಡಕ್ಕ ನೀರು ಹಾಕ್ಬೇಕು ಅಂತ ಹೇಳ್ಯಾನಂತ ಇವ ಸುಬ್ಬ ಅದನ ಮಾಡಾಕ್ ಹೋಗಿ ಇಷ್ಟು ರಾಡಿ ಯಬಸ್ಯಾನ ನೋಡು" ಅಂತ ಪುಟ್ಟೂನ ಶರ್ಟ್ ಝಾಡಿಸುತ್ತ ಅವನ ಚಡ್ಡಿ ಕಳಚಿದಳು. "ಅಯ್ಯೋ.. ಪಪ್ಪಿ ಶೇಮ್" ಅಂತ ಲೇವಡಿ ಮಾಡಿದ ಬೂಬೂಳಿಗೆ "ಹ್ಹೀ..!!"' ಎಂದು ಹಲ್ಲು ಗಿಂಜುತ್ತ ಅಲ್ಲಿಂದ ಬಚ್ಚಲು ಮನೆಗೆ ಓಡಿದನು ಪುಟ್ಟೂ.  ಅವನ ಹಿಂದೆಯೇ ಓಡಿ  ಬಂದ ಅಕ್ಕ ಬಚ್ಚಲು ಮನೆಯಲ್ಲಿ ಬಿಸಿ ನೀರಿಗೆ ತಣ್ಣೀರು ಬೆರೆಸಿ, ಪುಟ್ಟೂವಿನ ಗುಣಗಡಿಗೆ ತೆಗೆದು ಶೆಲ್ಫ್ ಮೇಲೆ ಇಡುತ್ತಾಳೆ. ಪುಟ್ಟು ಆಟವಾಡುತ್ತ ಬಕೆಟ್ ನೀರ ಮೇಲೆ ತನ್ನ ಸಣ್ಣ ಕಾರನ್ನು ಓಡಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಭಾಂಡೀ ಸದ್ದಾಗಿ ಅಕ್ಕ ಕಿಟಕಿಯಾಚೆ ನೋಡಿದರೆ ಬೂಬು ಗೇಟಿನಿಂದ ಹೊರಕ್ಕೆ ಓಡುತ್ತಿದ್ದಾಳೆ. ಹೆದರಿಕೆಯಾಗಿ ಹೊರ ಬಂದು ನೋಡಿದರೆ ಬೂಬು ಹಾಗು ಮತ್ತೊಬ್ಬ ಪುಟ್ಟ ಹುಡುಗ ಅವರ ಮನೆಯತ್ತ  ಓಡುತ್ತಿದ್ದಾರೆ. ಏನು ತೋಚದಾಗಿ ಅಕ್ಕ ಪುಟ್ಟುವಿನತ್ತ ಓಡಿ ಬಂದು ಅವನನ್ನು ಬಚ್ಚಲಿನಿಂದ ಹೊರನಡೆಸಿ ಟವೆಲ್ ಸುತ್ತಿ ಮತ್ತೆ ತಿರುಗಿ ಬಂದು ಬಾಗಿಲಿನತ್ತ ನಿಂತು ನೋಡುತ್ತಾಳೆ. ಅಷ್ಟರಲ್ಲಿ ಒಂದೆರೆಡು ಪೋಲೀಸು ವ್ಯಾನುಗಳು ಗಂಗೀರಾಮರಡಿಯಿಂದ ಸದ್ದು ಮಾಡುತ್ತಾ ಊರೊಳೊಗೆ ಹೋಗುತ್ತವೆ. ಏನೋ ತೋಚಿದಂತಾಗಿ ಅಕ್ಕ ಹೊರ ಓಡಿ ಮನೆಯ ಮೇನ್ ಗೇಟು ಹಾಕು ಎಂದು ಖಾನ್ ಅಣ್ಣನಿಗೆ ಹೇಳಿ ಬಂದು ಎಲ್ಲ ಕಿಟಕಿಗಳನ್ನು ಹಾಕಿ ಪುಟ್ಟುವಿನ ಹಿಡಿದು ಕುಳಿತು ತನ್ನ ಮನೆಯವರಿಗೆ ಅವಸರದಿ ಫೋನು ಮಾಡುತ್ತಾಳೆ.   
         
ಗಂಗೀಮರಡಿಯಲ್ಲಿ ಮತ್ತೆ ಹಿಂದೂ-ಮುಸ್ಲಿಂ ದಂಗೆಗಳಾಗಿವೆ, ಇಬ್ಬರು ಮುಸ್ಲಿಮರನ್ನು ರಾಮ ಗುಡಿಯ ಬಳಿ ಕೊಲ್ಲಲಾಗಿದೆಯಂತೆ, ಅವರಿಬ್ಬರೂ ಮಂದಿರದ ಕೆಲಸ ಮಾಡುತ್ತಿದ್ದವರೇ ಅಂತೆ, ಸಂಜೆ ಒಳಗೆ ಕರ್ಫ್ಯು ಘೋಷಣೆ ಆಗುತ್ತದೆಯಂತೆ, ಮನೆಯತ್ತ  ಓಡುತ್ತಿದ್ದ ಬೂಬುವಿಗೆ ಹೀಗೆ ಏನೇನೋ ಕಿವಿಗೆ ಬೀಳುತ್ತಿದ್ದಂತೆಯೇ ಅವಳ ಆತಂಕ ಮುಗಿಲು ಮುಟ್ಟುತ್ತಿದೆ. ಇವತ್ತು ಕಟ್ಟೆಯ ಮೇಲೆ ಪುಢಾರಿಗಳಿಲ್ಲ, ಆಗಲೇ ತನಗೆ ಕಂಡ ಹನ್ನೆರೆಡು ಪೊಲೀಸ್ ವ್ಯಾನುಗಳು ಆ ಜಾಗದಲಿಲ್ಲ, ಮನೆ ಹತ್ತಿರವೇನೋ ದೊಡ್ಡ ಬೆಂಕಿಯ ಹೊಗೆಯೊಂದು ಕಾಣಿಸಿದಂತಿದೆ, ಜನರ ಕೂಗುಗಳು ಕೇಳಿಬರುತ್ತಿವೆ. ಮತ್ತೊಂದು ವ್ಯಾನು ಜನರನ್ನ ತುಂಬಿಕೊಂಡು ಊರೆಡೆಗೆ ಹೋಯಿತು ಸದ್ದು ಮಾಡುತ್ತಾ ಹೋಯಿತು. ಮಸೀದಿಯ ಬಾಗಿಲು ಹಾಕಿದೆ. ಮಲಿಕಸಾಬ!! ಅಯ್ಯಯ್ಯೋ! ಮಲಿಕಸಾಬ ಒಂದು ವಾರದಿಂದ ರಾಮ ಗುಡಿಯ ಬಡಿಗಿ ಕೆಲಸವನ್ನೇ ಮಾಡುತ್ತಿದ್ದಿದ್ದು, ಈ ಜಗಳದಲ್ಲಿ ಅವನೆಲ್ಲಿದ್ದಾನೋ! ಒಂದೇ ಕ್ಷಣದಲ್ಲಿ ಸಾವಿರ ಯೋಚನೆಗಳು ಬಂದು ಆ ಸುಡು ಬಿಸಿಲಿನಲ್ಲಿ ಅವಳ ತಲೆ ಸುಟ್ಟಂತಿದೆ. ಜೋರಾಗಿ ನಡೆಯುತ್ತಿದ್ದ ಅವಳು ಈಗ ಹುಚ್ಚಿಯಂತೆ ಮನೆಯತ್ತ ಓಡ ಹತ್ತಿದ್ದಾಳೆ. 

ತನ್ನ ಮನೆಯ ಹಿಂದಿನ ಸಣ್ಣ ಬೀದಿಯಲ್ಲಿ ಅಲ್ಲಲ್ಲಿ ಟೈರು, ಕಟ್ಟಿಗೆಗಳಿಗೆ ಬೆಂಕಿ ಹಾಕಲಾಗಿದೆ. ಓಡುತ್ತ ಮನೆಯತ್ತ ಹೋಗಿ ನೋಡಿದರೆ ಮನೆಗೆ ಕೀಲಿ ಹಾಕಿದ್ದೇ ಇದೆ. ಪಕ್ಕದ ಮನೆಯ ಬಾಗಿಲು ಬಡಿಯುತ್ತಾಳೆ. ಬಾಗಿಲು ತೆಗೆದಿದ್ದೇ ಫಾತಿಮಾ ಅಕ್ಕ ಅಳುತ್ತ ಬೂಬುಳನ್ನು ತಬ್ಬಿಕೊಳ್ಳುತ್ತಾಳೆ. ಮೊದಲೇ ಹೆದರಿಕೆಯಲ್ಲಿದ್ದ ಬೂಬು ಇದೆಲ್ಲ ಕಂಡು ಇನ್ನೂ ಕಂಗಾಲಾಗುತ್ತಾಳೆ. ರಾಮ ನವಮಿಯ ತಯಾರಿ ಮಾಡುವಲ್ಲಿ ಕೆಲ ಕಿಡಗೇಡಿಗಳು ಕಲ್ಲು ಎಸೆದರಂತೆ, ನಮ್ಮವರು-ಅವರು ಸೇರಿ ಹೊಡೆದಾಡಿದರೆಂತೆ. ಪೊಲೀಸರು ಅಲ್ಲಿ ಬಂದು ಲಾಠಿ ಚಾರ್ಜ್ ಮಾಡಿ ಅದೆಲ್ಲ ಸಂಭಾಳಿಸುವಷ್ಟರಲ್ಲೇ ಇತ್ತ ಮಸೀದಿಯ ಹತ್ತಿರ ಕೆಲವರನ್ನು ಎಳೆದು ತಂದು ಕೂಡಿ ಹಾಕಿದ್ದಾರಂತೆ. ಹೀಗೆ ಎಲ್ಲ ಅಂತೇ ಕಂತೆಗಳ ಹೇಳಿ ಇನ್ನು ಜೋರಾಗಿ ಅಳುತ್ತಾ ತನ್ನ ಮಕ್ಕಳನ್ನು ತಬ್ಬಿದಳು ಫಾತಿಮಕ್ಕ. "ನಮ್ಮ್ ಹಿರಿಯಾಗ ಹೋಗಬ್ಯಾಡ ಅಂತ ಬಡಕೊಂಡ್ಯಾ, ಇಲ್ಲೇ ಮಸೀದಿ ಕಡೆ ಹೋಗಿ ಬರ್ತೀನಿ ಅಂತ ಉಟ್ಟ ಅರಬ್ಯಾಗ ಓಡಿ ಹೋದ. ಈಗ ನೋಡಿದ್ರ ಮರ್ಡರ್, ಪರ್ಡೆರ್ ಅಂತ ಸುದ್ದಿ ಬರಕತ್ತಾವ" ಅಂತ ಒಂದೇ ಉಸಿರಲ್ಲಿ ಹೇಳಿ ಮತ್ತೆ ಅಳತೊಡಗಿದಳು. ಇದೆಲ್ಲ ಕೇಳಿ ಗುಡಿಯ ಕೆಲಸಲ್ಲಿದ್ದ ಮಲಿಕಸಾಬನ ನೆನಪಾಗಿ ದುಃಖ ಇಮ್ಮಡಿಯಾಗಿ ಧಸಗ್ಗೆಂದು ನೆಲಕ್ಕೆ ಕುಸಿದು ಬಿಟ್ಟಳು ಬೂಬು.   

ಒಂದೆರಡು ಘಂಟೆಗಳ ನಂತರ ಫಾತಿಮಕ್ಕನ ಗಂಡ ಹಾಗೂ ಮಲಿಕಸಾಬ ಸೇರಿದಂತೆ ಹತ್ತು ಹದಿನೈದು ಜನರು ಗಾಡಿಗಳನ್ನು ಇಳಿದು ಧಡಧಡನೆ ಓಡಿ ಬಂದು ಇಫ್ತಾರ್ ಮಾಸ್ಟರ್ ರ ಮನೆ ಹೊಕ್ಕುತ್ತಾರೆ. ಮಲಿಕಾಸಾಬನಿಗೆ ಕಾಲಿಗೆ ಚೂರು ಗಾಯವಾಗಿದೆ, ಓಡಾಟದಲ್ಲಿ ತನ್ನದೇ ಉಳಿ ತನಗೆ ತಾಕಿ ಹೀಗಾಯಿತು ಎಂದು ಅವನು ಹೇಳಿದ ಮೇಲೆ ಬೂಬುಳಿಗೆ ತುಸು ಸಮಾಧಾನ. ಅಲ್ಲಿ ನೆರೆದ ಜನರೆಲ್ಲಾ ಮಸೀದಿಯ ಮೌಲವಿ, ಕೇರಿಯ ಮುಸ್ಲಿಂ ನಾಯಕರು ಮತ್ತು ಕೆಲವರು ಕಟ್ಟೆಯ ಮೇಲೆ ಕೂರುವ ಅದೇ ಪುಂಡ ಪುಢಾರಿಗಳು ಎಂದು ಒಂದೇ ನೋಟದಲ್ಲಿ ಬೂಬುಳಿಗೆತಿಳಿಯಿತು. ಮಂದಿರದ ಹತ್ತಿರ ಮಲ್ಕಪ್ಪಣ್ಣನ ಜೊತೆ ಕೆಲಸ ಮಾಡುತ್ತಿದ್ದ ನಾಲ್ಕು ಹುಡುಗರ ಪೈಕಿ ಇಬ್ಬರಿಗೆ ಗಾಯವಾಗಿದೆ ಹಾಗೂ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ನಡೆದ ಕಲ್ಲು ತೂರಾಟ ಹಾಗು ಹೊಡೆದಾಟಗಳಲ್ಲಿ ನಮ್ಮವರಿಗೇ ಜಾಸ್ತಿ ಗಾಯಗಳಾಗಿವೆ. ಹಿಂದೂಗಳ ಪೈಕಿ ಒಬ್ಬ ಹುಡುಗನೂ ಸಹ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ. ಪೋಲೀಸರ ಕಾವಲು ಇದ್ದಿದ್ದಕ್ಕೆ ನಮಗೆ ಒಳ ಹೋಗಲಾಗಿಲ್ಲ, ಇಲ್ಲ ಅಂತಂದ್ರೆ ಇನ್ನೂ ಇತ್ತು ಕಥೆ ಬೇರೆ ಅಂತ ಒಬ್ಬ ಪುಢಾರಿ ಚೀರಿ ಹೇಳಿದ. ಇಫ್ತಾರ್ ಮಾಸ್ತರ ಅವನಿಗೆ ಈ ಆಕ್ರೋಶವನ್ನು ಬೇಕಾದಲ್ಲಿ ಉಪಯೋಗಿಸು, ಇಲ್ಲಿ ಮಾಡಿದರೇನು ಪ್ರಯೋಜನ ಅಂತ ಬೈದು ಕೂರಿಸಿ ನೀರು ಕುಡಿಸಿದರು. ಅಷ್ಟರಲ್ಲಿ ಇನ್ನೊಬ್ಬ ನಾಯಕ ಮಾಲಿಕಸಾಬನನ್ನು ಹಿಡಿದು ನಮ್ಮ ಭಾಯಿ ಮಲಿಕ್ಸಾಬ್ ಯಾರಿಗೂ ತ್ರಾಸು ಮಾಡಿದವನಲ್ಲ ಅಂಥವನ ಮೇಲೆ ಹಲ್ಲೆ ಮಾಡಿದ್ದಾರೆ ರಾಂಡ್ ಕೆ ಬಚ್ಚೆ ಅಂತ ಎದ್ದು ನಿಂತ. ಇದರಿಂದ ತುಸು ಹೆದರಿದ ಬೂಬು ಮಲಿಕಸಾಬ ನ ಕಯ್ಯನ್ನು ಚೂರು ಗಟ್ಟಿಯಾಗಿ ಹಿಡಿದು ಕುಳಿತಳು. ತುಸು ಹೊತ್ತಿನ ನಂತರ ಮೌಲವಿ ಸಾಬರು ಎಲ್ಲರನ್ನೂ ಉದ್ದೇಶಿಸಿ 'ಇವತ್ತು ಆಗಿದ್ದೇ ಸಾಕು, ಇನ್ನು ಮೇಲೆ ಗುಡಿಯ ಹತ್ತಿರ ನಮ್ಮವರು ಹೋಗುವಂತಿಲ್ಲ, ಅವರ ಜನರ ಜೊತೆ ಜಾಸ್ತಿ ಬೆರೆಯುವಂತಿಲ್ಲ. ಇವತ್ತು, ನಾಳೆ ಯಾರೂ ಮನೆ ಹೊರಗೆ ಬರೋ ಹಂಗಿಲ್ಲ. ಎರಡು ದಿನ ಆದಮೇಲೆ ಎಲ್ಲ ತಾನೇ ಸರಿ ಆಗುತ್ತದೆ' ಅಂತ ಹೇಳಿ ಕುಳಿತರು. ಇಷ್ಟೊತ್ತು ದೆವ್ವ ಬಂದಂತೆ ಕಿರುಚಾಡುತ್ತಿದ್ದ ಹುಡುಗರು ಹಾಗೂ ನಾಯಕರು ಈಗ ಸುಮ್ಮನಾಗಿ ಮಾಸ್ತರ್ ರ ಮನೆಯ ತಿಂಡಿ, ಛಾ, ಬಿಸ್ಕೀಟು ಸೇವಿಸುತ್ತ ನಗಾಡಿಕೊಂಡು ಇದ್ದದ್ದನ್ನು ನೋಡಿದ ಬೂಬು ಗೆ ತುಸು ಆಶ್ಚರ್ಯವಾದರೂ ಸಹ ಸಧ್ಯ ಸಮಾಧಾನ ಆದರಲ್ಲ ಜನ ಅಂತ ನಿರಮ್ಮಳವಾಯಿತು. ಎದ್ದು ಹೋಗಿ ಮಾಸ್ತರ್ ಹೆಂಗಸರಿಗೆ ಸಹಾಯ ಮಾಡು ಎಂದು ಸನ್ನೆ ಮಾಡಿ ಹೇಳಿದ ಮಲಿಕಸಾಬನ ಮಾತಿನಂತೆ ಅಲ್ಲಿ ಕೂತವರ ಛಾ ಕಪ್ ಗಳನ್ನ ಗೂಡಿಸಲು ಶುರು ಮಾಡಿದಳು ಬೂಬು. ಈ ಎಲ್ಲದರ ನಡುವಲ್ಲಿ ತನ್ನ ಬುರ್ಖಾ ದೊಡ್ಡಮನೆಯಲ್ಲೇ ಮರೆತು ಹೋದದ್ದು ಅವಳಿಗೆ ನೆನಪಾಗಿದ್ದು ಅಲ್ಲೇ ಕುಳಿತ ಒಬ್ಬ 'ನಾಯಕ' ಅವಳನ್ನು ಕೆಟ್ಟ ಕಣ್ಣಿನಿಂದ ಗುರಾಯಿಸಿ ನೋಡಿದಾಗ.

ಮುಂದಿನ ಎರಡು ದಿನ ಇಫ್ತಾರ್ ಮಾಸ್ತರ್ ರ ಮನೆಯಲ್ಲಿ ಇಂಥ ಹತ್ತಾರು ಮೀಟಿಂಗ್ ಗಳು ಆದವು. ಒಂದೆರಡರಲ್ಲಿ ಮಲಿಕಸಾಬನ ಜೊತೆ ಬೂಬು ಕೂಡ ಹೋಗಿದ್ದಳು. ಪಕ್ಕದ ಊರಿನಿಂದ ಒಬ್ಬ ಪ್ರಭಾವಿ ಮೌಲವಿ ಬಂದು ಹೇಗೆನಮ್ಮವರಿಗೆ ಕೊನೆಗೆ ನಮ್ಮವರೇ ಆಗೋದು, ಹೇಗೆ ಬೇರೆಯವರಿಂದ  ತಾವುಗಳು ದೂರ ಇರಬೇಕು ಎಂದು ಜೋರು ಜೋರಾಗಿ ಬಾಷಣ ಮಾಡಿದರು. ಇನ್ನು ಮೇಲೆ ಅವರ ಕಯ್ಯಲ್ಲಿ ನಮ್ಮವರು ಕೆಲಸ ಮಾಡುವಂತಿಲ್ಲ, ಆ ಹಾಳು ಮಂದಿರದ ಕೆಲಸಕ್ಕೆ ಹೋಗಿದ್ದೇ ಇಷ್ಟಕ್ಕೆಲ್ಲ ಕಾರಣವಾಗಿದ್ದು. ನಮ್ಮವರನ್ನು ಕರೆಸಿ ಕೆಲಸ ಮಾಡಿಸಿಕೊಂಡು ಕೊನೆಗೆ ದುಡ್ಡನೂ ಕೊಡದೆ ಹೊಡೆದು ಹಾಕಿದ್ದಾರೆ ಅಂತ ಬಾಯಿಗೆ ಬಂದಂಗೆ ಬೈದು ಸುಮ್ಮನಾದರು. ಮತ್ತದೇ ನೀರು, ಕಾಫಿ, ಪಾನೀಯ. ಮಲಿಕಸಾಬನೋ ಶಾಲೆಗೆ ಬಂದ ಮಕ್ಕಳಂತೆ ಕರೆದಾಗೆಲ್ಲ ಬಂದು ಎಲ್ಲವನ್ನೂ ವಿಧೇಯಕನಾಗಿ ಕೇಳಿ ಆಮೇಲೆ ಕೊಟ್ಟಿದ್ದನ್ನು ತಿಂದು, ಛಾ ಕುಡಿದು ಏಳುತ್ತಿದ್ದ.

ಎರಡು ದಿನಗಳ ನಂತರ ಕೇರಿಯು ತುಸು ಶಾಂತವಾಗಿತ್ತು, ಮಲಿಕಸಾಬನು ಇಲ್ಲೇ ಚೂರು ಹೋಗಿ ಬರುತ್ತೇನೆ, ಸಂಜೆಯಾಗುತ್ತದೆ ಅಂತ ಹೇಳಿ ಬೆಳಿಗ್ಗೆಯೇ ಮನೆಯಿಂದ ಹೊರಟು ಹೋಗಿದ್ದ. ಮೂರು ದಿನಗಳಿಂದ ನಡೆದುದೆಲ್ಲದರಿಂದ ಬೇಸರಗೊಂಡಿದ್ದ ಬೂಬುಗೆ ಮತ್ತೆ ತನ್ನ ಚಾಚಾ ನೆನಪಾಗಿದ್ದ. ಚೂರೇ ಚೂರು ಪರಿಚಿತವೆನಿಸಲು ಐದು ವರ್ಷ ತಗೆದುಕೊಂಡ ಈ ಊರು ಒಂದೇ ರಾತ್ರಿಯಲ್ಲಿ ಮತ್ತೆ ಅಪರಿಚಿತವೆನಿಸಿ ಕತ್ತಲಿನ ಭೂತದಂತೆ ಕಂಡು ಅವಳನ್ನು ಬೆಚ್ಚಿ ಬೀಳಿಸಿತ್ತು. ಅವಳನ್ನು ಸಮಾಧಾನಿಸುವ ಕ್ಯಾಲೆಂಡರ್ ನ ಚುಕ್ಕಿ ಯಾಕೋ ಅವಳನ್ನ ಇನ್ನೂ ಒಂಟಿತನದೆಡೆಗೆ ದೂಕಿತು. ಅಕ್ಕ!! ಒಮ್ಮೆಲೇ ತನ್ನ ಅಕ್ಕನ ನೆನಪಾಗಿ ಮನಸಲ್ಲಿ ಒಂದು ಹೊಸ ಸಂಚಲನವೇ ಹುಟ್ಟಿ ಕಣ್ಣು ಹಿಗ್ಗಿದವು. ಮೂರು ದಿನಗಳಾಯ್ತು, ಅಕ್ಕನನ್ನು ನೋಡಿಕೊಂಡು ಬಂದರೆ ತುಸು ಸಮಾಧಾನವಾದೀತು. ಅವರ ಮನೆ ಹತ್ತಿರ ಏನೇನು ಗಲಾಟೆಗಳು ಆಗಿವೆಯೋ, ಮಂದಿರದ ಕಮಿಟಿಯಲ್ಲಿ ಅಕ್ಕನ ಮನೆಯವರೂ ಸಹ ಇದ್ದಾರೆ. ಆದರೆ ಇಷ್ಟೆಲ್ಲಾ ರಾದ್ಧಾಂತಗಳು ಆದಮೇಲೆ ನಾನು ಹೋದರೆ ಅಕ್ಕನ ಮನೆಯ ಜನ ನನ್ನ ಒಳ ಸೇರಿಸಿಯಾರೇ? ಗುಡಿಯ ಕೆಲಸಕ್ಕೆ ನನ್ನ ಗಂಡನೂ ಇದ್ದ, ಮಸೀದಿ ಅವರ ಮನೆಗೂ ದೂರವಿಲ್ಲ, ಅಲ್ಲಿ ಏನೇನೋ ಅನಾಹುತಗಳು ನಡೆದಿವೆಯೋ. ಅಕಸ್ಮಾತ್ ನನ್ನ ಅವರು ಇನ್ಮೇಲೆ ಬರಬೇಡ ಅಂದರೆ? ಇಲ್ಲ, ಅಕ್ಕನಿಗೆ ಇದೆಲ್ಲ ಹಾಳು 'ಗುಡ್ಡ'ವನ್ನೂ ಸಹ ನಗಾಡಿ ಒಂದೇ ಮಾತಿನಲ್ಲಿ 'ಕಡ್ಡಿ' ಮಾಡುವುದು ಗೊತ್ತಿರುತ್ತದೆ, ಏನೋ ಒಂದು ಹೇಳಿ ನಕ್ಕು ನನ್ನ ಒಳ ಕರೆದು ಛಾ ಕೊಟ್ಡುತ್ತಾಳೆ. ಅಕ್ಕನ ಬಿಟ್ಟು ಬೇರೆ ಯಾರ ಹತ್ತಿರ ಹೋಗಲಿ? ಎಂದು ಯೋಚಿಸಿ ಮನೆ ಬೀಗ ಹಾಕಿ ಅಕ್ಕನ ಮನೆ ದಾರಿ ನಡೆದೇ ಬಿಟ್ಟಳು.

ದೊಡ್ಡ ಮನೆ ಗೇಟು ಹಾಕಿದೆ. ಕಾಂಪೌಂಡ್ ನಲ್ಲಿ ಹೊಸದೊಂದು ನಾಯಿ ಓಡಾಡುತ್ತಿದೆ, ಆನೆ ಗಾತ್ರದ್ದು. ಅದನ್ನ ನೋಡಿದರೇ ಭಯ. ಗೇಟ್ ಮುಂದೆ ಸದಾ ನಕ್ಕು ಬರಮಾಡಿಕೊಳ್ಳುತ್ತಿದ್ದ ಖಾನ್ ಭಯ್ಯಾ ಕೂಡ ಇಲ್ಲ! ಬದಲಾಗಿ ಬೇರೊಬ್ಬ ಗಾರ್ಡ್ ನಿಂತಿದ್ದಾನೆ. ಅವಳ ಬುರ್ಖಾ ಕಂಡು ಅವನು "ಕ್ಯಾ ಜೀ? ಕಹಾಂ ಜಾರೆ ತುಮೀ?" ಎಂದು ಮುರುಕಲು ಹಿಂದಿಯಲ್ಲಿ ಕೇಳುತ್ತಾನೆ. ತಡವರಿಸುತ್ತ "ಅಕ್ಕ.. ಅಕ್ಕ.. ಮನಿ" ಎಂದು ಬೆರಳು ಮಾಡಿ ಏನೋ ತಪ್ಪು ಮಾಡಿ ಸಿಕ್ಕಿ ಬಿದ್ದವರಂತೆ ಹೆದರುತ್ತಾಳೆ. "ಅಕ್ಕ ನೈ, ಕೌನ್ ನೈ!.. ನಿಮ್ಮವರು ಈಕಡೆ ಬರಂಗಿಲ್ಲ ಕರಿಲೆನ ಪೊಲೀಸರನ??" ಅಂತ ಕೇಳುತ್ತ ತನ್ನ ಲಾಠಿ ತೆಗೆದು ನಡಿ ನಡಿ ಎಂದು ಕೈ ಮಾಡುತ್ತಾ ಇನ್ನೂ ಹತ್ತಿರ ಬರುತ್ತಾನೆ. ಹೆದರಿಕೆಯಲ್ಲಿ ಹುಂ... ಹುಂ ಎಂದು ಅಲ್ಲಿಂದ ಹಿಂದೆ ಬರಲು ಶುರು ಮಾಡುತ್ತಾಳೆ. ತುಸು ದೂರ ಬಂದು ಹಿಂಬದಿಯಿಂದ ಮೇಲಿನ ಕಿಟಕಿಗಳ ನೋಡಿದರೆ ಎಲ್ಲ ಹಾಕಿವೆ. ಮನೆ ಮುಂದೆ ಐದಾರು ಗಾಡಿಗಳೂ ನಿಂತಿವೆ. ಅದೇನಾಗಿದೆಯೋ ಅಲ್ಲಾಹ್! ಅಕ್ಕ, ಅಣ್ಣ ಚೆನ್ನಾಗಿದ್ರೆ ಸಾಕು. ದಾರಿಯಲ್ಲಿ ಯಾರನ್ನಾದರೂ ಅಲ್ಲೇನು ನಡೆದಿದೆ, ಎರಡು ದಿನ ಇಲ್ಲಿ ಏನೇನಾಯಿತು ಎಂದು ಕೇಳಿಬಿಡುವಾಸೆ. ಆದರೆ ಪೊಲೀಸರು, ಜನರು, ಪುಢಾರಿಗಳು, ನಮ್ಮವರು, ಬೇರೆಯವರು ಎಲ್ಲವೂ ನೆನಪಾಗಿ ಏನೂ ತಿಳಿಯದೇ ಹೆದರಿ ಗೊಂದಲದಲ್ಲಿ ಸುಮ್ಮನೆ ಮನೆಯತ್ತ ಸಾಗಿದಳು. ಮದುವೆ ಮುಗಿದ ಸಂಜೆ ಏನೂ ತಿಳಿಯದ ಆ ಇಳಿ ವಯ್ಯಸ್ಸಿ ತನ್ನನ್ನು ಸ್ವಂತ ಮನೆಯಿಂದ, ತನ್ನ ಸ್ನೇಹಿತರಿಂದ ಯಾಕೆ ತನ್ನನ್ನು ದೂರ ಅಟ್ಟುತ್ತಿದ್ದಾರೆಂದು ತಿಳಿಯದೇ ತಾನು ಅತ್ತಿದ್ದು, ಅಸಹಾಯಕ ಮುದಿಯನಂತೆ ಸುಮ್ಮನೆ ಅಳುತ್ತ ನಿಂತಿದ್ದ ತನ್ನ ಚಾಚಾ.. ಅದೆಲ್ಲವೂ ಈಗ ಮತ್ತೊಮ್ಮೆ ಘಟಿಸಿದಂತೆ ಅನಿಸಿ ಅಳು ಉಕ್ಕಿ ಬಂತು. ಮಲಿಕಸಾಬ ಮನೆಗೆ ಬಂದು ಎಲ್ಲಿ ಹೋಗಿದ್ದೆ ಅಂತ ಕೇಳಿ ಬಯ್ಯೋ ಮುನ್ನ ಮನೆ ಮುಟ್ಟಬೇಕು ಎಂದು ಕಣ್ಣು ಒರೆಸುತ್ತಾ ಜೋರಾಗಿ ನಡೆದಳು. ನಿಮಿಷಕ್ಕೊಮ್ಮೆ ತನ್ನಕ್ಕ ಹೇಗೋ ಬಂದು ಕರೆಯುವಳು ಎನಿಸಿ ಮತ್ತೆ ಮತ್ತೆ ದೊಡ್ಡಮನೆಯತ್ತ ನೋಡುತ್ತಾ ಅದರಿಂದ ದೂರ ದೂರ ನಡೆದಳು.   ಕಟ್ಟೆಯ ಮೇಲೆ ಕೂರುತ್ತಿದ್ದ  ಪುಢಾರಿಗಳು ಕಾಣಲಿಲ್ಲ, ಪೊಲೀಸ್ ವ್ಯಾನುಗಳು ಇಲ್ಲ. ಅಕ್ಕ ಪೋಲೀಸರ ಬಗ್ಗೆ ಹೇಳಿದ್ದು ನೆನಪಾಗಿ ಅಳುವಲ್ಲೇ ನಕ್ಕಳು.

ಇತ್ತ ಅವಳ ಅಕ್ಕ ಮೂರು ದಿನವಾದರೂ ಮನೆ ಕೆಡೆ ಬಾರದ ಬೂಬುಳ ದಾರಿಯನ್ನು ಕಾಯುತ್ತ ಮತ್ತೊಮ್ಮೆ  ತನ್ನ ಅಡುಗೆ ಮನೆಯ ಕಿಟಕಿಯಿಂದಾಚೆ ಗೇಟಿನತ್ತ ನೋಡಿದಳು.  

ಪೂರ್ವ ಜನ್ಮದ ಪಾಪಿ



ಭೂಮಿಯಷ್ಟನ್ನೂ ಎಷ್ಟಕ್ಕೆ ಕೊಡುವೆ ?
ಎಂದು ಕೇಳಿ ಕಿಸೆ ಮುಟ್ಟಿ ನೋಡಿಕೊಂಡ
ಹೀಗೇ ಮಾಡಬೇಕೆಂದವನಿಗೆ, ಹಾಗೆ ಮಾಡಿ ತೋರಿಸಿ 
ಕಣ್ಣಲ್ಲೇ ಕಲೆ ಮಾಡಿ ಒಡಮೂಡಿಕೊಂಡ.

ಕೊಳೆಯಾದರೆ ಆದೀತು ಒಮ್ಮೆ ಇಳಿದು ಬಿಡುವಾ
ಕೆಸರಿನಲ್ಲಿ ಕಮಲವ ಹುಡುಕಿ, ಬರಿ ಮೂಸಿ ನೋಡಿ ನಗುವಾ
ಕಣ್ಣನ್ನು ಹಿಸುಕಿ ಕನ್ನಡಕವ ಅಗಲಿಸಿ
ದೂರದ ಒಂದನ್ನು ತಾನೊಬ್ಬನ್ನೆ ಕಂಡಂತೆ ದಿಟ್ಟಿಸಿ ನೋಡುವ.

ಜೀವನವೆಂದರೆ... ಎಂದು ತಾನೇ ಕೇಳಿಕೊಂಡು
ಉತ್ತರದ ಉತ್ತರದುದ್ದಕ್ಕೂ ದಕ್ಷಿಣವ ಹುಡುಕಿ,
ಮೆದುಳಿನಲ್ಲಿ ಸಾಕಿಕೊಂಡ ಪೆಂಡ್ಯುಲಮ್ ನ ಅಲುಗಾಡಿಸಿ
ತಾನೂ ಅದರೊಡನೆ ಒಮ್ಮೆ ಅಲ್ಲಿಂದಿಲ್ಲಿಗೆ ಜೀಕಿ,
ಅದೆಲ್ಲ ಬೇಕಾಗಿಲ್ಲ, ಇದ್ದಿದ್ದನ್ನ ಕಳೆದುಕೊಂಡ ಮೇಲೆ
ಮತ್ತೆ ಅದೇನೋ ಸಿಕ್ಕುತ್ತದೆ; ಅದೇ ಬಹುಷಃ ಅದು - ಎಂದುಕೊಳ್ಳುವ ಪಾರ್ಟಿ!  

ಓಡುವವನಿಗೆ ಕಾಲುಗಳೇ ಮನೆ,
ಓದುವವನಿಗೆ ಕಾಗದಗಳೇ ಕೊನೆ
ಅಂತೆಲ್ಲ ಮಾತಾಡಿ ಮಾತನಾಡದಂತೆಯೇ ಸುಮ್ಮನಾಗಿ,
ಸುಖಾ ಸುಮ್ಮನೆ ಕುಡುಕನಂತೆ ಮಾಡುವ, ನೋಡುಗರಿಗೆ ಆಡುವ.

ಚೋಟುದ್ದ ದೇಹ, ಅರ್ಧ ಕಾಣುವ ಕಣ್ಣು 
ಅಷ್ಟಿದ್ದೂ ಸಮುದ್ರವ ಒಮ್ಮೆಲೇ ಬಾಚುವ ಹಪಾಪಿ.
ಹೇಳದೆಯೇ ಕೇಳಿಸುವ, ಕೇಳಿದರೂ ಹೇಳದಿರುವ
ಫಿಲಾಸಫಿ ಬೊಗಳಿ, ಕಣ್ಣು ಮಿಟುಕಿಸಿ ತರ್ಲೆ ನಗುವ ನಗುವ ಪೂರ್ವ ಜನ್ಮದ ಪಾಪಿ!  

-ಗೆಳೆಯನೊಬ್ಬನ ಮೇಲೆ ಬರೆದದ್ದು. 


Friday, January 5, 2018

ಕಣ್ಣು ಬಿಟ್ಟು ನೋಡಿ, ಬೇಜಾನ್ ಇದೆ ಮ್ಯಾಟ್ರು





ಹತ್ತು ವರ್ಷದಿಂದ ಬೆಂಗಳೂರಲ್ಲೇ ಪಾನಿಪುರಿ ಮಾರಿಕೊಂಡಿದ್ದ ಬಿಹಾರಿ ಹುಡುಗನಿಗೆ ಕನ್ನಡ ಬರೋದಿಲ್ಲ,  ಸ್ವಲ್ಪ ಮಳೆ ಆದ್ರೆ ಸಾಕು ಈ ಹಾಳಾದ್ದು ಓಲಾ, ಉಬರ್ ಗಾಡಿಗಳೇ ಸಿಗಲ್ಲ, ಆಫೀಸ್ ಕೆಲಸ -ಟ್ರಾಫಿಕ್ ಜಾಮ್ ಗಳಲ್ಲಿ ಸಿಕ್ಕಿ ಈಗೀಗ ಪರ್ಸನಲ್ ಟೈಮ್ ಅಂತನೇ ಸಿಗಲ್ಲ, ಆಫೀಸ್ ನಲ್ಲಿ ಆ ಬಿಳಿ ಹುಡುಗಿ ಮುಂದೆ ಎಷ್ಟು ಓಡಾಡಿ ಸತ್ರುನೂ ಅವಳು ನನ್ನ ಮುಸುಡಿ ನೋಡಲ್ಲ, ಬೆಳಿಗ್ಗೆ ಎದ್ರೆ ನಲ್ಲೀಲಿ ನೀರು ಬರಲ್ಲ, ನೀರು ಬಂತು ಅಂತ ಬಾತ್ರೂಮ್ ನಲ್ಲಿ ಹೋಗಿ ಕುಂತ್ರೆ ಬರಬೇಕಾಗಿರೋದು ಬರಲ್ಲ, ಮಳೆ ಬಂದ್ರೆ ಕೆರೆ ತುಂಬಲ್ಲ, ಎಲೆಕ್ಷನ್ ಬಂದ್ರೆ ಹಳ್ಳ ಮುಚ್ಚಲ್ಲ, ಮೋದಿಗೆ ನಿದ್ದೆ ಬರಲ್ಲ, ಸಿದಣ್ಣಂಗೆ ಎಚ್ಚರ ಆಗಲ್ಲ! ಅಬ್ಬಾ!! ಎಷ್ಟೊಂದು ಸಮಸ್ಯೆಗಳು ನಮಗೆ, ಜಗತ್ತಲ್ಲಿ ಎಲ್ಲಾ ಕಷ್ಟಗಳೂ ನಮಗೆ ಇವೆ. ಸಾಕಷ್ಟು ಟೆನ್ಶನ್ ಆಗ್ಲೇ ಇವೆ, ಲಕ್ಷಗಟ್ಟಲೆ ಲೋನು, ಮನೆ ಜವಾಬ್ದಾರಿ, ಆಫೀಸ್ ನಲ್ಲಿ ಬಾಸ್, ಮನೇಲಿ ಹೆಂಡತಿ. ಇಷ್ಟಾಗಿಯೂ ಮತ್ತೆ ಡೈಲಿ ಬೇಸಿಸ್ ಮೇಲೆ ಹೊಸ ಹೊಸ ಸಣ್ಣ-ದೊಡ್ಡ  ವಿಷಯಗಳ ಚಿಂತೆಗಳು ಯಾಕೆ ಬರ್ತಾನೆ ಹೋಗತ್ತೆ? ಯಾಕೆ ಇಷ್ಟು ಒತ್ತಡ, ಚಿಂತೆ, ಹತಾಶೆ ನಮಗೆ? ಇನ್ನ ಸರಿಯಾಗಿ ಮೂವತ್ತು ತುಂಬಿಲ್ಲ, ಆದ್ರೂ ಜಗತ್ತೇ ತಲೆ ಮೇಲೆ ಬಿದ್ದಂತೆ ಯಾಕೆ ನಾವು? ಪ್ರತೀ ಮಾತು 'ಅಯ್ಯೋ.. ' ಅಂತಾನೆ ಶುರು ಆಗೋದು, ಪ್ರತೀ ಗುರಿಯು ದಾರಿ ಲೆಕ್ಕದಲ್ಲೇ ಮಂಜಾಗೋದು, ಮಲ್ಕೊಂಡ್ರೆ  ಬೆನ್ನು ನೋವು, ಕೂತ್ರೆ ಅಂಡ್ ನೋವು ಅಂತೀವಿ. ನಾವೆಲ್ಲಾ ಬಿಸಿ ರಕ್ತದ ಯುವಕರು, ನಮ್ದು ಒಂದು ಬಾಳು!

ಇಂಥ ಸಮಸ್ಯೆ ಅಲ್ಲದ ಸಮಸ್ಯೆಗಳಿಗೆ, ಖಾಲಿ ಪೀಲಿ ಚಿಂತೆಗಳಿಗೆ ನಾವು ದುರ್ಬಲರಾಗಿರೋದು ಏನಕ್ಕೆ ಅಂತ ಅಂದ್ರೆ ಅದಕ್ಕೆ ಸಾವಿರ ಕಾರಣಗಳು, ನಮ್ಮಲ್ಲಿನ ಅಧೈರ್ಯ, ಕಂಪ್ಲೈನ್ ಮಾಡುವ ಮನೋಭಾವ, ದಾರಿದ್ರ್ಯ ಇತ್ಯಾದಿ ಇತ್ಯಾದಿ. ಇವೆಲ್ಲವುಗಳಿಗಿಂತ ದೊಡ್ಡದು ಒಂದಿದೆ ಅದೇನೆಂದರೆ, 'ದೃಷ್ಟಿಕೋನದ ಕೊರತೆ', ಹೌದು! ಆಂಗ್ಲದಲ್ಲಿ 'ಲ್ಯಾಕ್ ಆಫ್ ಪರ್ಸ್ಪೆಕ್ಟಿವ್ಸ್' ಅಂತಾರೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಗೋಚರಿಸಬಹುದು, ನಮಗೆ ದೃಷ್ಟಿಕೋನಗಳ ಕೊರತೆ ಇರುವುದರಿಂದಲೇ ಬಾವಿಯ ಕಪ್ಪೆಯಂತೆ ಒಂದೇ ಕೋನದಲ್ಲಿ ವಿಚಾರ ಮಾಡಿ ಬಾಯಿ ಬಡಿದುಕೊಳ್ಳುವುದು ನಾವು. ಜೀವನದಲ್ಲಿ ದೃಷ್ಟಿಕೋನ ಸಂಪಾದಿಸುವುದು ತುಂಬಾ ಮುಖ್ಯ, ದೃಷ್ಟಿಕೋನಗಳಿರುವವನಿಗೆ ವಿಷಯಗಳ ಬಗ್ಗೆ ಒಂದು ಪ್ರೌಢ ಮನೋಭಾವ ಇರುತ್ತದೆ, ಬಂದ ಸಮಸ್ಯೆಗಳನ್ನು ಕಾಣುವ ನೋಟ, ವಿಧಾನ ಗೊತ್ತಿರುತ್ತದೆ, ವಿಷಯದ ಬಗ್ಗೆ ತರ್ಕಿಸಿ, ಹೋಲಿಸಿ ನೋಡಿ ಅದರ ಬಗ್ಗೆ ಒಂದು ಸರಿಯಾದ  ಐಡಿಯಾ ಪಡೆಯುವ ಕೌಶಲ್ಯ ಇರುತ್ತದೆ. ದಿನಾ ಇದೆ ಕಥೆ, ಇಷ್ಟೊಂದು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಸಾಯಬೇಕು ಅಂತ ನಮ್ಮಲ್ಲೇ ಅನ್ಕೊಂಡು ಕುಂತ್ರೆ ವಿಷಯ ದೊಡ್ಡದಾಗೇ ಕಾಣಿಸಿ ಮನಸು ಹಾತಾಶವಾಗುತ್ತೆ ಅಷ್ಟೇ. ಪ್ರಯಾಣಿಸೋ ಮುನ್ನ ಟ್ರಾಫಿಕ್ ಎಲ್ಲೆಲ್ಲಿ ಇದೆ, ಹೇಗೆ ರೂಟ್ ಬದಲಾಯಿಸಿ ನೋಡಬಹುದು, ಬೇರೆ ಪ್ರಯಾಣಿಕರೆಲ್ಲ ಹೇಗೆ ಪ್ಲಾನ್ ಮಾಡುತ್ತಿದ್ದಾರೆ, ಅಷ್ಟಕ್ಕೂ ಯಾಕೆ ಆ ರೂಟ್ ನಲ್ಲಿ ಇಷ್ಟು ಟ್ರಾಫಿಕ್ ಆಗ್ತಾ ಇರೋದು ಅಂತೆಲ್ಲ ನೋಡಿದರೆ ಸಮಸ್ಯೆಯ ಸುತ್ತ ಒಂದು ಕಲ್ಪನೆ ಬರುತ್ತದೆ. ಆಗ ಅದರ ಬಗ್ಗೆ ಕಂಪ್ಲೈನ್ ಮಾಡುವ ಬದಲು ಅದರಿಂದ ತಪ್ಪಿಸಿಕೊಳ್ಳಲು ಯೋಚಿಸಬಹದು. ಮೆಟ್ರೋ ಲೈನ್ ಕಟ್ಟುವ ಸಲುವಾಗಿ ಸಮಸ್ಯೆ ಆಗುತ್ತಿದ್ದರೆ, ಅದು ಸಧ್ಯಕ್ಕೆ ನಮಗೆ ಕಷ್ಟ ಆದ್ರೆ ಮುಂದೆ ಇದರಿಂದ ತುಂಬಾ ಸಹಾಯ ಆಗುತ್ತದೆ ಅಂತ ಒಂದು ಸಮಾಧಾನ ಸಿಗಬಹುದು. ತೀರಾ ಸಣ್ಣ ವಿಷಯದ ಉದಾಹರಣೆ ಇದು, ಇದರಂತೆ ಪ್ರತಿಯೊಂದು ಸಣ್ಣ, ದೊಡ್ಡ ಸಮಸ್ಯೆಗೂ ಸಾವಿರ ದೃಷ್ಟಿಕೋನಗಳು ಇರುತ್ತವೆ, ಸುತ್ತ ಮುತ್ತಲೂ ನೋಡಿ, ಓದಿ, ಬೇರೆ ಬೇರೆ ದಾರಿಗಳಿಂದ ವಿಚಾರಿಸಿ ದೃಷ್ಟಿಕೋನಗಳ ಗಮನಿಸಿದರೆ ಆ ಸಮಸ್ಯೆ ಬರೀ ಒಂದು ಸಮಸ್ಯೆ ಆಗಿರದೆ ಒಂದು ಅವಕಾಶವಾಗಿಯೂ ಕಾಣಿಸಬಹುದು. ಉದಾಹರಣೆಗೆ ಮೊನ್ನೆ ನನಗೆ ಹೋಂ ಲೋನ್ ಕೊಟ್ಟಿರೋ ಬ್ಯಾಂಕ್ ನವರು ಯಾವುದೋ ಒಂದು ಎಕ್ಸ್ಟ್ರಾ ಡಾಕ್ಯುಮೆಂಟ್ ಬೇಕು ಅಂತ ವಾರಗಟ್ಟಲೆ ಫೋನ್ ಮಾಡಿ ತಲೆ ತಿಂದಾಗ ನನಗೆ ರೇಗಿ ಹೋಗಿತ್ತು, ಸಾಲ ತಗೊಂಡು ಮೂರು ವರ್ಷ ಆಯಿತು, ಆಗಲೇ ಅಷ್ಟು ದುಡ್ಡು ತುಂಬಿದ್ದೀನಿ, ಸಾವಿರ ಕೆಲಸ ಇರ್ತವೆ ಮಾಡೋಕೆ, ನೀವು ಯಾವಾಗ ಬೇಕೋ ಆಗ ಫೋನ್ ಮಾಡಿ ಹೊಸ ಹೊಸ ಪೇಪರ್ ಕೇಳಿದ್ರೆ ಹೇಗೆ? ಅದನ್ನ ಪಡೆಯೋಕೆ, ನಿಮಗೆ ಕೊಡೋಕೆ ಎಷ್ಟೊಂದು ಸಮಯ, ಪ್ರಯತ್ನ ಬೇಕು ಅದೆಲ್ಲ ನೀವೇ ಮಾಡಿಕೊಂಡರೆ ಆಗಲ್ಲವೇ? ಅಂತೆಲ್ಲ ಬೈದೆ. ಸರ್ಕಾರದ ಆಜ್ಞೆ ಅನುಸಾರವಾಗಿ ಇದು ಬೇಕೇ ಬೇಕು ಅಂತ ಅವರು ಹೇಳಿದಾಗ ಸರಕಾರಕ್ಕೂ ಅರ್ಧ ಘಂಟೆ ಬೈದುಕೊಂಡೆ. ಕಡೆಗೆ ಇದರ ಬಗ್ಗೆ ಇಂಟರ್ನೆಟ್ ನಲ್ಲಿ ಓದಿ, ಸ್ನೇಹಿತರ ಜೊತೆ ಮಾತಾಡಿ, ಕಸ್ಟಮರ್ ಕೇರ್ ಅದು ಇದು ಅಂತ ಕೇಳಿ ನೋಡಿದಾಗ ತಿಳೀತು ನಾನು ತುಂಬುತ್ತಿದ್ದ ಬಡ್ಡಿ ದರ ತುಂಬಾ ಜಾಸ್ತಿ ಇತ್ತು, ಈಗ ಅದನ್ನು ಈ ಡಾಕ್ಯುಮೆಂಟ್ ಕೊಡುವಾಗ ರಿಕ್ವೆಸ್ಟ್ ಮಾಡಿಕೊಂಡು ಕಮ್ಮಿ ಮಾಡಿಸಿಕೊಳ್ಳಬಹುದು ಅಂತ. ಒಂದು ಶನಿವಾರ ಹೋಗಿ ಎಲ್ಲ ಕೆಲಸಗಳನ್ನ ಮುಗಿಸಿದೆ, ಅದರಿಂದ ಸುಮಾರು ಆರು ನೂರು ರೂಪಾಯಿ ಪ್ರತಿ ತಿಂಗಳು ಬಡ್ಡಿ ಕಡಿಮೆ ಆಯಿತು. ಮೂರು ವರ್ಷದಿಂದ ಆ ಲೋನ್ ಅಕೌಂಟ್ ಬಗ್ಗೆ ತಲೇನೆ ಕೆಡಿಸಿಕೊಳ್ಳದೆ ಬಡ್ಡಿ ತುಂಬಿಕೊಂಡು ಹೋಗ್ತಾ ಇದ್ದ ನನಗೆ ಈ ಒಂದು 'ಕಿರಿಕಿರಿ' ಯಿಂದಲೇ ಅದನ್ನು ರೀವಿಸಿಟ್ ಮಾಡಲು ಒಂದು ಅವಕಾಶ ಸಿಕ್ಕಿತು. ಅಕ್ಕ ಪಕ್ಕ ಮಾತಾಡಿ ನೋಡಿ, ವಿಷಯದ ಬಗ್ಗೆ ಓದಿ, ಕೆಲ ಬ್ಯಾಂಕರ್ ಸ್ನೇಹಿತರೊಡನೆ ಚರ್ಚಿಸಿದಾಗ ಇದನ್ನು ಲಾಭದಾಯಕವಾಗಿ ಹ್ಯಾಂಡಲ್ ಮಾಡುವ ದಾರಿ ತಿಳಿಯಿತು. ಬೇರೆ ಬೇರೆ ದೃಷ್ಟಿಕೋನಗಳಿಂದ ಹೇಗೆ ಪ್ರತಿಯೊಂದು ವಿಷಯವನ್ನು ಎಲ್ಲಾ ಮೂಲೆಗಳಿಂದ ಕಂಡು, ತಿಳಿದುಕೊಂಡು, ಪೂರಕವಾಗಿ ಪ್ರತಿಕ್ರಿಯಿಸಬಹುದು ಅನ್ನೋದು ಇಂತಹ ಸಣ್ಣ ಪುಟ್ಟ ಉದಾಹರಣೆಗಳಿಂದ ಹೇಳ ಹೊರಟೆ ಅಷ್ಟೇ.

ಆಯ್ತು ಕಣಪ್ಪ ದೃಷ್ಟಿ ಕಣ್ಣಪ್ಪ!  ಈ 'ದೃಷ್ಟಿಕೋನ ಸಂಪಾದನೆ' ಅಂದ್ಯಲ್ಲ, ಅದನ್ನ ಹೇಗೆ ಮಾಡೋದು ಅಂತ ಹೇಳು ಅಂದ್ರಾ? ಸಿಂಪಲ್! ನಮ್ಮ ಸುತ್ತ ಮುತ್ತಲಿನ ಸಮಾಜದ ಬಗ್ಗೆ, ಆಗು ಹೋಗುಗಳ ಬಗ್ಗೆ, ಜನರ ಬಗ್ಗೆ, ವಿಷಯಗಳ ಬಗ್ಗೆ  ಅರಿವು ಪಡೆಯುತ್ತ ಇರಬೇಕು. ಪುಸ್ತಕಗಳು, ಕಥೆ-ಕಾದಂಬರಿಗಳನ್ನ ಓದುವುದರಿಂದ ಒಂದು ಪ್ರೌಢಿಮೆ ಬರುವುದಂತೂ ಖಚಿತ. ಟಿ.ವಿ, ಸಿನಿಮಾ ಗಳನ್ನೂ ನೋಡಿಯೂ ಅದೆಷ್ಟೋ ಕಲಿಯಬಹುದು, ಹೇಗೆ ಎಲ್ಲವನ್ನು ಹಾಸ್ಯ ದಿಂದ ನೋಡಬಹುದು ಅಂತ ಹಾಸ್ಯ ಧಾರಾವಾಹಿಗಳಲ್ಲಿ (ಇಂಗ್ಲಿಷ್ ನಲ್ಲಿ ಸಿಟ್ಕಾಮ್ ಗಳು), ಹಾಸ್ಯ ಸಿನಿಮಾಗಳ ನೋಡಿ, ಹಾಸ್ಯ ಕಾರ್ಯಕ್ರಮಗಳನ್ನು ನೋಡಿ ತಿಳಿಯಬಹುದು. ಚಿಕ್ಕವರಿದ್ದಾಗ ಕಾಲು ಜಾರಿ ಬಿದ್ದರೆ ಅಳುತ್ತಿದ್ದ ನಾವು ಈಗ ಬಿದ್ದರೆ ನಗುತ್ತೇವೆ, ಅಂಥ ಸಣ್ಣ ವಿಷಯವನ್ನು ಪ್ರೌಢರಾಗಿ, ಹಾಸ್ಯವಾಗಿ ಕಂಡು ಅದನ್ನು ಹಗುರವಾಗಿ ನೋಡಿ ನಕ್ಕು ಬಿಡುತ್ತೇವೆ, ಹಾಗೆಯೇ ಇನ್ನು ಸಾಕಷ್ಟು ವಿಚಾರಗಳಲ್ಲಿ ನಮಗೆ ತಿಳಿಯದಲೇ ಬಹಳಷ್ಟು ದೃಷ್ಟಿಕೋನಗಳ ಸಂಪಾದಿಸಿ ನಿರ್ವಹಿಸುತ್ತಿರುತ್ತೇವೆ, ಅದನ್ನೇ ಸ್ವಲ್ಪ ಸೀರಿಯಸ್ ಆಗಿ ತಗೊಂಡು ಇವೆಲ್ಲವುಗಳ ಮೇಲೆ ಜಾಸ್ತಿ ಒತ್ತು ಕೊಟ್ಟು ಓದಿ, ನೋಡಿ, ಕಲಿತು ಬಾಳಿದರೆ ಪ್ರತಿ ದಿನವೂ ನಗಲು, ಯೋಜಿಸಲು, ಗೆಲ್ಲಲು ಒಂದು ಅವಕಾಶವೇ. ಭಾರತದಲ್ಲಿ ಸ್ಲಂ ಗಳಿವೆ, ಎಷ್ಟೋ ಜನಕ್ಕೆ ಮನೆ ಇಲ್ಲ, ಊಟ ಸಿಗಲ್ಲ ಅಂತ ಹೇಳುತ್ತಿದ್ದ ನನ್ನ ಹೊರದೇಶದ ಸ್ನೇಹಿತರಿಗೆ ಬರೀ ನಮ್ಮ ದೇಶದ ಸಂಸ್ಕೃತಿ, ಪದ್ಧತಿಗಳ ಬಗ್ಗೆ ಮರುತ್ತರ ನೀಡಿ, ಅವುಗಳ ಮುಂದೆ ಎಷ್ಟೇ ದೊಡ್ಡವಾದರೂ ಅಮೆರಿಕಾ, ಆಸ್ಟ್ರೇಲಿಯಾಗಳೇನು ಇಲ್ಲ ಅಂತ ಜಗಳವಾಡುತ್ತಿದ್ದೆ ನಾನು. ನಮ್ಮ ಸಮಸ್ಯೆಗಳನ್ನು ಸಮಸ್ಯೆಗಳೆಂದು ಅರ್ಥ ಮಾಡಿಕೊಂಡು, ಒಪ್ಪಿಕೊಂಡಾಗಲೇ ಅವುಗಳ ಬಗ್ಗೆ ಅರಿವು ಮೂಡಿದ್ದು, ನಾನು ಸ್ಟುಪಿಡ್ ನಿಂದ ಲರ್ನೆಡ್ ಆಗಿದ್ದು. ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳಲೂ ತುಂಬಾ ದೃಷ್ಟಿಕೋನ ಬೇಕು, ನಮ್ಮ ಮೂಗಿನ ನೇರಕ್ಕೆ ಯೋಚಿಸಿದಾಗಲೇ ಜಗಳ, ಹೊಡೆದಾಟಗಳು ಆಗೋದು. ನಮ್ಮ ದೇಶದಲ್ಲಿ ಹಿಂದುತ್ವ ನೇ ದೊಡ್ಡದು ಅದಕ್ಕಿಂತ ಬೇರೇನಿಲ್ಲ ಅನ್ನೋದು ಒಂದು ವಾದವಾದರೆ , ನಮ್ಮ ದೇಶ ಒಂದು ಪ್ರಜಾಪ್ರಭುತ್ವ ಅಂತ ಇನ್ನೊಂದು ಮಾತು, ಹಸು ದೇವರು ಅಂತ ಒಬ್ರು ಹೇಳಿದ್ರೆ, ಎಮ್ಮೆನೂ ದೇವರೇ ಸೃಷ್ಟಿಸಿದ್ದು ಸ್ವಾಮೀ ಅಂತ ಇನ್ನೊಬ್ರು ಅಂದ್ರಂತೆ, ರಾಮಾಯಣ ನ ರಾವಣನ ದೃಷ್ಟಿಕೋನದಲ್ಲಿ ಬರೆದ ಪುಸ್ತಕ ಓದಿ ದಿಗ್ಭ್ರಮೆ ಆಗತ್ತೆ, ನಂದಿ ಬೆಟ್ಟ ಏರೋವಾಗ ಕಿರಿಕಿರಿ ಎನಿಸಿ ತಲೆ ನೋವು ತರಿಸುವ ರಸ್ತೆ ತಿರುವುಗಳು, ಜನ ಜಂಗುಳಿ,  ಬೆಟ್ಟದ ಮೇಲಿಂದ ನೋಡಿದರೆ ತುಂಬಾ ಸಣ್ಣದಾಗಿ ಕಾಣುತ್ತವೆ, ವಾರದ ಹಿಂದೆ ಕೆಲಸದಲ್ಲಿ ಆಸಕ್ತಿ ಬರ್ತಿಲ್ಲ ಅಂತ ಅಂತಿದ್ದ ನನಗೆ ಗ್ಲೋಬಲ್ ರಿಸೆಶನ್ ಬಗ್ಗೆ ತಿಳಿದಮೇಲೆ ಹಠಾತ್ ಆಸಕ್ತಿ ಹುಟ್ಟಿದೆ, ನಮ್ಮ ಮಗ ಮದುವೆ ಬಗ್ಗೆ ಆಸಕ್ತಿನೇ ತೋರಿಸ್ತಿಲ್ಲ ಅಂತ ಬೈದುಕೊಂಡಿದ್ದ ನಮ್ಮ ಅಪ್ಪ ಅಮ್ಮನಿಗೆ ಪಕ್ಕದ್ಮನೆ ಹುಡುಗ ಓಡಿ ಹೋಗಿ ಮದುವೆ ಆದಮೇಲಿಂದ ನನ್ನ ಮೇಲೆ ಜಾಸ್ತಿ ಪ್ರೀತಿ ಬಂದಿದೆ, ಬಲ ಹುಬ್ಬು ಬಡಿದುಕೊಳ್ಳಬಾರದು ಅನ್ನೋ ನಮ್ಮಜ್ಜಿಗೆ ಅದು ಏಕೆ ಬಡಿದುಕೊಳ್ಳುತ್ತದೆ ಅಂತ ವೈಜ್ಞಾನಿಕ ಕಾರಣ ತಿಳಿದ ಮೇಲೆ ಮೌಢ್ಯ ಕಮ್ಮಿ ಆಗಿದೆ, ಪಾನಿಪುರಿ ಹುಡುಗ ಕೂಡ ಕನ್ನಡ ಮಾತಾಡ್ಬೇಕು ಅಂತ ಒಬ್ಬ ಅಂದ್ರೆ, ಕನ್ನಡ ಒಂದು ಭಾಷೆ ಅಷ್ಟೇ ಅದಕ್ಕಿಂತ ದೊಡ್ಡದು ಜೀವನ ,ಮನುಷ್ಯತ್ವ ಅಂತ ಇನ್ನೊಬ್ಬ ಹೇಳ್ತಾನೆ, ಓಲಾ-ಉಬರ್ ಸಿಗ್ತಿಲ್ಲಾ ಅಂತ ಬೈಕೊಳೋ ನನಗೆ ಬಿ.ಎಂ.ಟಿ.ಸಿ ನಲ್ಲಿ ನೇತಾಡಿಕೊಂಡು ಹೋಗುವವವರ ನೋಡಿ ಒಂದು ರೇಂಜ್ ಗೆ ಜೀವನ ಅರ್ಥವಾಗಿದೆ, ಆ ಆಫೀಸ್ ಬೆಡಗಿ ಹುಡುಗಿ ನನ್ನ ನೋಡಲ್ಲ ಅಂತ ದೇವದಾಸ ಆಗಿದ್ದ ನನಗೆ ಅವಳ ಹಿಂದೆ ನನ್ನಂತೆ ಸಾವಿರ ಹುಡುಗರು ಓಡಾಡಿಕೊಂಡಿದ್ದನ್ನು ಗಮನಿಸಿದ ಮೇಲೆ ಅವಳ ಮೇಲೆ ಕನಿಕರ ಹುಟ್ಟಿದೆ, ಟ್ರಾಫಿಕ್ ಜಾಮ್ ಗಳ ಬಗ್ಗೆ  ಬಾಯಿ ಬಡಿದುಕೊಳ್ಳುತ್ತಿದ್ದ ನನಗೆ ಮನೆ ತಲುಪಲು ಅದೆಷ್ಟೋ ಹೊಸ ಹೊಸ ಪರ್ಯಾಯ ಮಾರ್ಗಗಳು ಕಂಡಿವೆ, ಮೋದಿ, ಸಿದ್ದಣ್ಣರ ನೆನೆಸೋ ಮೊದಲು ನನಗೆ ನನ್ನ ಏರಿಯಾ ಕಾರ್ಪೊರೇಟರ್, ನನ್ನ ಊರಿನ ಉತ್ಸುವಾರಿ ಸಚಿವರು ನೆನಪಾಗಿ ಅವರನ್ನು ತಲುಪಲು ಪ್ರಕ್ರಿಯೆಗಳು ಕಾಣಿಸುತ್ತಿವೆ.. ಇವೆಲ್ಲವುಗಳೂ ದೃಷ್ಟಿಕೋನಗಳಿಂದಲೇ ಲಭಿಸುವುದು. ಕ್ಲೋಸ್ಡ್ ಮೈಂಡ್ ನಿಂದ ಏನು ನೋಡಿದರೂ ಅದು ಕಿರಿಕಿರಿಯೇ, ಬಾವಿಯಲ್ಲಿರೋ ಕಪ್ಪೆಗೆ ಏನು ಗೊತ್ತು ಟಿ.ವಿ ನೈನ್  ಕೊಳವೆ ಬಾವಿಯ ಬ್ರೇಕಿಂಗ್ ನ್ಯೂಸ್. ಕಣ್ಣು, ಕಿವಿ, ಮನಸ್ಸನ್ನು ತೆರೆದಿಟ್ಟುಕೊಂಡು ನೋಡಿದರೆ ಪ್ರತಿ ವಿಷಯವಯೂ ಒಂದು ಕಲಿಯೋ ಹಾಗೂ ಬೆಳೆಯೋ ಅವಕಾಶ.  ನಮ್ಮ ಮೂಗಿನ ನೇರಕ್ಕಷ್ಟೇ ನೋಡದೆ, ಪರರ ಮೂಗಿನ ಸೊಟ್ಟತನಕ್ಕೂ ನೋಡಿ ತಿಳಿದುಕೊಳ್ಳೋಣ. ಎಲ್ಲರಿಗೂ ಒಳ್ಳೇದಾಗ್ಲಿ, ಅವೆಲ್ಲ ಮಾಡಿ, ಏನೋ ಒಂದು ಆಗ್ತದೆ. 

    




            
      

ಗುರುದೇವ್ ಹೊಯ್ಸಳ - ಇಷ್ಟವಾಯಿತು. ಹೇಗೆ, ಏನು, ಎತ್ತ...

ನಾವು ಸಿನೆಮಾ ಹಾಲಿನ ಕತ್ತಲಲ್ಲಿ ಕುಳಿತಾಗ, ತೆರೆ ಮೇಲೆ ತೋರಿಸುವ ಬೆಳಕಿನಾಟವೊಂದನ್ನೇ ಎದುರು ನೋಡುತ್ತೇವೆ. ಕೆಲವೊಂದಷ್ಟು ಕಾರಣಗಳಿಗಾಗಿ ಆ ಕತ್ತಲ ಮೊರೆ ಹೋಗಿರುವ ನಾವು,...